Tuesday, 3 December 2013

ಚಿತ್ರಹಿಂಸೆಗೆ ಅಂಜದೆ ಹೋರಾಡುತ್ತಿರುವ ದಿಟ್ಟೆ!

ಚಿತ್ರಹಿಂಸೆಗೆ ಅಂಜದೆ ಹೋರಾಡುತ್ತಿರುವ ದಿಟ್ಟೆ!

ಭಾವತೀರಯಾನ- ಎ.ಆರ್.ಮಣಿಕಾಂತ್


ನಾವೀಗ ಬದುಕುತ್ತಿರುವುದು, ಬಹಳ ಮುಂದುವರಿದಿದೆ ಎನ್ನಲಾದ 21ನೇ ಶತಮಾನದಲ್ಲಿ. ತಾಂತ್ರಿಕ ಸಾಧನೆ, ಹಣ ಸಂಪಾದನೆ ಹಾಗೂ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ನಾವು ಬಹಳ ಮುಂದುವರಿದಿದ್ದೇವೆ. ಆದರೆ, ಮಹಿಳೆಯನ್ನು ಶೋಷಿಸುವ, ಜಾತಿ ಪದ್ಧತಿಯನ್ನು ಆಚರಿಸುವ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟ ಪದ್ಧತಿಗಳನ್ನು ಬೆಂಬಲಿಸುವ ಕೆಲಸವನ್ನು ಹಲವರು ಈಗಲೂ ತುಂಬ ಶ್ರದ್ಧೆಯಿಂದ ಉಳಿಸಿಕೊಂಡು ಬಂದಿದ್ದಾರೆ. ಇಂಥ ಜನ, ಸಮಾನತೆ ಬಯಸುವ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ, ಅನ್ಯಾಯವನ್ನು ಪ್ರತಿಭಟಿಸುವ ಹೆಂಗಸರನ್ನು ಅನುಮಾನದಿಂದ ನೋಡುತ್ತಾರೆ. ಅವರನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರೆ. ಅವಕಾಶ ಸಿಕ್ಕಾಗ ಹೊಡೆದೂ ಬಿಡುತ್ತಾರೆ. ಆನಂತರ-ನ್ಯಾಯ ಬೇಕೇನೆ ನಿಂಗೆ ನ್ಯಾಯಾ? ಎಂದು ಅಬ್ಬರಿಸುತ್ತಾರೆ. ಅಂಥವರ ಕ್ರೌರ್ಯಕ್ಕೆ ದಶಕದಿಂದ ತುತ್ತಾದರೂ ಹೆದರದೆ, ನ್ಯಾಯಕ್ಕಾಗಿ ಪಟ್ಟುಬಿಡದೆ ಹೋರಾಡುತ್ತಿರುವ ಚಿತ್ರಲೇಖಾ ಎಂಬ ದಿಟ್ಟೆಯ ಹೋರಾಟದ ಬದುಕಿನ ಕಥೆಯ ವಿವರಣೆ ಇಲ್ಲಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ಸೇರಿದ ಪಯ್ಯನ್ನೂರ್ ಎಂಬ ಊರಿನವಳು ಚಿತ್ರಲೇಖಾ. ದಲಿತ ಕುಟುಂಬದವಳು ಎಂಬ ಕಾರಣದಿಂದ ಅವಳ ಮನೆ ಊರಿಂದ ಹೊರಗಿತ್ತು. ತನ್ನ ಬಾಲ್ಯ ಮತ್ತು ಬದುಕನ್ನು ನೆನಪಿಸಿಕೊಂಡು ಚಿತ್ರಲೇಖಾ ವಿಷಾದದಿಂದ ಹೇಳುತ್ತಾಳೆ: 'ಇಡೀ ಊರಲ್ಲಿ ದಲಿತ ಕುಟುಂಬ ಅಂತ ಇದ್ದುದು ನಾವು ಮಾತ್ರ... ಜಾತಿಯ ಲೆಕ್ಕಾಚಾರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಐವತ್ತಕ್ಕೂ ಹೆಚ್ಚು ಕುಟುಂಬಗಳು ನಮ್ಮ ಊರಲ್ಲಿದ್ದವು ನಿಜ. ಆದರೆ, ಅವರೆಲ್ಲ ನಮ್ಮನ್ನು ಹಿಂದುಳಿದವರಲ್ಲಿಯೇ ಹಿಂದುಳಿದವರು ಎಂದು ಕರೆಯುತ್ತಿದ್ದರು. ಪರಿಣಾಮ, ಕೆರೆಯಿಂದ ಅಥವಾ ಊರ ಬಾವಿಯಿಂದ ನೀರು ತರುವ ಸ್ವಾತಂತ್ರ್ಯವೂ ನಮಗಿರಲಿಲ್ಲ. ಮನೆಗೆ ನೀರು ಬೇಕೆಂದರೆ, ಬಾವಿಯಿಂದ ತುಂಬ ದೂರದಲ್ಲಿಯೇ ಬಿಂದಿಗೆ ಇಟ್ಟು, ಸ್ವಾಮೀ, ನಮಗೆ ನೀರು ಬೇಕು ಎಂದು ಕೂಗಬೇಕಿತ್ತು. ಆಗ ಬಾವಿಯ ಬಳಿ ಇದ್ದವರು ನೀರು ತಂದು ನಮ್ಮ ಬಿಂದಿಗೆಗೆ ಎತ್ತರದಿಂದ ಸುರಿಯುತ್ತಿದ್ದರು. ಇದನ್ನೆಲ್ಲ ಕಂಡಾಗ ತುಂಬಾ ಸಂಕಟವಾಗುತ್ತಿತ್ತು. ಊರಲ್ಲಿರುವ ಬೇರೆ ಯಾರಿಗೂ ಹೀಗೆ ಮಾಡಲ್ಲ. ನಮಗೆ ಮಾತ್ರ ಯಾಕೆ ಹೀಗೆ ಮಾಡ್ತಾರೆ ಎಂದು ಅಮ್ಮನನ್ನು, ಅಜ್ಜಿಯನ್ನು ಪ್ರಶ್ನಿಸುತ್ತಿದ್ದೆ. ಅವರು-'ದೊಡ್ಡವರ ಇಂಥ ಕ್ರಮದಿಂದ ನಮಗೆ ಬಾವಿಯಿಂದ ನೀರು ಸೇದುವ ಶ್ರಮವೇ ತಪ್ಪಿಹೋಗಿದೆ. ಅದಕ್ಕಾಗಿ ಖುಷಿಪಡು ಮಗಳೇ' ಎಂದು ಹೇಳಿ ಮಾತು ತೇಲಿಸುತ್ತಿದ್ದರು.
ನನಗೆ ಐದು ವರ್ಷ ಆಗಿದ್ದಾಗಲೇ ನಮ್ಮ ತಂದೆ ಮನೆಯಿಂದ ಓಡಿ ಹೋದ. ಪರಿಣಾಮ, ಮೂರು ಮಕ್ಕಳನ್ನು ಸಾಕುವ ಹೊಣೆ ಅಮ್ಮನ ಹೆಗಲಿಗೆ ಬಿತ್ತು.ಅಮ್ಮ, ಶ್ರೀಮಂತರ ಜಮೀನಿನಲ್ಲಿ ಕೂಲಿಗೆ ಹೋದಳು. ನಮ್ಮನ್ನು ಶಾಲೆಗೆ ಸೇರಿಸಿದಳು. ಶಾಲೆಯಲ್ಲಿ, ಜೊತೆಗಿದ್ದ ವಿದ್ಯಾರ್ಥಿಗಳು ನನ್ನನ್ನು ಮುಟ್ಟುತ್ತಿರಲಿಲ್ಲ. ಒಂದು ಮೂಲೆಯಲ್ಲಿ ವರ್ಷವಿಡೀ ಏಕಾಂಗಿಯಾಗಿಯೇ ಕಳೆದೆ. ಇಂಥ ಸಂಕಟದ ಬದುಕು 10ನೇ ತರಗತಿಯವರೆಗೂ ಮುಂದುವರಿಯಿತು. ಇದೆಲ್ಲ ನಡೆದದ್ದು ಬರೀ 20 ವರ್ಷದ ಹಿಂದೆ. ಎಸ್ಸೆಸ್ಸೆಲ್ಸಿ ಮುಗಿದ ನಂತರ ನರ್ಸಿಂಗ್ ಕೋರ್ಸ್ ಮುಗಿಸಿದೆ. ಈ ಸಂದರ್ಭದಲ್ಲಿಯೇ ನನಗೆ ಮದುವೆಯಾಯಿತು. ಮೂರು ವರ್ಷ ಮುಗಿಯುವುದರೊಳಗೆ ಎರಡು ಮಕ್ಕಳಾದವು. ಸಂಭ್ರಮದ ಬದುಕು ನನ್ನದಾಯಿತು ಎಂದು ಬೀಗುತ್ತಿದ್ದಾಗಲೇ ಅನಾಹುತವೊಂದು ನಡೆದುಹೋಯಿತು. ಅದೊಂದು ಬೆಳಿಗ್ಗೆ ಯಾವುದೋ ವಿಷಯಕ್ಕೆ ಜಗಳ ಆರಂಭಿಸಿದ ಗಂಡ, ವಾರದ ನಂತರ ಹೇಳದೇ ಕೇಳದೆ ಓಡಿಹೋದ.
ಈ ಸಂದರ್ಭದಲ್ಲಿ, ಮಕ್ಕಳನ್ನು ಸಾಕುವುದಕ್ಕಾದರೂ ನಾನು ಬದುಕಲೇಬೇಕಿತ್ತು. ದುಡಿಮೆಗೆ ಇಳಿಯಲೇಬೇಕಾಗಿತ್ತು. ನರ್ಸಿಂಗ್ ಕೋರ್ಸ್ ಮುಗಿದಿತ್ತಲ್ಲ; ಅದೇ ಕಾರಣದಿಂದ ನರ್ಸಿಂಗ್ ಹೋಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಕೆಲಸ ಸಿಕ್ಕಿತು ಎಂಬ ಕಾರಣಕ್ಕೆ ಮಕ್ಕಳೊಂದಿಗೆ ತಾಲ್ಲೂಕು ಕೇಂದ್ರಕ್ಕೆ ಬಂದೆ. ಆದರೆ, ಸಿಕ್ಕಿದ ಕೆಲಸ ನನ್ನ ಸಡಗರವನ್ನು ಹೆಚ್ಚಿಸಲಿಲ್ಲ. ಏಕೆಂದರೆ, ನರ್ಸಿಂಗ್ ಹೋಂನಲ್ಲಿ ಹೆಚ್ಚಾಗಿ ರಾತ್ರಿ ಪಾಳಿಗೆ ಹಾಕುತ್ತಿದ್ದರು. ತಿಂಗಳಿಗೆ ಎರಡು ದಿನ ಮಾತ್ರ ರಜೆ ಕೊಡುತ್ತಿದ್ದರು. ಅಮ್ಮ- ಅಜ್ಜಿ ಇಬ್ಬರೂ ಊರಲ್ಲಿದ್ದುದರಿಂದ ಮಕ್ಕಳಿಬ್ಬರನ್ನೇ ಮನೆಯಲ್ಲಿ ಬಿಟ್ಟು ನಾನು ಕೆಲಸಕ್ಕೆ ಹೋಗಬೇಕಿತ್ತು. ರಾತ್ರಿ ವೇಳೆ ಮಕ್ಕಳ ಜೀವಕ್ಕೆ ತೊಂದರೆಯಾದರೆ ಗತಿ ಏನು ಎಂಬ ಪ್ರಶ್ನೆ ಪದೇ ಪದೆ ಕಾಡತೊಡಗಿದಾಗ, ವಾಪಸ್ ಊರಿಗೆ ಹೋಗಿಬಿಡುವ, ಏನಾದರೂ ಸ್ವಂತ ಕೆಲಸ ಮಾಡಿ ಬದುಕುವ ನಿರ್ಧಾರಕ್ಕೆ ಬಂದೆ.
ನಾನು ಊರಿಗೆ ಬಂದ ಸಂದರ್ಭದಲ್ಲಿಯೇ ಸ್ವಾವಲಂಬಿಗಳಂತೆ ಬದುಕುವವರಿಗೆ ನೆರವಾಗುವ ಪ್ರಧಾನ ಮಂತ್ರಿಗಳ  ರೋಜ್‌ಗಾರ್ ಯೋಜನೆ ಜಾರಿಯಾಗಿತ್ತು. ಅವರಿವರ ಕೈಕೆಳಗೆ ದುಡಿಯುವ ಬದಲು ರೋಜ್‌ಗಾರ್ ಯೋಜನೆಯಲ್ಲಿ ಸಾಲ ಪಡೆದು ಆಟೋ ಖರೀದಿಸಿ, ಅಟೋ ಓಡಿಸಿಕೊಂಡು ಬದುಕಬಾರದೇಕೆ ಎಂಬ ಯೋಚನೆ ಬಂತು. ಮರುದಿನದಿಂದಲೇ ಆಟೋ ಓಡಿಸುವ ತರಬೇತಿ ಪಡೆದೆ. ಮೂರು ತಿಂಗಳ ನಂತರ ಲೈಸೆನ್ಸ್ ಕೂಡ ಸಿಕ್ಕಿತು. ನಂತರದ ಕೆಲವೇ ದಿನಗಳಲ್ಲಿ ಸಾಲ ಮಂಜೂರಾಗಿ ಮನೆಯ ಮುಂದೆ ಆಟೋ ಬಂದೇಬಿಟ್ಟಿತು. ಇದಿಷ್ಟೂ ನಡೆದದ್ದು 2004ರಲ್ಲಿ.
ಸಂಜೆಯವರೆಗೆ ಆಟೋ ಓಡಿಸುವುದು, ಆನಂತರ ಕುಟುಂಬವನ್ನು ಸಲಹುವುದು ನನ್ನ ಉದ್ದೇಶವಾಗಿತ್ತು. ಆದರೆ, ದಲಿತ ಕುಟುಂಬದ ಹೆಣ್ಣೊಬ್ಬಳು ತಮಗೆ ಸರಿಸಮ ಎಂಬಂತೆ ಆಟೋ ಓಡಿಸಲು ನಿಂತಿದ್ದು ಊರಿನ ಯಾರಿಗೂ ಇಷ್ಟವಾಗಲಿಲ್ಲ. ಪರಿಣಾಮವಾಗಿ, ನನ್ನ ಆಟೋಗೆ ಉಳಿದ ರಿಕ್ಷಾ ಚಾಲಕರು ಜಾಗವನ್ನೇ ಕೊಡಲಿಲ್ಲ. ವಿಪರ್ಯಾಸ ನೋಡಿ: ಇಡೀ ಕೇರಳದಲ್ಲಿ ಸಿಪಿಎಂನ ಪ್ರಾಬಲ್ಯವಿದೆ. ಎಲ್ಲರೂ ಸಮಾನರು. ಇರುವುದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು ಎಂಬುದು ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ. ಆದರೆ, ನಮ್ಮ ಊರಲ್ಲಿದ್ದ ಕಮ್ಯುನಿಸ್ಟ್ ನಾಯಕರು ಈ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟಿದ್ದರು. ಅವರ ವರ್ತನೆಯಿಂದ ಆಘಾತವಾಯಿತು. ಯಾಕೆ ಹೀಗೆ ಮಾಡ್ತಿದ್ದೀರಾ? ನನ್ನ ಹೊಟ್ಟೆಯ ಮೇಲೆ ಕಲ್ಲು ಹಾಕಲು ನಿಮಗೇನು ಹಕ್ಕಿದೆ ಎಂದು ಜಗಳಕ್ಕೆ ನಿಂತೆ. ಪರಿಣಾಮ ಏನಾಯ್ತು ಗೊತ್ತೆ? ಕೀಳು ಜಾತಿಯ ನೀನು ಆಟೋ ಓಡಿಸುವುದೆಂದರೆ ನಮಗೆಲ್ಲ ಅವಮಾನ ಎಂದು ಎಲ್ಲ ರಿಕ್ಷಾ ಡ್ರೈವರ್‌ಗಳೂ ಒಟ್ಟಾಗಿ ಹೇಳಿದರು. ನಾಳೆಯಿಂದಲೇ ಈ ಕೆಲಸ ನಿಲ್ಸು ಎಂದರು. ನಿಲ್ಲಿಸದೇ ಹೋದ್ರೆ ಏನ್ಮಾಡ್ತೀರ ಅಂತ ಕೇಳಿದೆ ನೋಡಿ: ಮರುಕ್ಷಣವೇ ಒಬ್ಬ ಡ್ರೈವರ್ ನನ್ನ ಪಾದದ ಮೇಲೇ ಆಟೋ ಹತ್ತಿಸಿ ಬಿಟ್ಟ.
ಈ ಸಂದರ್ಭದಲ್ಲಿಯೇ ನಮಗಿಂತ ಸ್ವಲ್ಪ ಮೇಲ್ಜಾತಿಯವರಾಗಿದ್ದ ಶ್ರೀಕಾಂತ್ ಎಂಬಾತನೊಂದಿಗೆ ನನ್ನ ಮದುವೆಯಾಯಿತು. ಮದುವೆಯ ಮರುದಿನವೇ, ನಮ್ಮೂರಿನ ಸಿಪಿಎಂ ಕಾರ್ಯಕರ್ತರು ಹಾಗೂ ಶ್ರೀಕಾಂತ್‌ನ ಬಂಧುಗಳು ಆತನನ್ನು ದರದರನೆ ಬೀದಿಗೆ ಎಳೆ ತಂದು ಹಲ್ಲೆ ಮಾಡಿದರು. ಅವಳನ್ನು ಬಿಟ್ಟು ಬಾ ಎಂದು ಒತ್ತಾಯಿಸಿದರು. ನಂತರ, ಒಂದು ದಿನದ ವಾರ್ನಿಂಗ್ ಕೊಟ್ಟರು. ಈ ನಡುವೆ ನನ್ನ ಆಟೋಗೆ ಬೆಂಕಿ ಹಚ್ಚಿಬಿಟ್ಟರು. ಊರಲ್ಲಿಯೇ ಇದ್ದರೆ ಈ ಜನ ಜೀವಂತ ಸುಡುವುದಕ್ಕೂ ಹೇಸುವುದಿಲ್ಲ ಅನ್ನಿಸಿದಾಗ ನಾವು ರಾತ್ರೋ ರಾತ್ರಿ ಮನೆ ಬಿಟ್ಟೆವು. ನಂತರದ ಎರಡು ವರ್ಷ ಬೇರೊಂದು ಜಿಲ್ಲೆಯಲ್ಲಿ ಅಕ್ಷರಶಃ ಭೂಗತರಾಗಿ ಬದುಕಿದೆವು. ಈ ಸಂದರ್ಭದಲ್ಲಿಯೇ ಮಾನವ ಹಕ್ಕುಗಳ ಹೋರಾಟಗಾರ ಸಿ.ಕೆ. ಜಾನು, ನಮ್ಮ ನೆರವಿಗೆ ಬಂದರು. ತಮ್ಮ ಗೆಳೆಯರ ಬಳಗದಿಂದ ಚಂದಾ ಸಂಗ್ರಹಿಸಿ ನನಗೆ ಹೊಸ ಆಟೋ ತೆಗೆಸಿಕೊಟ್ಟರು. ಜೊತೆಗೆ, ಪೊಲೀಸ್ ರಕ್ಷಣೆಯೊಂದಿಗೆ ನಮ್ಮನ್ನು ಮತ್ತೆ ಪಯ್ಯನ್ನೂರ್‌ಗೆ ಕರೆ ತಂದುಬಿಟ್ಟರು.
ನನ್ನೂರಿನ ಆಟೋ ಡ್ರೈವರ್‌ಗಳು ಹಾಗೂ ಸಿಪಿಎಂ ಕಾರ್ಯಕರ್ತರು ಈಗ ಹೊಸ ವರಸೆ ಆರಂಭಿಸಿದರು. ಚಿತ್ರಲೇಖಾ ಮಾದಕ ವ್ಯಸನಿಯಾಗಿದ್ದಾಳೆ.  ಕುಡಿದು ಆಟೋ ಓಡಿಸುತ್ತಾಳೆ. ಕಾಲ್‌ಗರ್ಲ್ ಆಗಿಯೂ ಕೆಲಸ ಮಾಡುತ್ತಾಳೆ ಎಂದೆಲ್ಲಾ ಸುದ್ದಿ ಹಬ್ಬಿಸಿದರು. ಪೊಲೀಸರಿಗೆ ದುಡ್ಡು ಕೊಟ್ಟು, ಮೇಲಿಂದ ಮೇಲೆ ನನ್ನ ಆಟೋ ತಡೆಯುವಂತೆ, ನೂರಾರು ಮಂದಿಯ ಎದುರಿನಲ್ಲಿ ವಿಚಾರಣೆ ನಡೆಸುವಂತೆ ಪ್ರಚೋದಿಸಿದರು. ಒಂದು ಬಾರಿಯೂ ನನ್ನನ್ನು ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಿಸಲು ಅವರಿಂದ ಆಗಲಿಲ್ಲ. ಆನಂತರವೂ ಪೊಲೀಸರು ಆಟೋ ತಡೆಯುವ ಕೆಲಸ ಮುಂದುವರಿಸಿದಾಗ ನಾನು ಪ್ರತಿಭಟಿಸಿದೆ. ಮೇಲಧಿಕಾರಿಗಳಿಗೆ ದೂರು ಕೊಡುವುದಾಗಿ ಸಿಟ್ಟಿನಿಂದ ಹೇಳಿದೆ. ಬಹುಶಃ ಅದೇ ನಾನು ಮಾಡಿದ ತಪ್ಪಾಯಿತು. ಪೊಲೀಸರೂ ನನ್ನನ್ನು ಹಣಿಯಲು ಸಮಯ ಕಾಯತೊಡಗಿದರು.
ಹೀಗಿರುವಾಗಲೇ, 2010ರ ಒಂದು ದಿನ ನನ್ನ ಮಗನಿಗೆ ಹೆಜ್ಜೇನು ಕಚ್ಚಿತು. ಅವನಿಗೆ ಚಿಕಿತ್ಸೆ ಕೊಡಿಸಿ ಮಾತ್ರೆ ಖರೀದಿಸಲೆಂದು ಬಂದೆವು. ನನ್ನ ಗಂಡ ಮಾತ್ರೆ ತರಲೆಂದು ಶಾಪ್‌ಗೆ ಹೋದ. ಡ್ರೈವರ್ ಸೀಟ್‌ನಲ್ಲಿ ನಾನಿದ್ದೆ. ಆಗಲೇ ಅಲ್ಲಿಗೆ ಬಂದ ಆಟೋ ಚಾಲಕರು, ತಕ್ಷಣವೇ ಇಲ್ಲಿಂದ ಬೇರೆ ಕಡೆಗೆ ಆಟೋ ತಗೊಂಡು ಹೋಗು. ಇದು ಪಾರ್ಕಿಂಗ್ ಜಾಗ ಅಲ್ಲ ಎಂದರು. ನಾನು ಪರಿಸ್ಥಿತಿ ವಿವರಿಸಿದೆ. ಐದು ನಿಮಿಷದಲ್ಲಿ ಗಂಡ ಬರ್ತಾನೆ. ಹಿಂದಿನ ಸೀಟಿನಲ್ಲಿ ಕೂತಿರುವ ಮಗುವಿಗೆ ಜ್ವರ ಇದೆ. ದಯವಿಟ್ಟು ತೊಂದರೆ ಕೊಡಬೇಡಿ ಎಂದೆ. ನಮಗೇ ಎದುರು ಮಾತಾಡ್ತಿಯೇನೇ ಎಂದು ಅವರಲ್ಲೊಬ್ಬ ನನ್ನ ಕೆನ್ನೆಗೆ ಹೊಡೆದ. ನನ್ನನ್ನು ಬಿಡಿಸಿಕೊಳ್ಳಲು ಓಡೋಡಿ ಬಂದ ಗಂಡನಿಗೂ ಏಟು ಬಿದ್ದವು. ಈ ಮಧ್ಯೆಯೇ ಒಬ್ಬಾತ ಪೊಲೀಸರಿಗೆ ಫೋನ್ ಮಾಡಿದ. ಅವರು ತರಾತುರಿಯಲ್ಲಿ ಬಂದು ನಮ್ಮನ್ನು ಠಾಣೆಗೆ ಎಳೆದೊಯ್ದರು. ಅಲ್ಲಿ ನಮ್ಮಿಬ್ಬರಿಗೂ ದನಕ್ಕೆ ಹೊಡೆದಂತೆ ಹೊಡೆದರು. ಮೇಲಧಿಕಾರಿಗಳಿಗೆ ದೂರು ಕೊಡ್ತೀನಿ ಅಂತ ಬಡ್ಕೋತಿದ್ದೆ ಅಲ್ವ? ಹಂಗೇನಾದ್ರೂ ಮಾಡಿದ್ರೆ ನಿನ್ನನ್ನು ಮುಗಿಸಿಬಿಡ್ತೇವೆ ಹುಷಾರ್ ಎಂದು ಎಚ್ಚರಿಸಿ ಬಿಡುಗಡೆ ಮಾಡಿದರು.
ನನ್ನ ರಕ್ಷಣೆಗೆ ಯಾರೂ ಇಲ್ಲ ಅನ್ನಿಸಿದಾಗ ಪತ್ರಿಕೆಗಳ ಮೊರೆ ಹೋದೆ. ನನ್ನ ಸಂಕಟದ ಕಥೆಯನ್ನು ಹಲವರು ಬ್ಲಾಗ್‌ಗಳಲ್ಲಿ ಬರೆದರು. ಹಲವು ಪತ್ರಿಕೆಗಳು ಸುದ್ದಿ ಪ್ರಕಟಿಸಿ, ಪಯ್ಯನ್ನೂರಿನ ಪುರುಷರು ಹಾಗೂ ಸಿಪಿಎಂ ಮುಖಂಡರ ದಬ್ಬಾಳಿಕೆಯನ್ನು ಖಂಡಿಸಿದವು. ಇದರಿಂದ ಮತ್ತೂ ಕೆರಳಿದ ಜನ ಅದೊಂದು ರಾತ್ರಿ ನಮ್ಮ ಗುಡಿಸಲು ಮತ್ತು ಆಟೋಗೆ ಬೆಂಕಿ ಹಚ್ಚಿ ಕೇಕೆ ಹಾಕಿದರು. ಕೆಲ ದಿನಗಳ ನಂತರ ಮಾನವ ಹಕ್ಕುಗಳ  ಆಯೋಗದ ಅಧಿಕಾರಿಗಳು ಪಯ್ಯನ್ನೂರ್‌ಗೆ ಬಂದು- ಈ ಹೆಂಗಸು ಮಾಡಿರುವ ತಪ್ಪಾದ್ರೂ ಏನ್ರಪ್ಪ? ನೀವು ಯಾಕೆ ಅವಳಿಗೆ ಪದೇ ಪದೆ ಕಿರುಕುಳ ಕೊಡ್ತೀರಿ?' ಎಂದು ಪ್ರಶ್ನಿಸಿದಾಗ ಊರಿನ ಮುಖಂಡನೊಬ್ಬ ತುಂಬ ಸ್ಪಷ್ಟವಾಗಿ ಹೇಳಿದ: 'ಚಿತ್ರಲೇಖಳ ಅಜ್ಜಿ ಮತ್ತು ತಾಯಿ, ಇಡೀ ಊರಿನ ಮನೆಗಳಲ್ಲಿ ಕೂಲಿ ಮಾಡಿಕೊಂಡು ಇದ್ದವರು. ಈ ಹೆಂಗಸೂ ಹಾಗೇ ಇರಬೇಕಿತ್ತು. ಇವಳು ಗಂಡಸರಿಗೆ ಸರಿಸಮನಾಗಿ ನಿಲ್ಲುವ ಮಾತಾಡ್ತಾಳೆ. ಹಿಂತಿರುಗಿ ವಾದಿಸ್ತಾಳೆ. ಎರಡೇಟು ಹಾಕಿದ್ರೆ ಪೊಲೀಸರಿಗೆ ದೂರು ಕೊಡ್ತಾಳೆ. ನಮ್ಮ ಊರಲ್ಲಿ ಅದಕ್ಕೆಲ್ಲ ಅವಕಾಶ ಕೊಡೋದಿಲ್ಲ. ದೇಶ ಎಷ್ಟೇ ಮುಂದುವರಿದಿರಬಹುದು. ಆದರೆ ನಮ್ಮ ಊರಿನ ಕಾನೂನಿನ ಪ್ರಕಾರ ಹೆಂಗಸರು ಗಂಡಸಿಗೆ ಸರಿಸಮಾನವಾಗಿ ನಿಲ್ಲುವಂತೆಯೇ ಇಲ್ಲ...'
ಇಷ್ಟಾದ ಮೇಲೆ, ಅಧಿಕಾರಿಗಳ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಗ್ರಾಮದ ಜನತೆಯಿಂದ, ಸಿಪಿಎಂ ನಾಯಕರಿಂದ, ಆಟೋ ಡ್ರೈವರ್‌ಗಳಿಂದ ಚಿತ್ರಲೇಖಾಳ ಕುಟುಂಬದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿದೆ. ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಕೆಲಸ ತುರ್ತಾಗಿ ಆಗಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ, ಕೇರಳದ ಸರ್ಕಾರ ಆ ವರದಿಯನ್ನು ಕಸದ ಬುಟ್ಟಿಗೆ ಹಾಕಿಬಿಟ್ಟಿತು. ನಮ್ಮ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ನಡೆದೇ ಇಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಯೇ ಹೇಳುವುದರೊಂದಿಗೆ, ಚಿತ್ರಲೇಖಾಳ ಸಂಕಟಗಳಿಗೆ 'ಶುಭಂ'ನ ಪರದೆ ಬೀಳಬಹುದೆಂಬ ನಿರೀಕ್ಷೆ ಸುಳ್ಳಾಗಿ ಹೋಯಿತು.
ಈಗ, ತೆಂಗಿನ ಗರಿಗಳ ಒಂದು ಪುಟ್ಟ ಜೋಪಡಿಯಲ್ಲಿ ಬದುಕುತ್ತಿದ್ದಾಳೆ ಚಿತ್ರಲೇಖಾ. ಅವಳ ಮನೆಯ ಮುಂದೆ ಖಾಸಗಿ ಕಂಪನಿಗೆ ಸೇರಿದ ತೆಂಗಿನ ತೋಟವಿದೆ. ಮರದಿಂದ ಬಿದ್ದ ಗರಿಗಳನ್ನು ಆಯ್ದು ತಂದು, ಅವುಗಳಿಂದ ಚಾಪೆ ಹೆಣೆದು ಮಾರುತ್ತಾ ಆಕೆ ಬದುಕು ಸಾಗಿಸುತ್ತಿದ್ದಾಳೆ. ಪೊಲೀಸರ ಹೊಡೆತದಿಂದ ಬೆನ್ನಿನ ಹಿಂಭಾಗಕ್ಕೆ ತೀವ್ರ ಪೆಟ್ಟಾಗಿ ಆಕೆಯ ಗಂಡ ಶಾಶ್ವತ ಅಂಗವಿಕಲನಂತೆ ಬದುಕುತ್ತಿದ್ದಾನೆ. ಊರಲ್ಲಿಯೇ ಬಿಟ್ಟರೆ ಮಕ್ಕಳ ಭವಿಷ್ಯ ಕಮರಿ ಹೋಗಬಹುದು ಎಂದು ಯೋಚಿಸಿ, ಅವರನ್ನು ದೂರದ ಜಿಲ್ಲೆಗಳ ಹಾಸ್ಟೆಲ್‌ಗೆ ಸೇರಿಸಿದ್ದಾಳೆ ಚಿತ್ರಲೇಖಾ. ಈ ಮಧ್ಯೆಯೂ ಆಕೆಯ ಕುಟುಂಬದ ಮೇಲೆ ಸಿಪಿಎಂ ನಾಯಕರು ಹಾಗೂ ಮೇಲ್ವರ್ಗದವರ ಗೂಂಡಾಗಿರಿ ನಡೆಯುತ್ತಲೇ ಇದೆ. ಅದೇ ಹೊತ್ತಿನಲ್ಲಿ ಫೇಸ್‌ಬುಕ್, ಗೂಗಲ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಲೇಖಾಗೆ ನ್ಯಾಯ ಕೊಡಿಸಿ ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಎಲ್ಲವನ್ನೂ ಅಸಹಾಯಕಳಾಗಿ ನೋಡುತ್ತಿರುವ ಚಿತ್ರಲೇಖಾ, ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿದ್ದಾಳೆ. ಮನುಷ್ಯನ ಎದೆಯೊಳಗಿರುವ ಕ್ರೌರ್ಯ ಹೇಗೆಲ್ಲ ಅನಾವರಣಗೊಳ್ಳುತ್ತದೆಯಲ್ಲವೆ, ಛೆ...
\- ಎ.ಆರ್. ಮಣಿಕಾಂತ್
armanikanth@gmail.com


















ಭೈರವಿ ಒಲಿದರೂ ಬೈರಾಗಿಯಾಗಿಯೇ ಉಳಿದುಹೋದರು!

ಭೈರವಿ ಒಲಿದರೂ ಬೈರಾಗಿಯಾಗಿಯೇ ಉಳಿದುಹೋದರು!

ಭಾವತೀರಯಾನ- ಎ.ಆರ್.ಮಣಿಕಾಂತ್


ಕರ್ನಾಟಕ ಸಂಗೀತದ ಮಹಾಗುರು ಎಂದು ಹೆಸರಾದವರು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್. 150 ವರ್ಷಗಳ ಹಿಂದೆ ಅವರು ರಾಗ ಸಂಯೋಜನೆ ಮಾಡಿದ ಹಲವು ಗೀತೆಗಳು ಈಗಲೂ ಜನಪ್ರಿಯತೆ ಉಳಿಸಿಕೊಂಡಿವೆ ಎಂಬುದು ಹಲವು ಸಂಗೀತಗಾರರ ಹೇಳಿಕೆ. ಇಂಥ ಮಹಾಗುರುವಿನ ಶಿಷ್ಯನೇ ಈ ಅಂಕಣದ ಕಥಾನಾಯಕ. ಅವನ ಹೆಸರು ಕೆಂಪೇಗೌಡ ಅಲಿಯಾಸ್ ಭೈರವಿ ಕೆಂಪೇಗೌಡ. ಭೈರವಿ ರಾಗದ ಕೀರ್ತನೆಗಳನ್ನು ಅಮೋಘವಾಗಿ ಹಾಡುತ್ತಿದ್ದುದರಿಂದ ಕೆಂಪೇಗೌಡನ ಹೆಸರಿನ ಹಿಂದೆ 'ಭೈರವಿ' ಎಂಬುದೂ ಸೇರಿಕೊಂಡಿತು. ಗಂಧರ್ವರನ್ನೂ ನಾಚಿಸುವಂತಿದ್ದ ಕೆಂಪೇಗೌಡರ ಗಾಯನಕ್ಕೆ ಮನಸೋತವರಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಮೈಸೂರಿನ ಮಹಾರಾಜ ಚಾಮರಾಜ ಒಡೆಯರ್ ಪ್ರಮುಖರು.ವಿಪರ್ಯಾಸವೇನು ಗೊತ್ತೆ? 1857-1937ರ ಅವಧಿಯಲ್ಲಿ ಬದುಕಿದ್ದ ಈ ಮಹಾನ್ ಗಾಯಕನ ಕಲಾಪ್ರತಿಭೆಗೆ ಸಿಗಬೇಕಿದ್ದ ಗೌರವಾದರಗಳು ಸಿಗಲೇ ಇಲ್ಲ. ಕೀರ್ತಿ, ಸನ್ಮಾನ ಅಥವಾ ಹಣಕ್ಕಾಗಿ ಈತ ಹಂಬಲಿಸಲೂ ಇಲ್ಲ. ಆತ್ಮಸಂತೋಷಕ್ಕಾಗಿ, ಜನಸಾಮಾನ್ಯರ ಖುಷಿಗಾಗಿ ಹಾಡುತ್ತಿದ್ದ ಕೆಂಪೇಗೌಡರ ಬದುಕು, ಸಂಕಟಗಳ ಚಕ್ರಸುಳಿಗೆ ಮೇಲಿಂದ ಮೇಲೆ ಸಿಕ್ಕಿಕೊಂಡಿತು. ವಿಧಿಯ ಅಟ್ಟಹಾಸಕ್ಕೆ ಸಿಲುಕಿ 'ಕಳೆದು ಹೋದ ಅಧ್ಯಾಯ' ಅನ್ನಿಸಿಕೊಂಡ ಭೈರವಿ ಕೆಂಪೇಗೌಡರ ಬದುಕಿನ ಆರ್ದ್ರ ಚಿತ್ರಣ ಇಲ್ಲಿದೆ.ಕೆಂಪೇಗೌಡನ ಪೂರ್ವಜರು, ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಶೆಟ್ಟಿಹಳ್ಳಿಯವರು. ಗೌಡರ ತಾತ ಈಸ್ಟ್ ಇಂಡಿಯಾ ಕಂಪನಿಯಲ್ಲಿ ನೌಕರಿಗೆ ಇದ್ದವರು. ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಚ್ಛಿಸದ ಕೆಂಪೇಗೌಡರ ತಂದೆ, ವ್ಯಾಪಾರಿಯಾಗಲು ನಿರ್ಧರಿಸಿ ಮಂಡ್ಯದಿಂದ ಕೊಯಮತ್ತೂರಿಗೆ ವಲಸೆ ಹೋದರು. ನಂತರ ಅಲ್ಲಿಯೇ ನೆಲೆ ನಿಂತರು. ಪ್ರಸಿದ್ಧ ವರ್ತಕ ಅನ್ನಿಸಿಕೊಂಡರು. ಇಂಥ ಕುಟುಂಬದಲ್ಲಿ, ಬೆಳ್ಳಿಯ ಚಮಚವನ್ನು ಬಾಯೊಳಗೆ ಇಟ್ಟುಕೊಂಡೇ ಹುಟ್ಟಿದಾತ ಕೆಂಪೇಗೌಡ. ಬಾಲ್ಯದಿಂದಲೇ ಆತ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡ. ಮಗನೂ ತನ್ನಂತೆಯೇ ವರ್ತಕನಾಗಲಿ ಎಂದು ಬಯಸಿದ್ದ ಕೆಂಪೇಗೌಡರ ತಂದೆ, ಈ ಹಾಡುಗಾರಿಕೆಯಿಂದ ಬದುಕಲು ಸಾಧ್ಯವಿಲ್ಲ. ಅದನ್ನು ಮರೆತು ವ್ಯಾಪಾರದತ್ತ ಗಮನ ಹರಿಸು ಎಂದು ಬುದ್ಧಿಮಾತು ಹೇಳಿದರು. ಆನಂತರವೂ ಮಗ ಸಂಗೀತ ಕಲಿಕೆಯನ್ನು ಮುಂದುವರಿಸಿದಾಗ ಛೀಮಾರಿ ಹಾಕಿದರು.ಕೊಯಮತ್ತೂರಿನಲ್ಲಿಯೇ ಇದ್ದರೆ ಸಂಗೀತಗಾರನಾಗಲು ಸಾಧ್ಯವೇ ಇಲ್ಲವೆಂದು ಖಚಿತವಾದಾಗ, ಅಜ್ಜನೊಂದಿಗೆ ತನ್ನ ಮನದಾಸೆ ಹೇಳಿಕೊಂಡ ಕೆಂಪೇಗೌಡ, ನೇರವಾಗಿ ಬಂದದ್ದು ತಂಜಾವೂರ್ ಜಿಲ್ಲೆಯ ತಿರುವಯ್ಯಾರ್‌ಗೆ. ಅಲ್ಲಿದ್ದ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಬಳಿ ಸಂಗೀತದ ಪಾಠ ಹೇಳಿಸಿಕೊಳ್ಳಬೇಕು ಎಂಬುದು ಗೌಡನ ಕನಸಾಗಿತ್ತು. ಆವತ್ತಿನ ಸಂದರ್ಭದಲ್ಲಿ ರಾಜಮನೆತನದ ಹಾಗೂ ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಸಂಗೀತಪಾಠ ಹೇಳಿಕೊಡಲಾಗುತ್ತಿತ್ತು. ಈ ವಿಷಯ ತಿಳಿದಾಗ, ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ಕೆಂಪೇಗೌಡ ಸಂಕಟ ಮತ್ತು ಸಂಕೋಚದಿಂದ ತತ್ತರಿಸಿ ಹೋದ. ನಂತರ, ನನ್ನ ಹಣೆಬರಹ ಇದ್ದಂತಾಗಲಿ, ಇಲ್ಲಿದ್ದು ಸೇವೆ ಮಾಡುವ ಅವಕಾಶವನ್ನಾದರೂ ಪಡೆಯಬೇಕು ಎಂದು ನಿರ್ಧರಿಸಿ, ನಿಮ್ಮ ಮನೆಯಲ್ಲಿ ಏನಾದರೂ ಕೆಲಸ ಮಾಡಿಕೊಂಡಿರಲು ಅವಕಾಶ ಕೊಡಿ ಗುರುಗಳೇ ಎಂದು ಪ್ರಾರ್ಥಿಸಿದ.ಕಾಕತಾಳೀಯವೆಂಬಂತೆ, ಅದುವರೆಗೂ ಸುಬ್ರಹ್ಮಣ್ಯ ಅಯ್ಯರ್ ಅವರ ಮನೆಯಲ್ಲಿ ಹಸುಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗ, ದಿಢೀರನೆ ಕೆಲಸ ಬಿಟ್ಟಿದ್ದ. ಹೀಗೆ ಖಾಲಿಯಿದ್ದ ಕೆಲಸ ಕೆಂಪೇಗೌಡನ ಹೆಗಲಿಗೆ ಬಿತ್ತು. ಈ ಸಂದರ್ಭದಲ್ಲಿ, ಮುಂದೆ ಹೆಸರಾಂತ ಗಾಯಕರು ಅನ್ನಿಸಿಕೊಂಡ ಮೈಸೂರು ವಾಸುದೇವಾಚಾರ್ಯ, ಟೈಗರ್ ವರದಾಚಾರ್, ರಮಾನಂದ ಶ್ರೀನಿವಾಸ ಅಯ್ಯಂಗಾರ್ ಸೇರಿದಂತೆ ಹಲವರು ಸುಬ್ರಹ್ಮಣ್ಯ ಅಯ್ಯರ್‌ರ ಬಳಿ ಸಂಗೀತ ಕಲಿಯುತ್ತಿದ್ದರು.
ದಿನವೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಸಂಗೀತ ಪಾಠವನ್ನು, ಗುರುವಿಗೆ ಗೊತ್ತಾಗದಂತೆ ಕೆಂಪೇಗೌಡ ಆಲಿಸುತ್ತಿದ್ದ. ತಾನು ಕಲಿತಿದ್ದನ್ನೆಲ್ಲ ದನಕರುಗಳ ಮುಂದೆ ಹಾಡುತ್ತಿದ್ದ. ಅವನದು ಏಕಲವ್ಯನ ಅಭ್ಯಾಸ. ಕೋಗಿಲೆಯ ದನಿಯನ್ನು ಅಡಗಿಸಲು ಯಾರಿಗಾದರೂ ಸಾಧ್ಯವೆ? ಕೆಲವೇ ದಿನಗಳಲ್ಲಿ ಕೆಂಪೇಗೌಡನ ರಹಸ್ಯ ಸಂಗೀತ ಕಲಿಕೆಯ ವಿಷಯ ಗುರುಪತ್ನಿಗೆ ಗೊತ್ತಾಯಿತು. ಆಕೆ ಗಂಡನಿಗೆ ವಿಷಯ ತಿಳಿಸಿದರು. ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಆತ ಎಲ್ಲಾ ಕೆಲಸ ಮಾಡ್ತಾ ಇದ್ದಾನೆ. ಅವನಿಗೂ ಸಂಗೀತ ಕಲಿಸಿ ಎಂದು ವಿನಂತಿಸಿದರು. ಹೆಂಡತಿಯ ಮಾತು ಕೇಳಿ ಕ್ಷಣಕಾಲ ಬೆರಗಾದ ಸುಬ್ರಹ್ಮಣ್ಯ ಅಯ್ಯರ್, ಕೆಲ ದಿನಗಳ ಕಾಲ ಕೆಂಪೇಗೌಡನನ್ನು ಗುಟ್ಟಾಗಿ ಪರೀಕ್ಷಿಸಿದರು. ಆತನ ಹಾಡುಗಾರಿಕೆಯನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡರು. ಹುಡುಗನಿಗೆ ಕಲಿಕೆಯಲ್ಲಿ ಆಸಕ್ತಿಯಿದೆ ಎಂಬುದು ಖಚಿತವಾದಾಗ, ಉಳಿದ ಶಿಷ್ಯರ ಸಾಲಿನಲ್ಲಿ ಅವನಿಗೂ ಅವಕಾಶ ಕಲ್ಪಿಸಿದರು. ಅಪಾರ ಗುರುಭಕ್ತಿ ಹಾಗೂ ಶ್ರದ್ಧಾವಂತ ಕಲಿಕೆಯ ಕಾರಣದಿಂದ ಮುಂದಿನ ಕೆಲವೇ ದಿನಗಳಲ್ಲಿ ಅಯ್ಯರ್ ಅವರ ಪಟ್ಟಶಿಷ್ಯ ಎಂದು ಕರೆಸಿಕೊಳ್ಳುವ ಯೋಗ ಕೆಂಪೇಗೌಡನದ್ದಾಯಿತು. ಗುರುಗಳೊಂದಿಗೆ ಸಲುಗೆಯಿಂದ ಮಾತಾಡುವುದಕ್ಕೂ ಅವಕಾಶ ಸಿಕ್ಕಿತು.ಅದೊಮ್ಮೆ ಏನಾಯಿತೆಂದರೆ, ಅಯ್ಯರ್ ಅವರ ಮನೆಯ ಅಂಗಳದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಹಾಡುಗಾರಿಕೆಯಲ್ಲಿ ಅಯ್ಯರ್ ಮೈಮರೆತರು. ರಾತ್ರಿ 10 ಗಂಟೆ ದಾಟಿದರೂ ಅದನ್ನವರು ಗಮನಿಸಲೇ ಇಲ್ಲ. ಈ ಸಂದರ್ಭದಲ್ಲಿ ಕೆಂಪೇಗೌಡನ ಬಳಿ ಬಂದ ಅಯ್ಯರ್‌ರ ಪತ್ನಿ, -'ಹಾಡುವುದರಲ್ಲಿ ಮೈಮರೆತಿರುವ ಗುರುಗಳು ಊಟ ಮಾಡುವುದನ್ನೇ ಮರೆತಿದ್ದಾರೆ. ಇಂಥ ಸಂದರ್ಭದಲ್ಲಿ ಬೇರೆ ಯಾರಾದರೂ ಮಾತಾಡಿಸಿದರೆ ಸಿಟ್ಟಾಗುತ್ತಾರೆ. ಅವರನ್ನು ಎಬ್ಬಿಸುವುದು ನಿನಗೆ ಮಾತ್ರ ಸಾಧ್ಯ. ಹೋಗಿ ಅವರನ್ನು ಊಟಕ್ಕೆ ಕಳಿಸು' ಅಂದರಂತೆ. ಗುರುಪತ್ನಿಯ ಆದೇಶವನ್ನು ಮೀರುವುದುಂಟೆ? ಕೆಂಪೇಗೌಡ ಅಳುಕುತ್ತಲೇ ಗುರುಗಳ ಬಳಿಗೆ ಬಂದ. ಅವರ ಹಾಡುಗಾರಿಕೆ ನಿಂತು, ಹಿನ್ನೆಲೆ ಸಂಗೀತ ಶುರುವಾಗುತ್ತಿದ್ದಂತೆಯೇ -'ಗುರುಗಳೇ, ಅಮ್ಮ ಕರೆಯುತ್ತಿದ್ದಾರೆ. ದಯಮಾಡಿ ಊಟಕ್ಕೆ ಹೋಗಿ ಬನ್ನಿ. ಹತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ನಾನು ಹೇಗಾದರೂ ಸಂಭಾಳಿಸುತ್ತೇನೆ' ಎಂದು ಬಿಟ್ಟ. ಶಿಷ್ಯನ ಈ ಮಾತು ಅಯ್ಯರ್‌ಗೆ ಉದ್ಧಟತನದಂತೆ ಕಾಣಿಸಿತು. ಕೋಪದಿಂದ ಕಿಡಿ ಕಿಡಿಯಾದ ಅವರು ತಕ್ಷಣವೇ ಮೇಲೆದ್ದು -ಹೌದಾ? ನೀನೇ ಹಾಡ್ತೀಯ? ಹಾಡು ನೋಡೋಣ ಎಂದು ಹೇಳಿ ಸರಸರನೆ ಹೋಗಿ ಬಿಟ್ಟರು.ಇಂಥದೊಂದು ಸಂದರ್ಭ ಹಾಗೂ ಸವಾಲನ್ನು ಕೆಂಪೇಗೌಡ ನಿರೀಕ್ಷಿಸಿರಲಿಲ್ಲ. ಮುಂದೇನು ಮಾಡುವುದೆಂದು ಗೊತ್ತಾಗದೆ ಆತ ಕಂಗಾಲಾಗಿ ನಿಂತಿದ್ದಾಗ, ಪಕ್ಕವಾದ್ಯದವರು ಧೈರ್ಯ ಹೇಳಿದರು. ಹೆದರಬೇಡ, ಹಾಡು ಎಂದು ಉತ್ತೇಜಿಸಿದರು. ಆಗಿದ್ದಾಗಲಿ ಎಂದುಕೊಂಡ ಕೆಂಪೇಗೌಡ, ಗುರುಗಳು ನಿಲ್ಲಿಸಿದ್ದರಲ್ಲ; ಅಲ್ಲಿಂದಲೇ ಆರಂಭಿಸಿ ಬಿಟ್ಟ. ಭೈರವಿ ರಾಗದಲ್ಲಿ ಆಲಾಪನೆಗೆ ಶುರು ಮಾಡಿದಾಕ್ಷಣ ಅಲ್ಲೊಂದು ಗಂಧರ್ವ ಲೋಕ ಸೃಷ್ಟಿಯಾಯಿತು. ಎರಡು ನಿಮಿಷ ಕಳೆಯುತ್ತಿದ್ದಂತೆಯೇ, ಶಿಷ್ಯನ ಗಾನಮಾಧುರ್ಯಕ್ಕೆ ಬೆರಗಾದ ಅಯ್ಯರ್, ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದು ಬಂದರು. ಪ್ರೇಕ್ಷಕರ ಅಪೇಕ್ಷೆಯಂತೆ ಅವತ್ತು ನಡುರಾತ್ರಿಯವರೆಗೂ ಕೆಂಪೇಗೌಡನ ಗಾಯನ ಮುಂದುವರಿಯಿತು. ಕಾರ್ಯಕ್ರಮ ಮುಗಿದಾಕ್ಷಣ, ಧಾವಿಸಿ ಬಂದು ಶಿಷ್ಯನನ್ನು ಆಲಂಗಿಸಿಕೊಂಡ ಅಯ್ಯರ್, ಗಂಧರ್ವರನ್ನು ನಾಚಿಸುವಂಥ ಸಿರಿಕಂಠ ನಿನ್ನದು. ಇಂದಿನಿಂದ ನೀನು 'ಭೈರವಿ ಕೆಂಪೇಗೌಡ' ಎಂದು ಕರೆದರಂತೆ. ನಂತರ, ಟ್ರಾವಂಕೂರ್ ಮಹಾರಾಜರಿಂದ ಬಹುಮಾನವಾಗಿ ಬಂದಿದ್ದ ಚಿನ್ನದ ರೇಕುಗಳಿಂದ ಕೂಡಿದ ಶಾಲು ಹೊದೆಸಿ ಗೌಡನನ್ನು ಸನ್ಮಾನಿಸಿ, ಬೀಳ್ಕೊಟ್ಟರಂತೆ.ಹೀಗೆ, ಅಯ್ಯರ್‌ರ ಅಪಾರ ಮೆಚ್ಚುಗೆಗೆ ಪಾತ್ರನಾದ ಕೆಂಪೇಗೌಡನ ವಿಷಯ ನಾಡಿನಾದ್ಯಂತ ಹರಡಿತು. ಇದೇ ಸಂದರ್ಭಕ್ಕೆ ಅಪಾರ ಲಾವಣ್ಯವತಿ ಎನಿಸಿಕೊಂಡ ಯುವತಿಯೊಂದಿಗೆ ಕೆಂಪೇಗೌಡರ ಮದುವೆಯಾಯಿತು. ಸಂಗೀತ-ಸೌಂದರ್ಯಗಳು ಮೇಳೈಸಿದ ಮೇಲೆ ಕೇಳಬೇಕೆ? ಸಂಭ್ರಮದ ಬದುಕಿನ ಸಡಗರದ ಮಧ್ಯೆ ಭೈರವಿ ರಾಗದ ಉಪಾಸನೆಯಲ್ಲಿ ಗೌಡರು ಮೈಮರೆತರು. ಆಗಲೇ ಆಗಬಾರದ ಅನಾಹುತ ಆಗಿಹೋಯಿತು. ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಕೆಂಪೇಗೌಡರ ಪತ್ನಿ, ಅಷ್ಟೇ ಆಕಸ್ಮಿಕವಾಗಿ ಸತ್ತು ಹೋದಳು. ಮೋಹದ ಹೆಂಡತಿ ತೀರಿಹೋದದ್ದು ಗೌಡರ ಪಾಲಿಗೆ ದೊಡ್ಡ ಶಾಕ್. ಆನಂತರದಲ್ಲಿ ಅವರಿಗೆ ಯಾವುದರಲ್ಲೂ ಆಸಕ್ತಿ ಉಳಿಯಲಿಲ್ಲ. ಅವರು ಊಟ ಮರೆತರು. ತಿಂಡಿ ಮರೆತರು. ವಿರಾಗಿಯಂತೆ ಊರೂರು ಅಲೆದರು. ಹೆಂಡತಿಯ ನೆನಪಾದರೆ, ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಅನ್ನಿಸಿದರೆ ಇದ್ದಲ್ಲಿಯೇ ಭೈರವಿ ರಾಗದಲ್ಲಿ ಹಾಡಲು ಆರಂಭಿಸುತ್ತಿದ್ದರು. ಅವರ ತೇಜಸ್ವಿ ವ್ಯಕ್ತಿತ್ವ ಮತ್ತು ಮಧುರ ಗಾಯನಕ್ಕೆ ಮರುಳಾದ ಹಲವು ಕನ್ಯಾಪಿತೃಗಳು, ಗೌಡರನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಮಾತಾಡಿದರು. ಆದರೆ ಅದ್ಯಾವುದನ್ನೂ ಒಪ್ಪದ ಗೌಡರು, ಸೀದಾ ಮೈಸೂರಿಗೆ ಬಂದರು.ಕೆಲ ದಿನಗಳ ಬಳಿಕ ಹೀಗಾಯಿತು. ಮೈಸೂರಿನ ಅರಸರಾಗಿದ್ದ ಚಾಮರಾಜ ಒಡೆಯರ್ ಅವರು ಪರಿವಾರದೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಯಾವುದೋ ಮಧುರ ಗಾನದ ಸದ್ದು ಕೇಳಿಸಿತು. ಸದ್ದು ಬಂದ ಕಡೆಗೇ ನಡೆದು ಹೋದ ರಾಜಪರಿವಾರಕ್ಕೆ ಕಂಡದ್ದೇನು? ನೂರಾರು ಮಂದಿ ಸಾಮಾನ್ಯ ಪ್ರೇಕ್ಷಕರ ಮಧ್ಯೆ ಗಾಯಕನೊಬ್ಬ ಮೈಮರೆತು ಹಾಡುತ್ತಿದ್ದಾನೆ. ಸಮ್ಮೋಹನಕ್ಕೆ ಒಳಗಾದವರಂತೆ ಮಹಾರಾಜರೂ ಅಲ್ಲಿಯೇ ನಿಂತರು. ಹಾಡುಗಾರಿಕೆ ಮುಗಿಯುತ್ತಿದ್ದಂತೆಯೇ ಆ ಸಂಗೀತಗಾರನ ಬಗ್ಗೆ ವಿಚಾರಿಸಿದರು. ಆತ ಭೈರವಿ ಕೆಂಪೇಗೌಡ ಎಂದು ತಿಳಿದಾಕ್ಷಣ ಖುಷಿಯಾದರು. 'ನಮ್ಮ ದರ್ಬಾರ್‌ನಲ್ಲಿಯೂ ನಿಮ್ಮ ಹಾಡುಗಾರಿಕೆ ನಡೆಯಲಿ. ದಯವಿಟ್ಟು ಬನ್ನಿ' ಎಂದು ಆಹ್ವಾನಿಸಿದರು.'ಇದೆಲ್ಲಾ ನಡೆದದ್ದು 1892ರಲ್ಲಿ. ಆಗ ಮಹಾರಾಜರ ಆಹ್ವಾನದಂತೆ ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿಯೇ ಅರಮನೆಯಲ್ಲಿ ಕೆಂಪೇಗೌಡರ ಸಂಗೀತ ಕಾರ್ಯಕ್ರಮ ನಡೆಯಿತು. ಗೌಡರು ಮೈ ಮರೆತು ಹಾಡಿದರು. ಕಾರ್ಯಕ್ರಮ ಮುಗಿದಾಗ ಸ್ವಾಮಿ ವಿವೇಕಾನಂದರು ಹೇಳಿದ್ದು: 'ಕೆಂಪೇಗೌಡರದ್ದು ಗಂಧರ್ವರನ್ನೂ ಮೀರಿಸುವಂಥ ಕಂಠ ಮಾಧುರ್ಯ. ಆಸ್ಥಾನ ವಿದ್ವಾಂಸರಾಗುವ ಎಲ್ಲ ಅರ್ಹತೆಯೂ ಅವರಿಗುಂಟು...' ಸ್ವಾಮೀಜಿಯವರ ಮಾತು ಮುಗಿಯುತ್ತಿದ್ದಂತೆಯೇ ಗೌಡರಿಗೆ ಆಸ್ಥಾನ ವಿದ್ವಾನ್ ಪಟ್ಟ ನೀಡಲು ಮಹಾರಾಜರು ಮುಂದಾದರು. ಆದರೆ, ಯಾವುದೇ ಪದವಿ ಕುರಿತೂ ನನಗೆ ಆಸಕ್ತಿಯಿಲ್ಲ ಎಂದು ಹೇಳಿದ ಗೌಡರು ಎದ್ದು ಹೊರಟೇಬಿಟ್ಟರು. ಆಗ, ಅಲ್ಲಿದ್ದ ಹಿರಿಯ ಸಂಗೀತಗಾರರೆಲ್ಲ ಸೇರಿ, ದಿನವೂ ಸಂಜೆ ಅರಮನೆಗೆ ಬಂದು ಹಾಡಿ ಹೋಗುವಂತೆ ಗೌಡರ ಮನವೊಲಿಸಿದರಂತೆ.ಹಾಡುವುದು ನನ್ನ ಧರ್ಮ. ಅದು ಕಲಾಸೇವೆ ಎಂದು ನಂಬಿದ್ದ ಗೌಡರು ಯಾವತ್ತೂ ಹಣ ಸಂಪಾದನೆಯ ಬಗ್ಗೆ ಯೋಚಿಸಲಿಲ್ಲ. ಪರಿಣಾಮ, ಬದುಕಿನುದ್ದಕ್ಕೂ ಬರಿಗೈ ಬಂಟನಾಗಿಯೇ ಉಳಿದರು. ಮೋಹದ ಹೆಂಡತಿಯ ನೆನಪು ಮತ್ತೆ ಮತ್ತೆ ಕಾಡಿದಾಗ, ಆ ನೋವು ಮರೆಯಲು ಕುಡಿತದ ಮೊರೆ ಹೋದರು. ಒಂದೆರಡು ಸಂದರ್ಭದಲ್ಲಿ ಕಂಠಪೂರ್ತಿ ಕುಡಿದೇ ದರ್ಬಾರ್‌ಗೆ ಬಂದರು. ಆದರೆ ಹಾಡಲು ಆರಂಭಿಸಿದಾಗ ಕೇಳಿಸಿದ್ದು ಅದೇ ಗಂಧರ್ವಗಾನ. ಈ ಸಂದರ್ಭದಲ್ಲಿ ಗೌಡರ ಜನಪ್ರಿಯತೆ ಕಂಡು ಒಳಗೊಳಗೆ ಕುದಿಯುತ್ತಿದ್ದವರೆಲ್ಲ ಒಟ್ಟಾಗಿ ಮಹಾರಾಜರ ಬಳಿ ಹೋದರು. ದರ್ಬಾರ್‌ಗೆ ಕುಡಿದು ಬಂದ ಕೆಂಪೇಗೌಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಗ ಮಹಾರಾಜರು 'ಆತನ ಮಧುರಗಾಯನಕ್ಕಾಗಿ ಅಂಥ ಹತ್ತು ತಪ್ಪುಗಳನ್ನು ನಾನು ಒಪ್ಪಿಕೊಳ್ಳಬಲ್ಲೆ' ಎಂದರಂತೆ!ಇಂಥ ಹಿನ್ನೆಲೆಯ ಕೆಂಪೇಗೌಡರು ಅದೊಮ್ಮೆ ತಂಜಾವೂರ್‌ಗೆ ಬಂದರು. ಆಗಲೇ ಅವರ ಆರೋಗ್ಯ ಕೆಟ್ಟಿತು. ಕೈಯಲ್ಲಿ ಬಿಡಿಗಾಸೂ ಇಲ್ಲದ ಕಾರಣ ಪಾಳು ಛತ್ರವೊಂದರಲ್ಲಿ ಮಲಗಿ ಬಿಟ್ಟರು. ದಿನ ಕಳೆದು ಸ್ವಲ್ಪ ಚೇತರಿಸಿಕೊಂಡಾಗ ಛತ್ರದ ಎದುರಿಗಿದ್ದ ಗುಡಿಸಿಲಿನಲ್ಲಿದ್ದ ತಾಯಿ-ಮಗಳು ಅಳುತ್ತಿರುವುದು ಕೇಳಿಸಿತು. ತಕ್ಷಣವೇ ಹೋಗಿ ವಿಚಾರಿಸಿದರು. 'ಮಗಳಿಗೆ ಮದುವೆ ನಿಶ್ಚಯವಾಗಿದೆ ಸ್ವಾಮೀ. 3 ಸಾವಿರ ರೂ.ಗಳನ್ನು ವರದಕ್ಷಿಣೆಯ ರೂಪದಲ್ಲಿ ಕೊಟ್ಟರೆ ಮಾತ್ರ ಮದುವೆ ಎಂದು ಗಂಡಿನ ಕಡೆಯವರು ಹೇಳುತ್ತಿದ್ದಾರೆ. ಅಷ್ಟು ಹಣ ನಮ್ಮಲ್ಲಿಲ್ಲ. ಹಾಗಾಗಿ ಮದುವೆ ನಿಂತು ಹೋಗುತ್ತದೆ' ಎನ್ನುತ್ತಾ ಆ ತಾಯಿ ಅಳುವುದನ್ನು ಮುಂದುವರಿಸಿದಳು. ಗೌಡರು ತಕ್ಷಣವೇ ತಂಜಾವೂರ್‌ನಲ್ಲಿದ್ದ ತಮ್ಮ ಪರಿಚಯದ ವರ್ತಕರ ಬಳಿ ಹೋದರು. ತುರ್ತಾಗಿ ಹಣಬೇಕು ಅಂದರು. 'ಅಡಮಾನ ಇಟ್ಟುಕೊಳ್ಳದೆ ಯಾವುದೇ ವ್ಯವಹಾರವನ್ನೂ ನಾನು ಮಾಡುವುದಿಲ್ಲ' ಎಂದು ಆ ವರ್ತಕ ಹೇಳಿದಾಗ, ತಮ್ಮಲ್ಲಿ ಬೇರೇನೂ ಇಲ್ಲದ್ದರಿಂದ ಭೈರವಿ ರಾಗವನ್ನೇ ಒತ್ತೆ ಇಟ್ಟು ಹಣ ಪಡೆದು, ಆ ಅಪರಿಚಿತ ಕುಟುಂಬದ ಮದುವೆಗೆ ನೆರವಾದರು. ಆನಂತರದಲ್ಲಿ ಅವರು ಭೈರವಿ ರಾಗವನ್ನು ಹಾಡಲೇ ಇಲ್ಲ. ಮುಂದೊಮ್ಮೆ ತುಮಕೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭೈರವಿ ರಾಗದಲ್ಲಿ ಹಾಡಲೇಬೇಕೆಂದು ಪ್ರೇಕ್ಷಕರು ಪಟ್ಟು ಹಿಡಿದರು. ಆಗ, ಹಾಡುವುದನ್ನು ಅಷ್ಟಕ್ಕೇ ನಿಲ್ಲಿಸಿದ ಕೆಂಪೇಗೌಡರು ದಿಢೀರನೆ ವೇದಿಕೆಯಿಂದ ನಿರ್ಗಮಿಸಿದರು. ಉಳಿದ ಸಂಗೀತಗಾರರಿಂದ ವಿಷಯ ತಿಳಿದ ತುಮಕೂರಿನ ಕಲಾರಸಿಕರು ನೇರವಾಗಿ ತಂಜಾವೂರ್‌ಗೆ ಹೋಗಿ ಆ ವರ್ತಕನಿಗೆ ಹಣ ಪಾವತಿಸಿ ಭೈರವಿ ರಾಗದ ಅಡಮಾನವನ್ನು ಬಿಡಿಸಿದರಂತೆ. ಪರಿಣಾಮ, ಕೆಂಪೇಗೌಡರು ಮತ್ತೆ ಹಾಡಿದರು. ಗಂಧರ್ವ ಗಾಯನ ಮತ್ತೆ ಧರೆಗಿಳಿದು ಬಂತು!ಆನಂತರದಲ್ಲಿ ಗೌಡರು ಮಹಾರಾಜರೊಂದಿಗೆ ಕೋಲ್ಕತ್ತಾಗೆ ಹೋಗುತ್ತಾರೆ. ದುರಾದೃಷ್ಟಕ್ಕೆ, ದಿಢೀರ್ ಅನಾರೋಗ್ಯದಿಂದ ಮಹಾರಾಜರು ತೀರಿ ಹೋಗುತ್ತಾರೆ. ಈ ಶಾಕ್‌ನಿಂದ ತತ್ತರಿಸಿ ಹೋದ ಗೌಡರು ವೈರಾಗ್ಯ ಭಾವದಿಂದ ಹಿಮಾಲಯಕ್ಕೆ ಹೋಗಿ ಬಿಡುತ್ತಾರೆ. ಕೆಲ ವರ್ಷಗಳ ನಂತರ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅನಾಥರಂತೆ ಸತ್ತು ಹೋಗುತ್ತಾರೆ!----ಕೆಂಪೇಗೌಡರನ್ನು ಕುರಿತು ಡಿ.ವಿ.ಜಿಯವರು, ಮೈಸೂರು ವಾಸುದೇವಾಚಾರ್ಯರು ಒಂದೊಂದು ಅಧ್ಯಾಯ ಬರೆದಿದ್ದಾರೆ. ಎಚ್.ಎಲ್. ನಾಗೇಗೌಡರು ಒಂದು ಕಾದಂಬರಿ ಬರೆದಿದ್ದಾರೆ ಎಂಬುದನ್ನು ಬಿಟ್ಟರೆ, ಈ ಮಹಾನ್ ಗಾಯಕನ ಕುರಿತು ಯಾವುದೇ ಮಾಹಿತಿಯೂ ಲಭ್ಯವಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಮಹಿಮರಿಂದ ಹೊಗಳಿಸಿಕೊಂಡ ಗಾಯಕನ ವಿಷಯವಾಗಿ ಇಂಥದೊಂದು ನಿರ್ಲಕ್ಷ್ಯ ಖಂಡಿತ ಸಲ್ಲದು, ಅಲ್ಲವೇ?


- ಎ.ಆರ್. ಮಣಿಕಾಂತ್armanikanth@gmail.com


















ಸ್ವಗತಕ್ಕೆ ಹಾಡಿದ ಹಾಡು ಸಿರಿಸಂಪತ್ತಿಗೆ ಸ್ವಾಗತ ಹಾಡಿತು!

ಸ್ವಗತಕ್ಕೆ ಹಾಡಿದ ಹಾಡು ಸಿರಿಸಂಪತ್ತಿಗೆ ಸ್ವಾಗತ ಹಾಡಿತು!

ಭಾವತೀರಯಾನ- ಎ.ಆರ್.ಮಣಿಕಾಂತ್


'ಅವಳು ಬಡವರ ಮನೆಯ ಹುಡುಗಿ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡವಳು. ಬಹಳ ಒಳ್ಳೆಯವಳು. ಅಪಾರ ದೈವಭಕ್ತೆ. ಈ ಹುಡುಗಿಗೆ, ರಾಜಕುಮಾರಿ ಆಗಬೇಕೆಂಬ ಆಸೆಯಿತ್ತಂತೆ. ಅದೊಮ್ಮೆ ಗೆಳೆಯರೊಂದಿಗೆ ವಿಹಾರ ಹೊರಟಾಗ ಆಕೆ ದಾರಿ ತಪ್ಪಿದಳಂತೆ. ಮನೆ ತಲುಪುವ ದಾರಿ ಗೊತ್ತಾಗದೆ ಕಂಗಾಲಾಗಿದ್ದಾಗಲೇ ಆಕೆಗೆ ಒಂದು ಜೊತೆ ಪಾದರಕ್ಷೆಗಳು ಕಾಣಿಸಿದವಂತೆ. ಕುತೂಹಲದಿಂದ ಅವುಗಳನ್ನು ಧರಿಸಿದಾಕ್ಷಣವೇ ಈ ಬಡವರ ಮನೆಯ ಹುಡುಗಿ ರಾಜಕುಮಾರಿಯಾಗಿ ಬದಲಾದಳಂತೆ. ಕೆಲವೇ ಕ್ಷಣಗಳ ನಂತರ ಅದೇ ದಾರಿಯಲ್ಲಿ ಕುದುರೆಯೇರಿ ಬಂದ ರಾಜಕುಮಾರ, ಈಕೆಯನ್ನು ಕರೆದೊಯ್ದನಂತೆ ...' ಇಂಥ ವಿವರಣೆಯ ಚಂದಮಾಮ ಕಥೆಗಳಿಗೆ ನಮ್ಮಲ್ಲಿ ಬರವಿಲ್ಲ. ಸ್ವಾರಸ್ಯವೆಂದರೆ, ಈ ಕಥೆಯಲ್ಲಿರುವ ಪವಾಡದಂಥ ಪ್ರಸಂಗಗಳು ಕೆಲವೊಮ್ಮೆ ನಿಜ ಜೀವನದಲ್ಲೂ ನಡೆದು ಹೋಗುವುದುಂಟು. ಅಂಥದೊಂದು ಪ್ರಸಂಗದ ಆಪ್ತ ವಿವರಣೆಯನ್ನು ನೀವೀಗ ಓದಲಿದ್ದೀರಿ.ಅಂದ ಹಾಗೆ, ನಮ್ಮ ಕಥಾನಾಯಕಿಯ ಹೆಸರು ಚಂದ್ರಲೇಖಾ. ಕೇರಳ ಮೂಲದ ಈಕೆ, ಮಗುವನ್ನು ಮಲಗಿಸುವ ನೆಪದಲ್ಲಿ ಬಾಯಿಪಾಠವಾಗಿ ಹೋಗಿದ್ದ ಚಿತ್ರಗೀತೆಯೊಂದನ್ನು ಹಾಡಿದ್ದಾಳೆ. ಅದೇ ವೇಳೆಗೆ ಮನೆಗೆ ಬಂದ ಚಂದ್ರಲೇಖಾಳ ಬಂಧು, ಆ ಸನ್ನಿವೇಶವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು, ಅದನ್ನು ಯು-ಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾನೆ. ಆನಂತರದಲ್ಲಿ ಪವಾಡ ನಡೆದು ಹೋಗಿದೆ. ಒಂದೇ ವಾರದ ಅವಧಿಯಲ್ಲಿ ಚಂದ್ರಲೇಖಾಳ ಧ್ವನಿ ಲಕ್ಷಾಂತರ ಮಂದಿಯನ್ನು ತಲುಪಿದೆ. ಆನಂತರದಲ್ಲಿ ಚಂದ್ರಲೇಖಾಳ ಬದುಕಿನ ಚಿತ್ರವೇ ಬದಲಾಗಿ ಹೋಗಿದೆ. ಎರಡು ವರ್ಷಗಳ ಹಿಂದೆ ಯಾರೆಂದರೆ ಯಾರಿಗೂ ಪರಿಚಯವಿರದಿದ್ದ ಈಕೆ, ಇವತ್ತು ಕೇರಳದ ಸೆಲೆಬ್ರಿಟಿ ಅನ್ನಿಸಿಕೊಂಡಿದ್ದಾಳೆ. ಮಲಯಾಳಂನ ಹೆಸರಾಂತ ಹಿನ್ನೆಲೆ ಗಾಯಕಿಯರ ಪೈಕಿ ಒಬ್ಬರಾಗಿದ್ದಾರೆ. ಥೇಟ್ ಸಿನಿಮಾ ಕಥೆಯಂತಿರುವ ಚಂದ್ರಲೇಖಾರ ಯಶೋಗಾಥೆ ಆರಂಭವಾಗುವುದು ಹೀಗೆ:ಕೇರಳದ ಅಡೂರಿಗೆ ಸಮೀಪವಿರುವ ಪರಕೋಡ್ ಎಂಬ ಹಳ್ಳಿಯಲ್ಲಿ ಹುಟ್ಟಿದಾಕೆ ಚಂದ್ರಲೇಖಾ. ಸೋದರ-ಸೋದರಿಯರಿಂದ ಕೂಡಿದ್ದ ತುಂಬು ಕುಟುಂಬ ಈಕೆಯದು. ಸ್ವಾರಸ್ಯವೆಂದರೆ, ಚಂದ್ರಲೇಖಾಳ ಮನೆಯಲ್ಲಿ ಯಾರೊಬ್ಬರಿಗೂ ಸಂಗೀತದ ಗಂಧ -ಗಾಳಿ ಇರಲಿಲ್ಲ. ಆದರೆ ಎಲ್ಲರೂ ಹಾಡುತ್ತಿದ್ದರು. ಒಂದರ್ಥದಲ್ಲಿ ಆ ಮನೆಯ ಎಲ್ಲರಿಗೂ ರೇಡಿಯೋವೇ ಮೊದಲ ಗುರು.  ಚಿತ್ರಗೀತೆಗಳನ್ನು ಹೊರತುಪಡಿಸಿದರೆ ಜಾನಪದ ಗೀತೆಗಳು ಹಾಗೂ ದೇವರ ನಾಮಗಳನ್ನು ಹಾಡುವುದು ಚಂದ್ರಲೇಖಾ ಮತ್ತು ಕುಟುಂಬದವರ ಹವ್ಯಾಸವಾಗಿತ್ತು. ಅವತ್ತಿನ ಸಂದರ್ಭದಲ್ಲಿ ಎಲ್ಲ ಮನೆಯ ಮಕ್ಕಳೂ ಹಾಡುತ್ತಿದ್ದ ಕಾರಣದಿಂದ ಚಂದ್ರಲೇಖಾ ಹಾಗೂ ಅವರ ಕುಟುಂಬದವರ ಹಾಡುಗಾರಿಕೆ ಯಾರಿಗೂ ವಿಶೇಷ ಅನ್ನಿಸಲಿಲ್ಲ.ಹೀಗಿರುವಾಗಲೇ, ಚಂದ್ರಲೇಖಾಳ ತಂದೆ ತೀರಿ ಹೋದರು. ಆಗಿನ್ನೂ ಚಂದ್ರಲೇಖಾ ಚಿಕ್ಕ ಹುಡುಗಿ. ಮನೆಯ ಯಜಮಾನನೇ ಹೋಗಿ ಬಿಟ್ಟ ಮೇಲೆ ಇಡೀ ಸಂಸಾರದ ಹೊರೆ ಚಂದ್ರಲೇಖಾರ ತಾಯಿಯ ಮೇಲೆ ಬಿತ್ತು. ಮನೆಮಂದಿಗೆಲ್ಲ ದಿಕ್ಕು ದೆಸೆಯಂತೆ ಯಜಮಾನರು ಇದ್ದಾಗಲೇ ಬಡತನದೊಂದಿಗೆ ಬದುಕುತ್ತಿದ್ದ ಕುಟುಂಬ ಅದು. ಅವರು ಕಣ್ಮರೆಯಾದ ನಂತರದ ಪರಿಸ್ಥಿತಿಯನ್ನು ವಿವರಿಸಿ ಹೇಳಬೇಕಿಲ್ಲ ತಾನೆ? ಅದೊಂದು ದಿನ ಮಕ್ಕಳನ್ನೆಲ್ಲ ಎದುರು ಕೂರಿಸಿಕೊಂಡು ಚಂದ್ರಲೇಖಾರ ಅಮ್ಮ ಹೇಳಿದರಂತೆ: 'ಈವರೆಗೂ ಅನುಭವಿಸಿದೆವಲ್ಲ; ಅದಕ್ಕಿಂತ ಹೆಚ್ಚಿನ ಕಷ್ಟಗಳು ಮುಂದೆ ಎದುರಾಗಬಹುದು. ಯಾವ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಬೇಡಿ. ನಮ್ಮಿಂದ ಪಡೆಯಲು ಆಗದಂತಿರುವ ಯಾವುದೇ ಸವಲತ್ತಿಗೂ ಆಸೆಪಡಬೇಡಿ. ನಮಗಿರುವ ಇತಿಮಿತಿಗಳು ಏನೇನು ಎಂಬುದನ್ನು ಅರ್ಥಮಾಡಿಕೊಂಡು ಹೆಜ್ಜೆ ಮುಂದಿಡಿ...'ಚಂದ್ರಲೇಖಾರ ತಾಯಿ ಮಾಡಿದ ಒಳ್ಳೆಯ ಕೆಲಸವೆಂದರೆ, ತಾವು ಬಡತನದಿಂದ ಕಂಗಾಲಾಗಿದ್ದರೂ ಎದೆಗುಂದದೆ ಮಕ್ಕಳನ್ನು ಶಾಲೆಗೆ ಕಳಿಸಿದ್ದು. ಸೆಕೆಂಡ್ ಕ್ಲಾಸ್ಗೆ ಮೋಸವಿಲ್ಲ ಎಂಬಂಥ ಬುದ್ಧಿವಂತಿಕೆ ಹೊಂದಿದ್ದ ಚಂದ್ರಲೇಖಾ, ಹಾಡುಗಾರಿಕೆಯಲ್ಲಿ ಮಾತ್ರ ಪ್ರತಿ ಬಾರಿಯೂ ಮೊದಲ ಬಹುಮಾನದೊಂದಿಗೇ ಮನೆಗೆ ಬರುತ್ತಿದ್ದಳು. ನಾಲ್ಕು ಬಾರಿ ಕೇಳಿದರೆ ಸಾಕು, ಹಾಡೆಂಬುದು ಆಕೆಗೆ ಬಾಯಿಪಾಠ ಆಗಿ ಬಿಡುತ್ತಿತ್ತು. ಪ್ರತಿಯೊಂದು ಸ್ಪರ್ಧೆಯಲ್ಲೂ ಈಕೆ ಮೊದಲ ಬಹುಮಾನ ಪಡೆಯುತ್ತಿದ್ದುದನ್ನು ಕಂಡು ನೆರೆಹೊರೆಯವರೆಲ್ಲ-'ಚಂದ್ರಾಳನ್ನು ಸಂಗೀತದ ತರಗತಿಗೆ ಸೇರಿಸಿ. ಶಾಸ್ತ್ರೀಯವಾಗಿ ಸಂಗೀತ ಕಲಿತರೆ ಆಕೆಯ ಭವಿಷ್ಯಕ್ಕೆ ಒಳ್ಳೆಯದಾಗುತ್ತೆ' ಎಂದು ಸಲಹೆ ಮಾಡುತ್ತಿದ್ದರು. ಆದರೆ, ಒಂದೊಂದು ಹೊತ್ತಿನ ಅನ್ನ ಸಂಪಾದನೆಗೇ ಕಷ್ಟವಾಗಿರುವಾಗ, ಸಂಗೀತದ ತರಗತಿಗೆ ಹಣ ಹೊಂದಿಸುವುದಾದರೂ ಹೇಗೆ? ಈ ಕಹಿ ಸತ್ಯವನ್ನೇ ವಿವರಿಸಿ ಹೇಳಿದ ಚಂದ್ರಲೇಖಾರ ತಾಯಿ, ನನ್ನ ಸಂಕಟವನ್ನು, ಅಸಹಾಯಕತೆಯನ್ನು ಅರ್ಥಮಾಡ್ಕೋ ಮಗಳೇ ಎನ್ನುತ್ತಾ ಕಣ್ಣೀರಿಟ್ಟರಂತೆ.'ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಅದೃಷ್ಟವಾಗಲಿ, ವಾದ್ಯಗೋಷ್ಠಿಯ ಮಧ್ಯೆ ಸಂಭ್ರಮದಿಂದ ಹಾಡುವ ಯೋಗವಾಗಲಿ ನನಗಿಲ್ಲ. ನಾನೇನಿದ್ರೂ ಅಡುಗೆ ಮನೆ ಗಾಯಕಿ ಆಗಲಿಕ್ಕೇ ಲಾಯಕ್ಕು...' ಎಂದು ಸ್ವಗತದಲ್ಲಿ ಹೇಳಿಕೊಂಡ ಚಂದ್ರಲೇಖಾ, ಆ ಕ್ಷಣದಲ್ಲೇ ಒಂದು ಮಹತ್ವದ ನಿರ್ಧಾರಕ್ಕೆ ಬಂದಳು: ಬೇಗ ಡಿಗ್ರಿ ಮುಗಿಸಬೇಕು. ನಂತರ, ಸ್ಕಾಲರ್ಶಿಪ್ನ ಸಹಾಯದಿಂದ ಮಾಸ್ಟರ್ ಡಿಗ್ರಿ ಮಾಡಬೇಕು. ನೌಕರಿಗೆ ಸೇರಿಕೊಂಡು ಅಮ್ಮನ ಕಷ್ಟವನ್ನು ಕಡಿಮೆ ಮಾಡಬೇಕು...ನೋಡ ನೋಡುತ್ತಲೇ ಚಂದ್ರಲೇಖಾರ ಡಿಗ್ರಿ ಮುಗಿಯಿತು. ಮಾಸ್ಟರ್ ಡಿಗ್ರಿಗೆ ಪ್ರವೇಶವೂ ದೊರೆಯಿತು. ಮುಂದಿನ ವರ್ಷಗಳಲ್ಲಿ ಯಾವ್ಯಾವ ಇಲಾಖೆಯಲ್ಲಿ ನೌಕರಿಗೆ ಪ್ರಯತ್ನಿಸಬಹುದು ಎಂದೆಲ್ಲಾ ಚಂದ್ರಲೇಖಾ ಲೆಕ್ಕಾಚಾರ ಹಾಕುತ್ತಿದ್ದಾಗಲೇ ಮದುವೆಯ ಪ್ರಸ್ತಾಪ ಬಂತು. ಗಂಡಿನ ಕಡೆಯವರು ತಮಗಿಂತ ಅನುಕೂಲವಾಗಿದ್ದಾರೆ ಎಂಬುದು ಗೊತ್ತಾದ ತಕ್ಷಣ, ಎರಡನೇ ಯೋಚನೆ ಮಾಡದ ಚಂದ್ರಲೇಖಾರ ತಾಯಿ ಮಗಳ ಮದುವೆ ಮುಗಿಸಿದರು. ತಮ್ಮೊಂದಿಗಿದ್ದು ಬಡತನದ ಮಧ್ಯೆಯೇ ಕಳೆದು ಹೋಗುವ ಬದಲು ಗಂಡನ ಮನೆಯಲ್ಲಿ ಮಗಳು ನೆಮ್ಮದಿಯಿಂದಿರಲಿ ಎಂಬುದು ಆಕೆಯ ಆಸೆಯಾಗಿತ್ತು.ಹೀಗೆ, 2006ರಲ್ಲಿ ಪರಂಗಿ ಮಾಮುಟ್ಟಿಲ್ ಎಂಬ ಊರಿಗೆ ಸೊಸೆಯಾಗಿ ಹೋದಳು ಚಂದ್ರಲೇಖಾ. ಈಕೆಯ ಗಂಡನ ಹೆಸರು ರಘುನಾಥನ್. ಈತ ಎಲ್ಐಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿದ್ದ. ಟೆಂಪರರಿ ನೌಕರಿಯ ಕಾರಣದಿಂದ ಹೆಚ್ಚಿನ ಸಂಬಳದ ಅನುಕೂಲವಿರಲಿಲ್ಲ. ಆದರೇನಂತೆ? ಈ ಬಡತನ ಗಂಡ-ಹೆಂಡಿರ ಮಧುರ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ. ಅವರಿಬ್ಬರೂ ಕೆ.ಎಸ್. ನರಸಿಂಹಸ್ವಾಮಿಯವರ ಪದ್ಯದಲ್ಲಿ ಬರುವ ಆದರ್ಶ ದಂಪತಿಗಳಂತೆ ಬದುಕಿಬಿಟ್ಟರು. ಗಂಡನ ಮಗ್ಗುಲಲ್ಲಿ ಕೂತು, ಒಂದೊಂದೇ ಹಾಡಿಗೆ ದನಿಯಾಗುತ್ತಿದ್ದಳು ಚಂದ್ರಲೇಖಾ. ಆತ ಮೆಚ್ಚುಗೆಯಿಂದ ತಲೆದೂಗಿ, ಒನ್ಸ್ ಮೋರ್ ಅನ್ನುತ್ತಿದ್ದ. ನಿನ್ನ ಕಂಠದೊಳಗೆ ಕೋಗಿಲೆ ಅಡಗಿ ಕೂತಿದೆ ಎಂದು ಹೇಳಿ ಸಂಭ್ರಮಿಸುತ್ತಿದ್ದ. ಕೌಟುಂಬಿಕ ಕಾರ್ಯಕ್ರಮಗಳಲ್ಲಂತೂ ಚಂದ್ರಲೇಖಾರಿಂದ ಹಾಡಿಸುವುದು ಆಕೆಯ ಬಂಧುಗಳ ಪಾಲಿಗೆ 'ಸಂಪ್ರದಾಯವೇ' ಆಗಿ ಹೋಗಿತ್ತು.
1993ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ 'ಚಮಯಂ'ನಲ್ಲಿ ಗಾಯಕಿ ಚಿತ್ರಾ ಹಾಡಿರುವ 'ರಾಜಹಂಸಮೇ ಮಳವಿಲ್ ಕುಡಿಲಿಲ್...' ಎಂಬ 4 ನಿಮಿಷದ ಅವಧಿಯ ಗೀತೆಯೊಂದಿದೆ. ಅದು ಚಂದ್ರಲೇಖಾರ ಫೇವರಿಟ್ ಸಾಂಗ್. ಅದನ್ನು ಎಷ್ಟು ಬಾರಿ ಹೇಳಿದರೂ ಈಕೆಗೆ ಸಮಾಧಾನವಿಲ್ಲ. ವಿಶೇಷವೇನೆಂದರೆ ಚಿತ್ರಾ ಹಾಡಿದ್ದರಲ್ಲ; ಅಷ್ಟೇ ಮಧುರವಾಗಿ ಈಕೆಯೂ ಹಾಡುತ್ತಿದ್ದರು. ಈ ವೇಳೆಗೆ ಚಂದ್ರಲೇಖಾರ ಬದುಕಿಗೆ ಪುಟ್ಟ ಕಂದಮ್ಮನೂ ಬಂದಿತ್ತು. ಮಗುವಿಗೆ ಲಾಲಿ ಹಾಡಬೇಕು ಅನ್ನಿಸಿದಾಗ, ಮಲಗಿಸಬೇಕು ಅನ್ನಿಸಿದಾಗ, ಗಂಡನನ್ನು ಖುಷಿಪಡಿಸಬೇಕು ಅನ್ನಿಸಿದಾಗ, ಏಕಾಂತದಿಂದ ಮುಕ್ತಿ ಪಡೆಯಬೇಕು ಅನ್ನಿಸಿದಾಗೆಲ್ಲ ಮೂಲ ಗಾಯಕಿ ಚಿತ್ರಾಗೆ ಮನದಲ್ಲೇ ಕೈ ಮುಗಿದು ಚಂದ್ರಲೇಖಾ ಹಾಡುತ್ತಿದ್ದರು: ' ರಾಜಹಂಸಮೇ ಮಳವಿಲ್ ಕುಡಿಲಿಲ್...' ಹಾಡು ಮುಗಿವ ವೇಳೆಗೆ ಎದುರಿಗಿದ್ದವರ ಕಂಗಳಲ್ಲಿ ಆನಂದಭಾಷ್ಪ ತುಂಬಿರುತ್ತಿತ್ತು.ಅವತ್ತು 2012ರ ಸೆಪ್ಟೆಂಬರ್ 22, ಶನಿವಾರ. ಕೇರಳದ ಜನರೆಲ್ಲಾ ಓಣಂ ಹಬ್ಬದ ಸಡಗರದಲ್ಲಿದ್ದರು. ಹಬ್ಬದ ನೆಪದಲ್ಲಿ ರಘುನಾಥನ್ರ ಮನೆಗೆ, ಹತ್ತಿರದ ಬಂಧು ದರ್ಶನ್ ಎಂಬಾತ ಬಂದ. ಆ ವೇಳೆಗೆ, ಮುದ್ದು ಕಂದನನ್ನು ಎತ್ತಿಕೊಂಡು, ಅಡುಗೆ ಮನೆಯಲ್ಲಿ ಅತ್ತಿಂದಿತ್ತ ತಿರುಗುತ್ತಾ 'ರಾಜಹಂಸ ಮೇ ಮಳವಿಲ್ ಕುಡಿಲಿಲ್... ' ಎಂದು ಹಾಡುತ್ತಿದ್ದರು ಚಂದ್ರಲೇಖಾ. ಆಕೆಯ ಧ್ವನಿಯ ಏರಿಳಿತ, ಶುದ್ಧ, ಸ್ಪಷ್ಟ ಉಚ್ಚಾರಣೆ ಮತ್ತು ಆಕೆಯ ಮಧುರ ದನಿಗೆ ಮಾರುಹೋದ ಆತ, 'ಅಕ್ಕಾ, ಇನ್ನೊಮ್ಮೆ ಹಾಡಿ ಪ್ಲೀಸ್ ' ಎಂದಿದ್ದಾನೆ. ಈ ಬಾರಿ ಚಂದ್ರಲೇಖಾ ಹಾಡುತ್ತಿದ್ದಂತೆಯೇ ಆ ಕ್ಷಣಗಳನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಮನೆಯಿಂದ ಎದ್ದು ಬರುವ ಮುನ್ನ,- 'ಈ ಹಾಡು ನಿನ್ನ ಜೀವನಕ್ಕೆ ಒಂದು ಟರ್ನ್ ಕೊಡುತ್ತೆ ಅಕ್ಕಾ. ಈ ಮಾತು ನೆನಪಿಟ್ಕೋ' ಎಂದಿದ್ದಾನೆ. ಆನಂತರ ರೆಕಾರ್ಡ್ ಮಾಡಿಕೊಂಡಿದ್ದನ್ನು ಯು-ಟ್ಯೂಬ್ಗೆ ಅಪ್ಲೋಡ್ ಮಾಡಿ-'ಈ ಗೀತೆಯನ್ನು ಒರಿಜಿನಲ್ ಗಾಯಕಿ ಚಿತ್ರಾ ಅವರಂತೆಯೇ ಹಾಡಿರುವಾಕೆ ನನ್ನ ಹತ್ತಿರದ ಬಂಧು. ನೀವೊಮ್ಮೆ ಈ ಹಾಡು ಕೇಳಿ. ಅಭಿಪ್ರಾಯ ದಾಖಲಿಸಿ' ಎಂದು ವಿನಂತಿಸಿದ್ದಾನೆ.ನಂತರದ ಮೂರೇ ದಿನಗಳಲ್ಲಿ ಪವಾಡ ನಡೆದು ಹೋಗಿದೆ. ಈ ಅವಧಿಯಲ್ಲಿ ಯು-ಟ್ಯೂಬ್ನಲ್ಲಿದ್ದ ಚಂದ್ರಲೇಖಾರ ಹಾಡನ್ನು 3 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದರು!ಮೂಲಗಾಯಕಿಗಿಂಥ ಈಕೆಯೇ ಚೆನ್ನಾಗಿ ಹಾಡಿದ್ದಾಳೆ ಎಂದೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯಿಂದ ಖುಷಿಯಾದ ದರ್ಶನ್, ಮರುದಿನವೇ ಯು-ಟ್ಯೂಬ್ನಲ್ಲಿದ್ದ ಮಾಹಿತಿಯೊಂದಿಗೆ ಚಂದ್ರಲೇಖಾರ ಮೊಬೈಲ್ ನಂಬರನ್ನು ಹಾಕಿಬಿಟ್ಟ. ಮರುದಿನದಿಂದಲೇ ಚಂದ್ರಲೇಖಾರ ಫೋನ್ ಮೊರೆಯತೊಡಗಿತು. ಕೇರಳ ಮಾತ್ರವಲ್ಲ, ದಿಲ್ಲಿ, ಕೋಲ್ಕತಾ, ದುಬೈ, ಇಟಲಿ, ಫ್ರಾನ್ಸ್, ಜರ್ಮನಿ, ಅಮೆರಿಕಗಳಿಂದಲೂ ಜನ ಫೋನ್ ಮಾಡಿದರು. ಎಲ್ಲರದ್ದೂ ಒಂದೇ ಮನವಿ; 'ಒಂದೇ ಒಂದ್ಸಲ ರಾಜಹಂಸಮೇ... ಹಾಡು ಹೇಳಿ ಪ್ಲೀಸ್...' ನಡೆಯುತ್ತಿರುವುದೆಲ್ಲಾ ಕನಸೋ, ಭ್ರಮೆಯೋ ಎಂದು ನಿರ್ಧರಿಸಲಾಗದೆ ಸುಸ್ತಾಗುವವರೆಗೂ ಫೋನ್ ಕರೆ ಸ್ವೀಕರಿಸುತ್ತಾ, ಫೋನ್ನಲ್ಲಿಯೇ ಹಾಡು ಹೇಳುತ್ತಾ ದಿನಗಳನ್ನು ಕಳೆದರು ಚಂದ್ರಲೇಖಾ.
ನಾಲ್ಕೇ ನಿಮಿಷಗಳ ಹಾಡಿನ ಕಾರಣದಿಂದ ಚಂದ್ರಲೇಖಾರ ಹೆಸರು ಎಲ್ಲ ಮನೆ-ಮನಗಳನ್ನು ತಲುಪಿ ವಾರ ಕಳೆದಿರಲಿಲ್ಲ; ಆಗಲೇ ಕೈರಳಿ ಚಾನೆಲ್ನವರು ಈಕೆಯ ಸಂದರ್ಶನದ ನೇರ ಪ್ರಸಾರ ಇಟ್ಟುಕೊಂಡರು. ಅವತ್ತು ತನ್ನ ಕುಟುಂಬದ ಬಡತನ, ರೇಡಿಯೋದ ನೆರವಿನಿಂದಲೇ ಕಲಿತ ಹಾಡುಗಾರಿಕೆ, ಅರ್ಧಕ್ಕೆ ನಿಂತ ಓದು, ಗಂಡನಿಂದ ದೊರೆತ ಪ್ರೋತ್ಸಾಹವನ್ನು ಹೇಳಿಕೊಂಡಳು. ಈಗಲೂ ನನಗೆ ಮೇಲ್, ಯು-ಟ್ಯೂಬ್, ಫೇಸ್ಬುಕ್ನ ಪರಿಚಯವಿಲ್ಲ. ಹೀಗಿರುವಾಗ, ನನ್ನನ್ನು ಹೊಸದೊಂದು ಪ್ರಪಂಚಕ್ಕೆ ಪರಿಚಯಿಸಿದಾತ ನಮ್ಮ ಬಂಧು ದರ್ಶನ್. ಅವನಿಗೆ ಕೋಟಿ ಕೋಟಿ ಪ್ರಣಾಮಗಳು ಎಂದೆಲ್ಲಾ ಹೇಳಿದ ಚಂದ್ರಲೇಖಾ, ಕಡೆಗೆ, ಸಂಕೋಚದಿಂದ ಹೇಳಿದರಂತೆ: ನನ್ನ ಹಾಡನ್ನು ಎಷ್ಟೊಂದು ಜನ ಮೆಚ್ಚಿಕೊಂಡಿದ್ದಾರೆ. ಅಂಥದೇ ಒಂದು ಮೆಚ್ಚುಗೆಯ ಮಾತನ್ನು ಈ ಹಾಡಿನ ಮೂಲ ಗಾಯಕಿಯೂ, ನನ್ನ ಮಾನಸ ಗುರುವೂ ಆದ ಚಿತ್ರಾ ಅವರಿಂದ ಕೇಳಿ ಬಿಟ್ಟರೆ, ಜೀವನ ಸಾರ್ಥಕ ಆಯ್ತು ಅಂದ್ಕೋತೇನೆ...ಚಂದ್ರಲೇಖಾರ ಮಾತು ಮುಗಿದು ಎರಡು ನಿಮಿಷ  ಕಳೆವ ಮೊದಲೇ ಕೈರಳಿ ಚಾನೆಲ್ನವರು ಗಾಯಕಿ ಚಿತ್ರಾ ಅವರನ್ನು ಸಂಪರ್ಕಿಸಿದರು. ಆಗ ಚಿತ್ರಾ ಹೇಳಿದರಂತೆ:'ಚಂದ್ರಾ, ರಾಜಹಂಸಮೇ... ಹಾಡನ್ನು ನನಗಿಂತ ಎರಡು ಪಟ್ಟು ಚೆನ್ನಾಗಿ ಹಾಡಿದೀಯ. ನನಗೂ ಒಮ್ಮೆ ಕೇಳಬೇಕು ಅನ್ನಿಸ್ತಿದೆ. ಹಾಡಮ್ಮಾ, ಪ್ಲೀಸ್...' ಈ ಮಾತು ಕೇಳಿ ಭಾವುಕರಾದ ಚಂದ್ರಲೇಖಾ, ಕಂಬನಿ ಒರೆಸಿಕೊಳ್ಳುವುದನ್ನೂ ಮರೆತು ಹಾಡಿದರು. ನಂತರ ಸ್ಮರಣೀಯ ಮಾತು ಮತ್ತು ಕ್ಷಣಗಳೊಂದಿಗೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗಲೇ ಚಂದ್ರಲೇಖಾರ ಮೊಬೈಲ್ ಮೊರೆಯಿತು. ಆ ಕಡೆಯಿಂದ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಾತಾಡುತ್ತಿದ್ದರು. ಅವರದ್ದೂ ಅದೇ ವಿನಂತಿ:'ರಾಜಹಂಸಮೇ... ಹಾಡು ಕೇಳಬೇಕಲ್ಲಮ್ಮಾ... ಈಗಲೇ ಒಮ್ಮೆ ಹಾಡ್ತೀಯ?'ಈಗ ಏನಾಗಿದೆ ಗೊತ್ತೆ? ಚಂದ್ರಲೇಖಾರ ಸಿರಿಕಂಠಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ತಮಿಳು ಹಾಗೂ ಮಲಯಾಳಂನ ಸಂಗೀತ ನಿರ್ದೇಶಕರು ಆಕೆಯ ಮನೆಯ ಮುಂದೆ ಕ್ಯೂ ನಿಂತಿದ್ದಾರೆ. ನನಗೆ ಸಂಗೀತ ಹಾಗೂ ರಾಗಗಳ ಪರಿಚಯವಿಲ್ಲ. ವಾದ್ಯಗೋಷ್ಠಿಯ ಮಧ್ಯೆ ಹಾಡಿ ಅಭ್ಯಾಸವಿಲ್ಲ ಎಂದು ಆಕೆ ಹೇಳಿದರೆ, ಅದನ್ನೆಲ್ಲ ನಾವು ಸರಿ ಮಾಡ್ಕೋತೇವೆ. ಅದರ ಬಗ್ಗೆ ಯೋಚಿಸಬೇಡಿ. ನಮಗೆ ನಿಮ್ಮ ವಾಯ್ಸ್ ಬೇಕು ಅಷ್ಟೇ ಎಂದಿದ್ದಾರೆ. ಭಕ್ತಿಗೀತೆಗಳನ್ನು ಹಾಡುವಂತೆ ಹಲವು ದೇವಾಲಯಗಳ ಪ್ರಮುಖರು ವಿನಂತಿಸಿದ್ದಾರೆ. ಸಂಗೀತ ಕಾರ್ಯಕ್ರಮ ನೀಡುವಂತೆ ವಿದೇಶಗಳಿಂದಲೂ ಆಹ್ವಾನ ಬರತೊಡಗಿವೆ. ಈವರೆಗೂ ಹಿನ್ನೆಲೆಗಾಯಕಿ ಎಂದಾಕ್ಷಣ, ಶ್ರೇಯಾ ಘೋಷಾಲ್ ಬೇಕು ಎನ್ನುತ್ತಿದ್ದ ನಿರ್ಮಾಪಕರು ಈಗ ಥಟ್ಟನೆ ವರಸೆ ಬದಲಿಸಿ, ಶ್ರೇಯಾ ಬದಲು ಚಂದ್ರಲೇಖಾ ಇರಲಿ ಅನ್ನುತ್ತಿದ್ದಾರೆ! ಪರಿಣಾಮ, ಮೊನ್ನೆ ಮೊನ್ನೆಯವರೆಗೂ ಅಡುಗೆ ಮನೆಯಲ್ಲಿ ನಿಂತು ಸಂಕೋಚದಿಂದ ಹಾಡುತ್ತಿದ್ದ ಚಂದ್ರಲೇಖಾ, ಈಗ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಜಗತ್ತನ್ನೇ ಮರೆತು ಹಾಡತೊಡಗಿದ್ದಾರೆ.
ನಾಲ್ಕೇ ನಿಮಿಷದ ಹಾಡು ಒಬ್ಬರ ಬದುಕಲ್ಲಿ ಹೀಗೆಲ್ಲಾ ಪವಾಡಗಳನ್ನು ಮಾಡಲು ಸಾಧ್ಯವಾ ಎಂಬ ಕೌತುಕವನ್ನು ಅಂಗೈಲಿ ಹಿಡಿದುಕೊಂಡೇ ಯು-ಟ್ಯೂಬ್ನಲ್ಲಿ ಚಂದ್ರಲೇಖಾರ ಹಾಡು ಕೇಳಿ. ಪ್ರಾಮಿಸ್: ಹಾಡು ಕೇಳುತ್ತಿದ್ದಂತೆಯೇ ಖುಷಿಯಾಗುತ್ತದೆ. ಅದು ಮುಗಿದಾಗ- ಕಣ್ತುಂಬಿಕೊಳ್ಳುತ್ತದೆ!

- ಎ.ಆರ್. ಮಣಿಕಾಂತ್armanikanth@gmail.com

















ಜೀವನದ ಜೀಕುಗಳಲ್ಲಿ ಜವೇರಿ ದಾಖಲಿಸಿದ 'ಛಂದ' ಯಶೋಗಾಥೆ

ಜೀವನದ ಜೀಕುಗಳಲ್ಲಿ ಜವೇರಿ ದಾಖಲಿಸಿದ 'ಛಂದ' ಯಶೋಗಾಥೆ

ಭಾವತೀರಯಾನ- ಎ.ಆರ್.ಮಣಿಕಾಂತ್
ಈಕೆ, ಕೋಲ್ಕತಾದಲ್ಲಿ ನೆಲೆಗೊಂಡಿದ್ದ ಮಾರ್ವಾಡಿ ಕುಟುಂಬದ ಹುಡುಗಿ. ಓದಿನಲ್ಲಿ ಮುಂದಿದ್ದಳು. ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು, ಪ್ರಶಸ್ತಿಗಳನ್ನು ಪಡೆಯಬೇಕು ಎಂದೆಲ್ಲಾ ಕನಸು ಕಂಡಿದ್ದಳು. ಆದರೆ 17 ವರ್ಷ ತುಂಬುತ್ತಿದ್ದಂತೆಯೇ, ಗಂಡ, ಮನೆ- ಮಕ್ಕಳು ಎಂಬ ಸೆಂಟಿಮೆಂಟಿನ ಮಧ್ಯೆ ಮೂಲೆಗುಂಪಾಗಿ ಬಿಡ್ತೀನಿ. ಗೃಹಿಣಿಯಾದರೆ ಮಹತ್ಸಾಧನೆ ಮಾಡಲು ಸಾಧ್ಯವಾಗೋದಿಲ್ಲ ಎಂದುಕೊಂಡ ಈಕೆ, ಮನೆಯಲ್ಲಿ ಒಂದು ಮಾತೂ ಹೇಳದೆ ಅಮೆರಿಕದ ವಿಮಾನ ಹತ್ತಿಬಿಟ್ಟಳು! ನಂತರದ ಮೂರು ದಶಕಗಳಲ್ಲಿ, ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿ, ಅದೇ ಅಮೆರಿಕದಲ್ಲಿ ಕೋಟ್ಯಧಿಪತಿ ಅನ್ನಿಸಿಕೊಂಡಳು!!   ಅಂದ ಹಾಗೆ, ಈಕೆಯ ಹೆಸರು ಛಂದಾ ಜವೇರಿ. ಈಕೆಯ ಯಶೋಗಾಥೆ, ಯಾವುದೇ ಸಿನಿಮಾ ಕಥೆಯನ್ನು ಮೀರಿಸುವಂತಿದೆ. "ಈಗ ಹಿಂತಿರುಗಿ ನೋಡಿದ್ರೆ, ಅಬ್ಬಾ... ನಾನು ನಡೆದು ಬಂದ ದಾರಿ ಎಷ್ಟೊಂದು ವಿಚಿತ್ರ ತಿರುವುಗಳಿಂದ, ಅಚ್ಚರಿಗಳಿಂದ ಕೂಡಿದೆಯಲ್ಲ ಅನ್ನಿಸಿ ನನಗೇ ಬೆರಗಾಗುತ್ತಿದೆ ಎನ್ನುವ ಛಂದಾ, ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟಿದ್ದು ಹೀಗೆ:'ನಮ್ಮ ತಂದೆ-ತಾಯಿಗೆ ನಾಲ್ಕು ಮಕ್ಕಳು: ಎರಡು ಹೆಣ್ಣು. ಎರಡು ಗಂಡು. ನಾನೇ ಮೊದಲನೆಯವಳು. ನಾನು, ಓದಿನಲ್ಲಿ ಚುರುಕಾಗಿದ್ದೆ. ಡಿಗ್ರಿ ಓದಿ ವಿಜ್ಞಾನಿಯಾಗಬೇಕು, ಸಂಶೋಧನೆ ಮಾಡಬೇಕು ಎಂದೆಲ್ಲಾ ಕನಸು ಕಂಡಿದ್ದೆ. ಜೀವಶಾಸ್ತ್ರ, ನನ್ನ ಫೇವರಿಟ್ ಸಬ್ಜೆಕ್ಟ್. ಕೋಲ್ಕತಾದಲ್ಲಿ ನಮ್ಮ ಮನೆಗೆ ತುಂಬ ಹತ್ತಿರದಲ್ಲೇ ಅಮೆರಿಕನ್ ಲೈಬ್ರರಿಯಿತ್ತು. 10ನೇ ತರಗತಿಯ ನಂತರ, ಆ ಲೈಬ್ರರಿಗೆ ನಿಯಮಿತವಾಗಿ ಹೋಗುತ್ತಿದ್ದೆ. ಅಮೆರಿಕನ್ ಪತ್ರಿಕೆಗಳನ್ನು ಓದುವುದು ನನ್ನ ಮೆಚ್ಚಿನ ಹವ್ಯಾಸವಾಯಿತು. ಇದೆಲ್ಲಾ 1982ರ ಮಾತು. ಅವತ್ತೊಂದು ದಿನ ಏನಾಯಿತೆಂದರೆ, ಅಮೆರಿಕನ್ ಲೈಬ್ರರಿಯಿಂದ ಮನೆಗೆ ಹಿಂದಿರುಗುತ್ತಿದ್ದೆ. ಮಧ್ಯಾಹ್ನದ ಹೊತ್ತು. ವಿಪರೀತ ಬಿಸಿಲಿತ್ತು. ಅವಸರದಿಂದ ನಡೆಯುತ್ತಿದ್ದಾಗಲೇ, ವಿದೇಶಿ ಹೆಂಗಸೊಬ್ಬಳು, ರಸ್ತೆಯ ಒಂದು ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಾಣಿಸಿತು. ಆಟೋದವರ ನೆರವಿನಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆ. ಆಕೆ ಅಮೆರಿಕದವಳೆಂದೂ, ಕರೇನ್ ಎಂಬುದು ಆಕೆಯ ಹೆಸರೆಂದೂ, ಹಸಿವು, ನೀರಡಿಕೆ ಹಾಗೂ ಬಿರುಬಿಸಿಲ ತಾಪದಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆಂದೂ, ಆನಂತರದಲ್ಲಿ ತಿಳಿಯಿತು. ಕೋಲ್ಕತಾದ ಮತ್ತೊಂದು ದಿಕ್ಕಿನಲ್ಲಿ ಪ್ರದಕ್ಷಿಣೆ ಹೊರಟಿದ್ದ ಕರೇನ್‌ಳ ಗಂಡ ಡೇವಿಡ್‌ಗೆ ಸಂಜೆಯ ಹೊತ್ತಿಗೆ ವಿಷಯ ತಿಳಿಯಿತು. ಆತ ಓಡೋಡಿ ಬಂದ. ನಡೆದುದನ್ನೆಲ್ಲಾ ವೈದ್ಯರಿಂದ ತಿಳಿದ ಡೇವಿಡ್-ಕರೇನ್ ದಂಪತಿ, ತಮ್ಮ ವಿಳಾಸ ಮತ್ತು ಫೋನ್ ನಂಬರ್ ಕೊಟ್ಟು ಕೇಳಿದರು: 'ನಮ್ಮ ಜೀವ ಉಳಿಸಿದ್ದೀಯ. ಥ್ಯಾಂಕ್ಸ್. ಮುಂದೆ ನಿನಗೇನಾದ್ರೂ ಕಷ್ಟ ಎದುರಾದ್ರೆ ನಮಗೆ ಫೋನ್ ಮಾಡು. ಸಹಾಯ ಮಾಡ್ತೇವೆ.ಅಮೆರಿಕಕ್ಕೆ ಹೋದ ಡೇವಿಡ್ -ಕರೇನ್ ದಂಪತಿ ನನ್ನನ್ನು ಮರೆಯಲಿನಲ್ಲ. ಆಗಿಂದ್ದಾಗ್ಗೆ, ಪತ್ರ ಬರೆದರು. ನಾನೂ ಉತ್ತರಿಸಿದೆ. ಈ ಪತ್ರ ಮೈತ್ರಿಯಿಂದ ನಮ್ಮ ಬಾಂಧವ್ಯ ಗಟ್ಟಿಯಾಯಿತು. ಈ ವೇಳೆಗೆ ನನ್ನ ಪಿಯುಸಿ ಮುಗಿದಿತ್ತು. ಡಿಗ್ರಿ ಓದುವ ಕನಸಲ್ಲಿ ನಾನಿದ್ದೆ. ಆದರೆ ಹೆತ್ತವರ ಯೋಚನೆಯೇ ಬೇರೆಯಿತ್ತು. 17ನೇ ವರ್ಷಕ್ಕೆ ಮದುವೆ ಮಾಡಲು ಅವರು ನಿರ್ಧರಿಸಿದ್ದರು. ಒಳ್ಳೆಯ ಸಂಬಂಧ ಇದ್ರೆ ಹೇಳಿ ಎಂದು ಬಂಧುಗಳಲ್ಲಿ ವಿನಂತಿಸಿದ್ದರು. ವಿಷಯ ತಿಳಿದಾಗ ಪ್ರತಿಭಟಿಸಿದೆ. ಈಗಲೇ ನಂಗೆ ಮದುವೆ ಬೇಡ. ಡಿಗ್ರಿ ಮುಗಿಸೋಕೆ ಅವಕಾಶ ಕೊಡಿ ಎಂದು ಪ್ರಾರ್ಥಿಸಿದೆ. ಆಗ ಎದುರು ನಿಂತ ತಂದೆ ಕಡ್ಡಿ ಮುರಿದಂತೆ ಹೇಳಿಬಿಟ್ಟರು: 'ಹೆಣ್ಣು ಮಕ್ಕಳನ್ನು17-18ನೇ ವಯಸ್ಸಿಗೇ ಮದುವೆ ಮಾಡುವುದು ಮಾರವಾಡಿ ಜನಾಂಗದ ಸಂಪ್ರದಾಯ. ಅದನ್ನು ನಾವು ಪಾಲಿಸ್ತೇವೆ. ನೀನು ಡಿಗ್ರಿ ಮಾಡಿ ಏನಾಗಬೇಕಿದೆ. ಏನೇನೋ ಕನಸು ಕಾಣಬೇಡ. ಸುಮ್ನೆ ಮದುವೆಗೆ ಒಪ್ಪಿಕೋ...'ಮನೆಯಲ್ಲೇ ಉಳಿದು ವಿಜ್ಞಾನಿಯಾಗಬೇಕು ಎಂಬ ಕನಸು ನನಸಾಗೋದಿಲ್ಲ ಅನಿಸಿದ್ದೇ ಆಗ. ಆ ಕ್ಷಣಕ್ಕೆ ನೆನಪಾದವರು ಡೇವಿಡ್-ಕರೇನ್ ದಂಪತಿ. ತಕ್ಷಣವೇ ಅವರಿಗೆ ಪತ್ರ ಬರೆದೆ. ಮದುವೆಯಲ್ಲಿ ನನಗೆ ಆಸಕ್ತಿಯಿಲ್ಲ. ಓದಬೇಕು ಅನ್ನೋದಷ್ಟೇ ನನ್ನ ಆಸೆ. ಅಮೆರಿಕಕ್ಕೆ ಬಂದು ಬಿಡ್ತೀನಿ. ದಯವಿಟ್ಟು ಆಶ್ರಯ ಕೊಡಿ. ಅಲ್ಲಿಗೆ ಬರಬೇಕಾದರೆ ಏನೇನೆಲ್ಲಾ ಸಿದ್ಧತೆ ಮಾಡ್ಕೋಬೇಕು ತಿಳಿಸಿ ಎಂದು ವಿನಂತಿಸಿದ್ದೆ. 'ಕಷ್ಟ ಬಂದಾಗ ನಮ್ಮನ್ನು ನೆನಪಿಸಿಕೋ. ಸಹಾಯ ಮಾಡ್ತೇವೆ' ಎಂದಿದ್ದ ಅವರ ಮಾತನ್ನು ನೆನಪಿಸಿದ್ದೆ. ಮದುವೆಯನ್ನು ವಿರೋಧಿಸಿ ಕೋಲ್ಕತಾದ ಆಸುಪಾಸಿನಲ್ಲಿರುವ ಬಂಧುಗಳ ಮನೆಗೆ ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲವೆಂದೂ ಪತ್ರದಲ್ಲಿ ವಿವರಿಸಿದ್ದೆ.ಆ ಕಡೆಯಿಂದ ತಕ್ಷಣವೇ ಉತ್ತರ ಬಂತು. ಹೆದರಬೇಡ. ಅಮೆರಿಕಕ್ಕೆ ಬಂದು ಬಿಡು ಎಂದು ಡೇವಿಡ್-ಕರೇನ್ ದಂಪತಿ ಉತ್ತರಿಸಿದ್ದರು. ಅಷ್ಟೇ ಅಲ್ಲ, ವೀಸಾ ಪಡೆಯಲು ಅನುಕೂಲವಾಗುವಂತೆ ತಮ್ಮ ಕಂಪನಿಯಿಂದ ಎಜುಕೇಷನ್ ಸ್ಪಾನ್ಸರ್‌ಶಿಪ್‌ನ ಪತ್ರವನ್ನು ಕಳಿಸಿದ್ದರು. ಮಾರ್ವಾಡಿ ಕುಟುಂಬಗಳಲ್ಲಿ ಮಕ್ಕಳು ಚಿಕ್ಕವರಿದ್ದಾಗಲೇ ಪಾಸ್‌ಪೋರ್ಟ್ ಮಾಡಿಸಿ ಬಿಡುತ್ತಾರೆ. ಅಪ್ಪನೇ ನನಗೆ ಪಾಸ್‌ಪೋರ್ಟ್ ಮಾಡಿಸಿದ್ದರು. ಮುಂದೆ, ಕಾಲೇಜಿಗೆ ಹೋಗಿ ಬರುವ ನೆಪದಲ್ಲಿಯೇ ವೀಸಾ ಸಂದರ್ಶನಕ್ಕೆ ಹೋಗಿ ಬಂದೆ. ಡೇವಿಡ್-ಕರೇನ್ ವಾಸವಿದ್ದ ಅಮೆರಿಕದ ಬಾಸ್ಟನ್‌ಗೆ ಹೋಗಲು ತುಂಬ ರಹಸ್ಯವಾಗಿ ಸಿದ್ಧತೆ ಮಾಡಿಕೊಂಡೆ. ನಾನು ಮನೆಯಿಂದ ಪರಾರಿಯಾಗುವ ವಿಷಯ ಮೂವರು ಗೆಳತಿಯರನ್ನು ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ. ನನ್ನಲ್ಲಿದ್ದ ಕಿವಿಯೋಲೆ ಮತ್ತು ಚಿನ್ನದ ಸರವನ್ನು ಮಾರಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಟಿಕೆಟ್ ಖರೀದಿಸಿದೆ. ಪುಟ್ಟ ಲಗೇಜಿನೊಂದಿಗೆ, ಮನೆಯಲ್ಲಿ ಒಂದು ಮಾತೂ ಹೇಳದೆ ಅದೊಂದು ದಿನ ಬಾಸ್ಟನ್‌ನ ವಿಮಾನ ಹತ್ತಿ ಬಿಟ್ಟೆ.ವಿಮಾನ ಆಗಸಕ್ಕೇರಿದ ಮರುಕ್ಷಣವೇ ಮನೆಯವರೆಲ್ಲಾ ನೆನಪಾಗಿ ಬಿಟ್ಟರು. ಮತ್ತೆ ಅವರನ್ನೆಲ್ಲಾ ನೋಡ್ತೀನೋ ಇಲ್ಲವೋ ಅನ್ನಿಸಿದಾಗ ದುಃಖ ಒತ್ತರಿಸಿಕೊಂಡು ಬಂತು. ಅಮೆರಿಕದಲ್ಲಿ ನನ್ನವರೆಂದು ಯಾರೂ ಇಲ್ಲ. ಖರ್ಚಿಗೆ ನಯಾಪೈಸೆಯೂ ಇಲ್ಲ. ಸಂದರ್ಭ ಹೀಗಿರುವಾಗ, ಬೈ ಛಾನ್ಸ್ ಡೇವಿಡ್-ಕರೇನ್ ದಂಪತಿ ಏರ್‌ಪೋರ್ಟ್‌ಗೆ ಬರದೇ ಹೋದ್ರೆ ಗತಿಯೇನು ಅನ್ನಿಸಿದಾಗ ಮಾತ್ರ ಭಯದಿಂದ ನಡುಗಿ ಹೋದೆ. ಆದರೆ ಹಾಗೇನೂ ಆಗಲಿಲ್ಲ. ಬಾಸ್ಟನ್ ಏರ್‌ಪೋರ್ಟ್‌ನಲ್ಲಿ ಡೇವಿಡ್- ಕರೇನ್ ದಂಪತಿ ಕಾದು ನಿಂತಿದ್ದರು.ಮೊದಲು ನನ್ನ ಖರ್ಚಿಗೆ ಕೆಲಸ ಹುಡುಕಬೇಕು. ಒಂದೆರಡು ವರ್ಷ ದುಡಿದು, ನಂತರ ಡಿಗ್ರಿ ಮಾಡಬೇಕು ಎಂಬುದು, ಅಮೆರಿಕಕ್ಕೆ ಬಂದ ಕೆಲವೇ ದಿನಗಳಲ್ಲಿ ಅರ್ಥವಾಗಿ ಹೋಯಿತು. ನನ್ನಲ್ಲಿ ಎಂಪ್ಲಾಯರ್ ವೀಸಾ ಇರಲಿಲ್ಲ. ಹಾಗಾಗಿ, ಹೆಸರಾಂತ ಕಂಪನಿಗಳಲ್ಲಿ ಕೆಲಸ ಕೇಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ, ವಯಸ್ಸಾದವರನ್ನು ಅವರ ಮನೆಯಲ್ಲಿದ್ದುಕೊಂಡೇ ಉಪಚರಿಸುವ 'ಹೌಸ್ ಕೀಪರ್‌' ಕೆಲಸಕ್ಕೆ ಸೇರಿಕೊಂಡೆ. 90 ವರ್ಷ ದಾಟಿದ್ದ ಲೆಸ್ಸಿ ಎಂಬಾಕೆಯನ್ನು ನಾನು ನೋಡಿಕೊಳ್ಳಬೇಕಿತ್ತು. ಕೋಲ್ಕತ್ತಾದಲ್ಲಿ ಆಳು-ಕಾಳುಗಳ ಮಧ್ಯೆ ರಾಣಿಯಂತೆ ಬೆಳೆದಿದ್ದಾಕೆ ನಾನು. ಆದರೆ ಅಮೆರಿಕದಲ್ಲಿ ನಾನೇ ಸೇವಕಿಯಾಗಬೇಕಾಯಿತು. ಡಿಗ್ರಿ ಓದಬೇಕೆಂದರೆ, ಇಂಥ ಅನುಭವಗಳೆಲ್ಲ ಆಗಲೇಬೇಕು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಹೀಗಿರುವಾಗಲೇ- 'ಕುರಿ ಮಾಂಸದ ಅಡುಗೆ ತಯಾರಿಸು' ಎಂದು ಯಜಮಾನಿ ಆದೇಶಿಸಿದಳು. ಅಪ್ಪಟ ಸಸ್ಯಾಹಾರಿಯಾಗಿದ್ದ ನನಗೆ ಮಾಂಸಹಾರ ತಯಾರಿಸಲು ಬರುತ್ತಿರಲಿಲ್ಲ. ಯಜಮಾನಿಗೆ ಅದನ್ನೇ ಹೇಳಿದೆ. ನನ್ನನ್ನೊಮ್ಮೆ ಮರುಕದಿಂದ ನೋಡಿದ ಆಕೆ, ಹೋಟೆಲಿನಿಂದ ತರಿಸೋಣ ಬಿಡು ಎಂದರು. ನಂತರದ ದಿನಗಳಲ್ಲಿ ಬಹಳ ಆತ್ಮೀಯರಾದರು. ನನ್ನ ಆಸೆ ಮತ್ತು ಕನಸುಗಳ ಬಗ್ಗೆ ತಿಳಿದು, ಅದೊಂದು ದಿನ 30 ಸಾವಿರ ಡಾಲರ್ ಹಣವನ್ನು ಕೊಟ್ಟು- 'ಈ ಹಣದಲ್ಲಿ ಡಿಗ್ರಿ ಮುಗಿಸು. ನಿನಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು.ಈ ಮಧ್ಯೆ, ಕೋಲ್ಕತಾದಲ್ಲಿದ್ದ ನನ್ನ ಹೆತ್ತವರಿಗೆ ಡೇವಿಡ್-ಕರೇನ್ ದಂಪತಿ ಪತ್ರ ಬರೆದಿದ್ದರು. ನಮ್ಮ ಕಣ್ಗಾವಲಿನಲ್ಲಿ ಛಂದಾ ಕ್ಷೇಮವಾಗಿದ್ದಾಳೆ. ಅವಳ ಬಗ್ಗೆ ಚಿಂತೆ ಬೇಡ ಎಂದು ವಿವರಿಸಿದ್ದರು. ಹೀಗಿರುವಾಗಲೇ, ಲೆಸ್ಸಿಯವರಿಂದ ಸಿಕ್ಕ ಆರ್ಥಿಕ ನೆರವಿನ ಬಗ್ಗೆ ಡೇವಿಡ್-ಕರೇನ್ ದಂಪತಿಗೆ ತಿಳಿಸಿದೆ. ಅವರಿಗೂ ಖುಷಿಯಾಯಿತು. ಯಾವುದೇ ತೊಂದರೆಯಿಲ್ಲದೇ ಡಿಗ್ರಿ ಮುಗಿಸಿದೆ. ಮುಂದೆ ಮಾಸ್ಟರ್ ಡಿಗ್ರಿ ಮಾಡಬೇಕು ಎಂದುಕೊಂಡಾಗಲೇ, ತಮ್ಮ ಕುಟುಂಬದವರಿಗೆಲ್ಲಾ ನನ್ನನ್ನು ಪರಿಚಯಿಸಿದರು ಡೇವಿಡ್. ಕೋಲ್ಕತಾದಲ್ಲಿ ನನ್ನ ಹೆಂಡತಿಯ ಪ್ರಾಣ ಉಳಿಸಿದ್ದು ಈಕೆ. ಅವಳಿಗೆ ಎಲ್ಲ ರೀತಿಯಲ್ಲೂ ನೆರವಾಗಬೇಕಾದದ್ದು ನಮ್ಮ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಎದ್ದು ನಿಂತ ಡೇವಿಡ್‌ರ ಮಾಮ-'ನನ್ನ ಮಗಳ ಜೀವ ಉಳಿಸಿದವಳು' ನನಗೂ ಮಗಳೇ ಆಗ್ತಾಳೆ. ಅವಳ ಮಾಸ್ಟರ್ಸ್ ಡಿಗ್ರಿ ಓದಿಸುವ ಹೊಣೆ ನನಗಿರಲಿ' ಅಂದರು. ಮುಂದೆ, ಅವರೊಂದಿಗೇ ಕ್ಯಾಲಿಫೋರ್ನಿಯಾಕ್ಕೆ ಬಂದೆ. ಅಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಮಾಸ್ಟರ್ ಡಿಗ್ರಿ ಸಂಪಾದಿಸಿದೆ.ಹೀಗೆ, ಒಂದೊಂದೇ ಯಶಸ್ಸು ಜೊತೆಯಾದಂತೆಲ್ಲಾ ವಯಸ್ಸೂ ಆಗುತ್ತಿತ್ತು. ಬಾಲ್ಯದಿಂದಲೂ ಮುಂದೆ ವಿಜ್ಞಾನಿಯಾಗಬೇಕು. ಮದರ್ ಥೆರೆಸಾ ಥರಾ ಸೇವೆ ಸಲ್ಲಿಸಬೇಕು ಎಂದು ಕನಸು ಕಂಡಿದ್ದವಳು ನಾನು. ಈ ನಿರ್ಧಾರವೇ ಮನದಲ್ಲಿ ಉಳಿದದ್ದಕ್ಕೆ ಏನೋ; ಅಮೆರಿಕಕ್ಕೆ ಬಂದು ಹತ್ತು ವರ್ಷ ಕಳೆದ ನಂತರವೂ ಮದುವೆಯಾಗಬೇಕೆಂದು ಅನ್ನಿಸಲೇ ಇಲ್ಲ. ಬದಲಿಗೆ, ಸಂಶೋಧನೆ ನಡೆಸಬೇಕು ಅನ್ನಿಸಿತು. ನನ್ನ ಅದೃಷ್ಟಕ್ಕೆ, ರಸಾಯನ ಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಒಮ್ಮೆ, ಶಾಂತಿ ಸ್ಥಾಪನೆಗೆಂದು ಹೋರಾಡಿದ್ದಕ್ಕೆ ಮತ್ತೊಮ್ಮೆ -ಹೀಗೆ ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಲೀನಸ್ ಪೌಲಿಂಗ್‌ರ ಮಾರ್ಗದರ್ಶನದಲ್ಲಿ, ಬಯೋ ಕೆಮಿಸ್ಟ್ರಿಯಲ್ಲಿ ರಿಸರ್ಚ್ ವಿದ್ಯಾರ್ಥಿನಿಯಾಗುವ ಅವಕಾಶ ಸಿಕ್ಕಿತು. ಪೌಲಿಂಗ್ ಅವರ ಶಿಷ್ಯೆಯಾಗಬೇಕು, ಅವರ ಸಂಶೋಧನೆಯನ್ನೆಲ್ಲ ಅರ್ಥಮಾಡಿಕೊಳ್ಳಬೇಕು ಅನ್ನಿಸಿತು. ಅದೊಮ್ಮೆ ಪೌಲಿಂಗ್‌ರ ಎದುರು ನಿಂತು ನನ್ನ ಆಸೆ ಹೇಳಿಕೊಂಡೆ. ಯಾವ ಕೆಲಸ ಇದ್ರೂ ಹೇಳಿ ಸರ್. ಸಂತೋಷದಿಂದ ಮಾಡ್ತೇನೆ ಎಂದೆ. ನನ್ನ ವಿದ್ಯಾರ್ಥಿಗಳು ಪ್ರಯೋಗ ನಡೆಸಿದ ನಂತರ ಬಿಟ್ಟು ಹೋಗುವ ಟೆಸ್ಟ್ ಟ್ಯೂಬ್‌ಗಳನ್ನು ತೊಳೆದು ಇಡುವುದು ಹಾಗೂ ಲ್ಯಾಬ್‌ನ ಕಸ ಗುಡಿಸುವುದು...ಇದಿಷ್ಟೇ ಸದ್ಯಕ್ಕೆ ಉಳಿದಿರುವ ಕೆಲಸ ಅಂದರು ಪೌಲಿಂಗ್. ತುಂಬ ಶ್ರದ್ಧೆಯಿಂದ ಆ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ನನಗೆ ಅನಿಸಿದ್ದನ್ನೆಲ್ಲಾ ನೋಟ್ಸ್ ಥರಾ ಬರೆದಿಡುತ್ತಿದ್ದೆ. 90ರ ಇಳಿ ವಯಸ್ಸಿನಲ್ಲಿದ್ದ ಪೌಲಿಂಗ್ ಇದನ್ನೆಲ್ಲಾ ಗಮನಿಸಿದರು. ನಾಲ್ಕು ವರ್ಷ ಪ್ರತಿಫಲಾಪೇಕ್ಷೆಯಿಲ್ಲದೆ ಲ್ಯಾಬ್‌ನ ಪರಿಚಾರಿಕೆಯಾಗಿ ದುಡಿದೆ. ಕಡೆಗೊಂದು ದಿನ ನನ್ನನ್ನು ಕರೆದ ಪೌಲಿಂಗ್, 70 ಸಾವಿರ ಡಾಲರ್‌ಗಳನ್ನು ಕೈಗಿಟ್ಟು, ನನ್ನ ಶ್ರದ್ಧೆಯ ದುಡಿಮೆಗೆ ಇದು ಬಹುಮಾನ ಎಂದರು. ತಾವೇ ಶಿಫಾರಸು ಮಾಡಿ ಅಮೆರಿಕದ ಪೌರತ್ವ ಕೊಡಿಸಿದರು. ಅಷ್ಟೇ ಅಲ್ಲ. ಗಿಡಮೂಲಿಕೆಗಳನ್ನು ಬಳಸಿ ವಿಟಮಿನ್ ಸಿ ಯನ್ನು ಹೊಂದಿರುವ ಕ್ರೀಂ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಈ ಕ್ರೀಂ ಬಳಸಿ ಚರ್ಮ ಒಣಗುವುದನ್ನು, ಸುಕ್ಕುಗಟ್ಟುವುದನ್ನು, ಬಿರುಕು ಬಿಡುವುದನ್ನು, ಒರಟಾಗುವುದನ್ನು ತಪ್ಪಿಸಬಹುದಿತ್ತು. 1993ರಲ್ಲಿಯೇ ಈ ಮಹತ್ವದ ಸಂಗತಿಯನ್ನು ಪೌಲಿಂಗ್ ಹೇಳಿಕೊಟ್ಟಿದ್ದರು.ಪೌಲಿಂಗ್ ಹೇಳಿಕೊಟ್ಟಿದ್ದ ತಂತ್ರಜ್ಞಾನ ಬಳಸಿ, ಚರ್ಮವನ್ನು ಹಲವು ಬಗೆಯಲ್ಲಿ ರಕ್ಷಿಸುವ ಕ್ರೀಂ ತಯಾರಿಸಬಾರದೇಕೆ ಅನ್ನಿಸಿತು. ಗುರುಗಳ ಕಡೆಯಿಂದ ಭಕ್ಷೀಸ್‌ನ ರೂಪದಲ್ಲಿ ದೊರಕಿದ್ದ ಹಣವನ್ನೇ ಬಂಡವಾಳವಾಗಿಟ್ಟುಕೊಂಡು 1995ರಲ್ಲಿ ಆಕ್ಟಿಯೋ ಜೆನ್ ಎಂಬ ಕ್ರೀಂ ತಯಾರಿಸಿ, ಆನ್‌ಲೈನ್‌ನಲ್ಲಿ ಮಾರುಕಟ್ಟೆಗೆ ಬಿಟ್ಟೆ. ಆರೋಗ್ಯ ಕಾಪಾಡಿಕೊಳ್ಳುವ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿರುವ ಅಮೆರಿಕದ ಜನ, ನಮ್ಮ ಕಂಪನಿಯ ಉತ್ಪನ್ನವನ್ನು ಮುಗಿಬಿದ್ದು ಖರೀದಿಸಿದರು. ಆನಂತರದಲ್ಲಿ ಗಾಯವನ್ನು ಒಣಗಿಸುವ, ಬಿಸಿಲಿಗೆ ಚರ್ಮದ ಬಣ್ಣ ಕೆಡದಂತೆ ನೋಡಿಕೊಳ್ಳುವ, ಸುಕ್ಕು ಕಾಣದಂತೆ ಮಾಡುವ ಕ್ರೀಂಗಳನ್ನು ಒಂದರ ಹಿಂದೊಂದರಂತೆ ತಯಾರಿಸಿ ಮಾರುಕಟ್ಟೆಗೆ ಬಿಟ್ಟೆ. ಗ್ರಾಹಕರಿಂದ ಅದ್ಭುತ ಎಂಬಂಥ ಪ್ರತಿಕ್ರಿಯೆ ಸಿಕ್ಕಿತು. ಪರಿಣಾಮ, ನಮ್ಮ ಉತ್ಪನ್ನಗಳಿಗೆ ಭಾರೀ ಡಿಮ್ಯಾಂಡ್ ಬಂದು ವರ್ಷದಿಂದ ವರ್ಷಕ್ಕೆ ಲಾಭದ ಮೊತ್ತ ಹೆಚ್ಚುತ್ತಲೇ ಹೋಯಿತು. ತತ್ಫಲವಾಗಿ, 1984ರಲ್ಲಿ ಬರಿಗೈಯಲ್ಲಿ ಬಾಸ್ಟನ್‌ಗೆ ಬಂದಿದ್ದ ನಾನು, ನಂತರದ 16 ವರ್ಷದಲ್ಲಿ ಅಮೆರಿಕದ ಉದ್ಯಮಿ ಅನ್ನಿಸಿಕೊಂಡಿದ್ದೆ. ಲಕ್ಷ ಡಾಲರ್‌ಗಳ ಲೆಕ್ಕಾಚಾರದಲ್ಲಿ ಬಿಜಿನೆಸ್ ನಡೆಸಿದೆ.ಗಿಡಮೂಲಿಕೆಗಳನ್ನು ಬಳಸಿ ವಿಟಮಿನ್ ಸಿ ಅಂಶ ಹೊಂದಿರುವ ಕ್ರೀಂ ತಯಾರಿಸಲು ನಾನು 1993ರಲ್ಲಿ ಬಳಸಿದೆನಲ್ಲ; ಅದೇ ತಂತ್ರಜ್ಞಾನವನ್ನು ಈಗ ಜಗತ್ತಿನ ಎಲ್ಲ ಔಷಧ ತಯಾರಕರೂ ಬಳಸುತ್ತಿದ್ದಾರೆ. ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುವ ಇಮಾಮಿ ಕ್ರೀಂ ತಯಾರಿಕೆಯಲ್ಲೂ ಈ ಹಿಂದೆ ನಾವು ರೂಪಿಸಿದ್ದ ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳೇ ಬಳಕೆಯಾಗುತ್ತಿವೆ. ನನಗೀಗ ಲಾಸ್ ಏಂಜಲೀಸ್‌ನಲ್ಲಿ ಮನೆಯಿದೆ. ಕೋಲ್ಕತಾದಲ್ಲೂ ಒಂದು ಮನೆಯಿದೆ. ವ್ಯವಹಾರದಲ್ಲಿ ಸ್ಪರ್ಧೆ ಹಾಗೂ ನನ್ನ ವಯಸ್ಸೂ, ಎರಡೂ ಹೆಚ್ಚಿರುವ ಕಾರಣ, ಸದ್ಯಕ್ಕೆ ಬಿಜಿನೆಸ್‌ಗೆ ತಾತ್ಕಾಲಿಕ ವಿರಾಮ ಘೋಷಿಸಿದ್ದೇನೆ. ಈಗ, ಒಮ್ಮೆ ಹಿಂತಿರುಗಿ ನೋಡಿದರೆ, ಯಶಸ್ಸು ಕಾಣಬೇಕೆಂಬ ಹಂಬಲದಿಂದ ಇಷ್ಟೆಲ್ಲಾ ಮೆಟ್ಟಿಲು ಹತ್ತಿಳಿದದ್ದು ನಾನೇನಾ ಅನಿಸಿ ಆಶ್ಚರ್ಯವಾಗುತ್ತದೆ. ನನ್ನ ವಿಷಯದಲ್ಲಿ ದೇವರು ಕರುಣಾಮಯಿ. ಬದುಕಿನುದ್ದಕ್ಕೂ ಒಳ್ಳೆಯವರೇ ಎದುರಾಗುವಂತೆ ಆತ ನೋಡಿಕೊಂಡ. ಎಲ್ಲರ ಹಾರೈಕೆಯಿಂದಲೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನನಗೆ ಸಾಧ್ಯವಾಯಿತು. ಈಗ ಬಿಜಿನೆಸ್ ಮಾಡಬೇಕೆಂಬ ಆಕೆ ಖಂಡಿತ ಇಲ್ಲ. ಚರ್ಮದ ಕ್ಯಾನ್ಸರ್‌ಗೆ ಔಷಧ ತಯಾರಿಸಲು ನೆರವಾಗಬೇಕು ಎಂಬುದಷ್ಟೇ ನನ್ನಾಸೆ' ಎಂದು ಮಾತು ಮುಗಿಸುತ್ತಾರೆ ಛಂದಾ ಜವೇರಿ.

- ಎ.ಆರ್. ಮಣಿಕಾಂತ್armanikanth@gmail.com














ಅತ್ತೆ, ಅಮ್ಮನಾದ ಘಳಿಗೆಯಲ್ಲೇ ಪ್ರೀತಿಯ ಹೂವರಳಿತ್ತು!


ಅತ್ತೆ, ಅಮ್ಮನಾದ ಘಳಿಗೆಯಲ್ಲೇ ಪ್ರೀತಿಯ ಹೂವರಳಿತ್ತು!

ಭಾವತೀರಯಾನ- ಎ.ಆರ್.ಮಣಿಕಾಂತ್


ಪ್ರಕಾಶ ಸ್ಪಷ್ಟವಾಗಿ ಹೇಳಿದ್ದ: ನೋಡು ರೇಖಾ, ಮದುವೆಗೆ ನಾನಂತೂ ರೆಡಿ. ಸಿಂಪಲ್ಲಾಗಿ ಮದುವೆಯಾಗೋಣ. ಗ್ರ್ಯಾಂಡ್ ಆಗಿ ಬದುಕೋಣ. ಆದರೆ ನಮ್ಮ ಅಮ್ಮನಿಗೆ ಲವ್ ಮ್ಯಾರೇಜ್ ಇಷ್ಟವಾಗಲ್ಲ. ಆಕೆ ಹಳೇ ಕಾಲದ ಹೆಂಗಸು. ಮುಂಗೋಪಿ. ಆದ್ರೆ ಮನಸ್ಸು ಒಳ್ಳೆಯದಿದೆ. ಸಂಬಂಧದಲ್ಲಿಯೇ ಯಾವುದಾದ್ರೂ ಹುಡುಗೀನ ನೋಡಿದ್ರಾಯ್ತು ಎಂದೆಲ್ಲಾ ಆಕೆ ಯೋಚಿಸಿರ್ತಾಳೆ. ನನ್ನ ನಿರ್ಧಾರದಿಂದ ಅಮ್ಮನಿಗೆ ಶಾಕ್ ಆಗುತ್ತೆ. ಆದರೆ ಮದುವೆಯನ್ನೇ ಧಿಕ್ಕರಿಸುವಂಥ ಕೆಟ್ಟ ಮನಸ್ಸು ಆಕೆಗಿಲ್ಲ. ಹೆಚ್ಚೆಂದರೆ, ಆರೇಳು ತಿಂಗಳು ಮುಖ ಗಂಟಿಕ್ಕಿಕೊಂಡು ಉಳಿಯಬಹುದು. ಮನೆಗೊಂದು ಮೊಮ್ಮಗು ಬರ್ತಿದೆ ಅಂತ ಗೊತ್ತಾದ್ರೆ ಎಲ್ಲವನ್ನೂ ಮರೆತು ಅಮ್ಮ ಓಡಿ ಬರ್ತಾಳೆ. ಲವ್ ಮ್ಯಾರೇಜ್ ಆಗುವ ಪ್ರತಿಯೊಂದು ಫ್ಯಾಮಿಲಿಯ ಕಥೇನೂ ಹೀಗೇ ಇರುತ್ತೆ. ಹಾಗಾಗಿ ಯಾವುದೇ ಕಾರಣಕ್ಕೂ ಗಾಬರಿ ಆಗಬೇಡ.'ಪ್ರಕಾಶನ ಮಾತುಗಳಲ್ಲಿ ರೇಖಾಗೆ ನಂಬಿಕೆಯಿತ್ತು. ಎಂಥ ಸಂದರ್ಭ ಬಂದರೂ ಆತ ತನ್ನ ಕೈ ಬಿಡಲಾರ ಎಂಬ ಭರವಸೆಯಿತ್ತು. ಹಾಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಆಕೆ ಮದುವೆಗೆ ಒಪ್ಪಿಕೊಂಡಳು. ಪರಿಣಾಮ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯೂ, ಒಂದು ಹೋಟೆಲಿನಲ್ಲಿ ಆರತಕ್ಷತೆಯೂ ನಡೆದು ಹೋಯಿತು. ಮಗ ಲವ್ ಮ್ಯಾರೇಜ್ ಮಾಡಿಕೊಳ್ಳುವ ಸುದ್ದಿ ಕೇಳಿದಾಗ ಪ್ರಕಾಶನ ತಾಯಿ ಗಿರಿಜಮ್ಮ ಒಂದೆರಡು ದಿನ ಕಣ್ಣೀರು ಸುರಿಸಿದಳು. ಕುಟುಂಬದ ಹಿರಿಯರನ್ನು ಕರೆದು ಮಗನ ಮನಸ್ಸು ಬದಲಿಸಲು ಪ್ರಯತ್ನಿಸಿದಳು. ಹೀಗೆಲ್ಲ ಆಗಬಹುದೆಂದು ಮೊದಲೇ ಅಂದಾಜು ಮಾಡಿಕೊಂಡಿದ್ದ ಪ್ರಕಾಶ-'ಯಾರು ಒಪ್ಪಲಿ ಬಿಡಲಿ, ಯಾರು ಬರಲಿ, ಬಾರದೇ ಇರಲಿ, ನನ್ನ ಮದುವೆಯಂತೂ ನಡೆಯುತ್ತೆ' ಎಂದು ನಿಷ್ಠುರವಾಗಿ ಹೇಳಿಬಿಟ್ಟಿದ್ದ. ಮಗನ ಮಾತಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದಿದ್ದರಿಂದ ಗಿರಿಜಮ್ಮ ಮೌನವಾಗಿದ್ದರು. ಮನಸ್ಸಿಲ್ಲದ ಮನಸ್ಸಿನಿಂದಲೇ ಮದುವೆಯನ್ನು ಒಪ್ಪಿಕೊಂಡಿದ್ದರು.ಗಿರಿಜಮ್ಮನಿಗೆ ಮುಂಗೋಪ ಮಾತ್ರವಲ್ಲ; ಅತೀ ಎಂಬಂಥ ಹಠವೂ ಇತ್ತು. ಪ್ರತಿ ಸಂದರ್ಭದಲ್ಲೂ ತನ್ನ ಮಾತೇ ನಡೆಯಬೇಕು, ತಾನು ಹೇಳಿದ್ದೇ ಆಗಬೇಕು ಎಂದು ಆಕೆ ಪಟ್ಟು ಹಿಡಿಯುತ್ತಿದ್ದರು. ಸೊಸೆಯಾದವಳು ಪ್ರತಿ ಸಂದರ್ಭದಲ್ಲೂ ನನ್ನ ಆದೇಶವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಆಕೆ ತಿರುಗಿ ಮಾತಾಡಬಾರದು, ವಾದಕ್ಕೆ ನಿಲ್ಲಬಾರದು ಎಂದೆಲ್ಲಾ ಅಪೇಕ್ಷಿಸಿದ್ದರು. ಆದರೆ ಈಗಿನ ಕಾಲದ ಎಲ್ಲ ಹುಡುಗಿಯರಂತಿದ್ದ ರೇಖಾ, ಮದುವೆಯಾಗಿ ಎರಡು ತಿಂಗಳು ಕಳೆಯುವುದರೊಳಗೆ ತಿರುಗಿ ಮಾತಾಡಿದ್ದೂ ಅಲ್ಲದೆ, ಒಂದು ರೌಂಡ್ ಜಗಳವನ್ನೂ ಆಡಿಬಿಟ್ಟಳು. 'ಓಹ್, ಇವರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಕಷ್ಟ' ಎಂಬ ಸತ್ಯ ಪ್ರಕಾಶನಿಗೆ ಅವತ್ತೇ ಅರ್ಥವಾಗಿ ಹೋಯಿತು.
ಆನಂತರದಲ್ಲಿ ಹಳ್ಳಿಯಲ್ಲಿದ್ದ ಅತ್ತೆಯ ಮನೆಗೆ ಹೋಗುವುದನ್ನೇ ರೇಖಾ ಕಡಿಮೆ ಮಾಡಿದಳು. ಪ್ರಕಾಶ ಮಾತ್ರ ಪ್ರತಿ ತಿಂಗಳೂ ಹೋಗಿ ಬರುತ್ತಿದ್ದ. ಹೀಗಿರುವಾಗಲೇ ಅದೊಂದು ರಾತ್ರಿ ಮಗನಿಗೆ ಫೋನ್ ಮಾಡಿದ ಗಿರಿಜಮ್ಮ- 'ಸಾವಿರ ರೂಪಾಯಿ ಬೇಕು ಮಗಾ. ಸ್ವಲ್ಪ ಖರ್ಚಿದೆ' ಅಂದಳು. ಪ್ರಕಾಶ ತಕ್ಷಣವೇ ಆಯ್ತಮ್ಮಾ. ನಾಳೆನೇ ಕಳಿಸ್ತೇನೆ ಎಂದ. ಅಲ್ಲಿಗೆ, ಅಮ್ಮ-ಮಗನ ಮಾತುಕತೆ ಮುಗಿದಿರಬಹುದು ಎಂದು ಭಾವಿಸಿದ ರೇಖಾ-'ಅಲ್ಲಾರೀ, ಅವರು ಕೇಳಿದಷ್ಟನ್ನೂ ಕೊಡ್ತೀನಿ ಅಂತೀರಲ್ಲ; ನಿಮ್ಗೆ ಸ್ವಲ್ಪಾನೂ ವ್ಯವಹಾರ ಜ್ಞಾನ ಇಲ್ಲ. ಮೊದಲು ಕೈ ಬಿಗಿ ಹಿಡಿದು ಖರ್ಚು ಮಾಡಲು ಕಲಿತ್ಕೊಳ್ಳಿ' ಎಂದು ಬಿಟ್ಟಳು. ಆಗಿನ್ನೂ ಲೈನ್‌ನಲ್ಲೇ ಇದ್ದ ಗಿರಿಜಮ್ಮನವರಿಗೆ ಈ ಮಾತುಗಳೆಲ್ಲಾ ಕೇಳಿಸಿದ್ದರಿಂದ ಆಕೆ ಕೆರಳಿದರು. ಮರುದಿನವೇ ಸೊಸೆಗೆ ಫೋನ್ ಮಾಡಿ ಗ್ರಹಚಾರ ಬಿಡಿಸಿದರು.
ಇದಾಗಿ 15 ದಿನ ಕಳೆಯುವುದರೊಳಗೆ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡರು ಗಿರಿಜಮ್ಮ. ಪ್ರಕಾಶನೇ ಅವರ ಏಕೈಕ ಸಂತಾನವಾದ್ದರಿಂದ ಚಿಕಿತ್ಸೆಯ ನೆಪದಲ್ಲಿ ಆಕೆ ಮಗನ ಮನೆಗೇ ಬರಬೇಕಾಯಿತು. ಅಭಿಪ್ರಾಯ ಭೇದದಿಂದ ಮೊದಲೇ ಹಾವು- ಮುಂಗುಸಿಯಂತೆ ಆಡುತ್ತಿದ್ದವರು ಒಂದೇ ಮನೆಯಲ್ಲಿ ಉಳಿದರು ಅಂದ ಮೇಲೆ ಕೇಳಬೇಕೆ? ಮನೆಯೆಂಬುದು ಅಶಾಂತಿಯ ತಾಣವಾಯಿತು. ಅತ್ತೆ-ಸೊಸೆ ಮಧ್ಯೆ ಚಿಕ್ಕಪುಟ್ಟ ಕಾರಣಗಳಿಗೂ ಜಗಳ ನಡೆಯುತ್ತಿತ್ತು. ಹೆಂಡತಿಯ ಪರ ಮಾತಾಡಿದರೆ ಅಮ್ಮನ ಬಯ್ಗುಳಕ್ಕೂ, ಅಮ್ಮನನ್ನು ವಹಿಸಿಕೊಂಡರೆ, ರಾತ್ರಿಯ ವೇಳೆ ಹೆಂಡತಿಯ ಅಸಹಕಾರಕ್ಕೂ ಪ್ರಕಾಶ ತುತ್ತಾಗಬೇಕಿತ್ತು. ಇಬ್ಬರನ್ನೂ ಹೇಗೆ ಸಂಭಾಳಿಸುವುದೋ ಗೊತ್ತಾಗದೆ ಅವನೂ ಹೈರಾಣಾದ.ಅತ್ತೆಯ ಬೈಗುಳದಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸಿದ ರೇಖಾ, ಬೆಳಗಿನ ಹೊತ್ತು ದೇವಸ್ಥಾನಕ್ಕೂ, ಸಂಜೆಯ ವೇಳೆ ತರಕಾರಿ ತರುವ ನೆಪದಲ್ಲಿ ಮಾರ್ಕೆಟ್‌ಗೂ ಹೋಗಲು ಆರಂಭಿಸಿದಳು. ಸೊಸೆಯ ಈ ವರಸೆಯಿಂದ ಗಿರಿಜಮ್ಮ ಉರಿದು ಬಿದ್ದರು. 'ನಾನು ಕಾಯಿಲೆ ಹೆಂಗಸು ಸಾಯ್ತಾ ಬಿದ್ದಿದ್ದೀನಿ. ನಂಗಿಲ್ಲಿ ನೀರು ಕೊಡುವವರೂ ಗತಿ ಇಲ್ಲ. ಥಳಕು ಬಳುಕಿನಿಂದ ನನ್ನ ಮಗನನ್ನು ಮರುಳು ಮಾಡಿದ್ದೂ ಅಲ್ಲದೇ ನನ್ನ ಮೇಲೂ ಸವಾರಿ ಮಾಡೋಕೆ ನೋಡ್ತಿಯೇನೇ ಎಂದು ಅಬ್ಬರಿಸಿದ್ದೂ ಅಲ್ಲದೆ, ಅದೇ ಸಿಟ್ಟಿನಲ್ಲಿ ಒಂದೇಟು ಹಾಕಿಯೂ ಬಿಟ್ಟರು.ರೇಖಾಳ ತಾಳ್ಮೆ ಸಂಪೂರ್ಣವಾಗಿ ಸತ್ತು ಹೋದದ್ದೇ ಆಗ. ಅತ್ತೆಯಿಂದ ಹೊಡೆತ ತಿಂದದ್ದನ್ನು ಆಕೆ ಗಂಡನಿಗೆ ಹೇಳಲಿಲ್ಲ. ಹೇಳಿದರೂ ಗಂಡ ಏನೂ ಮಾತಾಡಲಾರ ಎಂದು ಆಕೆಗೆ ಗೊತ್ತಿತ್ತು. ಅದೇ ಕಾರಣದಿಂದ ಮೌನವಾಗಿಯೇ ರಾತ್ರಿ ಕಳೆದ ಆಕೆ ಬೆಳಗಾಗುವ ವೇಳೆಗೆ ಅತ್ಯಂತ ಕೆಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಳು. ಅದೇನೆಂದರೆ- ಅತ್ತೆಯನ್ನು ಕೊಂದು ಹಾಕುವುದು! ಜೊತೆಗಿದ್ದು ಕೊಂಡು ದಿನವೂ ಕುಸ್ತಿ ಮಾಡಿ ಬಿಕ್ಕಳಿಸುವ ಬದಲು, ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಿ, ಒಂದೆರಡು ದಿನ ಗೋಳಾಡಿ ಆನಂತರ ನೆಮ್ಮದಿಯಾಗಿರೋದೇ ಬೆಸ್ಟ್ ಎಂದುಕೊಂಡಳು ರೇಖಾ.ಆದರೆ, ಕೊಲೆ ಮಾಡುವುದು ಹೇಗೆ ಎಂಬುದೇ ಆಕೆಗೆ ಗೊತ್ತಾಗಲಿಲ್ಲ. ಸಣ್ಣದೊಂದು ಸುಳಿವನ್ನೂ ಬಿಡದೆ ಕೊಲೆ ಮಾಡಿ ಹೋದವರನ್ನೂ ನಂತರದ ಕೆಲವೇ ದಿನಗಳಲ್ಲಿ ಪೊಲೀಸರು ಹಿಡಿದು ಹಾಕುತ್ತಿದ್ದ ಸುದ್ದಿಗಳನ್ನು ಪತ್ರಿಕೆ, ಟಿ.ವಿ.ಗಳಲ್ಲಿ ನೋಡಿದ್ದಳಲ್ಲ; ಹಾಗಾಗಿ ಸುಪಾರಿ ಕೊಡುವಂಥ ಸಾಹಸಕ್ಕೆ ರೇಖಾ ಮುಂದಾಗಲಿಲ್ಲ. ಹೀಗಿರುವಾಗಲೇ ಮಾಟ ಮಾಡಿಸಿದರೆ ನಮಗೆ ಆಗದವರನ್ನು ನಿವಾರಿಸಿಕೊಳ್ಳಬಹುದು ಎಂದು ಎಲ್ಲೋ ಓದಿದ್ದು ನೆನಪಾಯಿತು. ರೇಖಾ ತಡ ಮಾಡಲಿಲ್ಲ. ಪೂಜೆಯ ನೆಪದಲ್ಲಿ ಸೀದಾ ಕೊಳ್ಳೇಗಾಲಕ್ಕೆ ಬಂದಳು. ಮಂತ್ರವಾದಿಯೊಬ್ಬನ ಬಳಿ ಸಮಸ್ಯೆ ಹೇಳಿಕೊಂಡಳು. ಆತ -'ನೋಡಿ ತಾಯಿ, ನಾವಿಲ್ಲಿ ಕೂತು ಒಂದು ಮಂತ್ರ ಹೇಳಿದ್ರೆ ನಿಮ್ಮ ಎದುರಾಳಿಯ ಪ್ರಾಣಪಕ್ಷಿಯು ಚಟ್ ಪಕಾರ್ ಎಂದು ಹಾರಿಹೋಗುತ್ತೆ. ಯಾರಿಗೂ ಗೊತ್ತಾಗುವುದಿಲ್ಲ' ಎಂದ. ಒಂದು ಜೀವ ತೆಗೆಯುವುದು ಇಷ್ಟೊಂದು ಸುಲಭವಾ ಅನ್ನಿಸಿ ರೇಖಾಗೆ ಆಶ್ಚರ್ಯವಾಯಿತು. ಆಕೆ ಅನುಮಾನದಿಂದಲೇ ಕೇಳಿದಳು: 'ಒಂದು ವೇಳೆ ನಿಮ್ಮ ಮಂತ್ರ ಕೆಲಸ ಮಾಡದೇ ಹೋದ್ರೆ...' ಅವಳ ಮಾತನ್ನು ಅಷ್ಟಕ್ಕೇ ನಿಲ್ಲಿಸಿ ಆ ಮಂತ್ರವಾದಿ ಹೇಳಿದ: ಅಂಥಾ ಛಾನ್ಸೇ ಇಲ್ಲ ತಾಯೀ. ಏನಾದ್ರೂ ಹೆಚ್ಚು ಕಡಿಮೆಯಾದ್ರೆ ನಿಮ್ಮ ವೈರಿಯ ಸುತ್ತಮುತ್ತ ಇದ್ದವರಿಗೆ ಹೊಡೆತ ಬೀಳುತ್ತೇ ವಿನಃ ನಮ್ಮ ಮಂತ್ರ ಫೇಲ್ ಆಗುವ ಛಾನ್ಸೇ ಇಲ್ಲ. ಈ ಮಾತು ಕೇಳಿದಾಕ್ಷಣ ರೇಖಾ ಕಂಪಿಸಿದಳು. ಅತ್ತೆಯನ್ನು ನಿವಾರಿಸಿಕೊಳ್ಳಲು ಹಾಕಿಸಿದ ಮಂತ್ರ, ಅಪ್ಪಿ ತಪ್ಪಿ ಗಂಡನ ಕಡೆಗೇ ತಿರುಗಿಕೊಂಡರೆ ಗತಿಯೇನು ಅನ್ನಿಸಿದಾಗ ಕೂತಲ್ಲೇ ಬೆವೆತು ಹೋದಳು. ನಂತರ ನಡುಗುತ್ತಲೇ ಅಲ್ಲಿಂದ ಎದ್ದು ಬಂದಳು.ಈ ಮಧ್ಯೆ ಗಿರಿಜಮ್ಮನ ಹಾರಾಟ ಮುಂದುವರಿದಿತ್ತು. ಸೊಸೆ ಸೈಲೆಂಟ್ ಆದಷ್ಟೂ ಆಕೆಯ ಹಠ ಹೆಚ್ಚುತ್ತಿತ್ತು. ಇದಕ್ಕೆಲ್ಲಾ ಒಂದು ಅಂತ್ಯ ಕಾಣಿಸಲೇಬೇಕು ಎಂದು ರೇಖಾ ಎರಡನೇ ಬಾರಿಗೆ ಅಂದುಕೊಂಡಾಗಲೇ ಕುಟುಂಬದ ಮಿತ್ರನಾಗಿದ್ದ ನಾಟಿ ವೈದ್ಯನೊಬ್ಬ ಆಕೆಗೆ ನೆನಪಾಗಿಬಿಟ್ಟ. ಕೆಲವೇ ದಿನಗಳ ನಂತರ ಅವನನ್ನು ಭೇಟಿಯಾದ ರೇಖಾ, ತನ್ನ ಸಂಕಟ ಹೇಳಿಕೊಂಡಳು. ಎಲ್ಲ ಕಿರುಕುಳವನ್ನೂ ಇಷ್ಟು ದಿನ ಹೇಗೋ ಸಹಿಸ್ಕೊಂಡೆ. ಇನ್ಮುಂದೆ ಸಾಧ್ಯವಿಲ್ಲ. ಯಾವುದಾದ್ರೂ ವಿಷ ಇದ್ರೆ ಕೊಡಿ. ಊಟಕ್ಕೆ ಹಾಕಿ ಕೊಟ್ಟು ಬಿಡ್ತೀನಿ. ಅಷ್ಟರ ಮಟ್ಟಿಗೆ ನನ್ನ ಮನಸ್ಸು ಕಲ್ಲಾಗಿ ಹೋಗಿದೆ' ಅಂದಳು.ರೇಖಾ ಹೇಳಿದ್ದೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಆ ನಾಟಿವೈದ್ಯ ಒಮ್ಮೆ ವಕ್ರವಾಗಿ ನಕ್ಕು ಹೇಳಿದ: 'ನಾನು ಎತ್ತಿಕೊಂಡು ಬೆಳೆಸಿದ ಕೂಸು ನೀನು. ನನ್ನ ಮಗಳ ಸ್ಥಾನದಲ್ಲಿ ಇದ್ದೀಯ. ನಿನಗೆ ಸಹಾಯ ಮಾಡಬೇಕಿರುವುದು ನನ್ನ ಕರ್ತವ್ಯ. ಬದುಕಲ್ಲಿ ನೋಡಬೇಕಿರುವುದನ್ನೆಲ್ಲ ನಿಮ್ಮ ಅತ್ತೆ ನೋಡಿಯಾಗಿದೆ. ಈಗೇನಿದ್ರೂ ನಿನ್ನ ಕಾಲ. ಊಟಕ್ಕೆ ವಿಷ ಬೆರೆಸಿ ಕೊಡ್ತೀಯಾ ಅಂದ್ಕೋ. ಆಗ ಸಿಕ್ಕಿ ಬಿದ್ದು ಜೈಲು ಪಾಲಾಗ್ತೀಯ. ಈಗ ನಾನು ಹೇಳಿದಂತೆ ಕೇಳಿದ್ರೆ ನಿನ್ನ ಕೆಲಸ ಆಗುತ್ತೆ. ಯಾರಿಗೂ ನಿನ್ನ ಮೇಲೆ ಅನುಮಾನ ಬರೋದಿಲ್ಲ' ಅಂದ. ಈ ಮಾತು ಕೇಳಿ ರೇಖಾಗೆ ಖುಷಿಯಾಯಿತು. 'ಹೇಳಿ ಅಂಕಲ್. ನಾನು ಏನು ಮಾಡಬೇಕೂಂತ ಹೇಳಿ' ಅಂದಳು.ಆ ನಾಟಿ ವೈದ್ಯ ಒಂದೂ ಮಾತಾಡದೆ ಮನೆಯೊಳಗೆ ಹೋದ. ಹತ್ತು ನಿಮಿಷದ ನಂತರ ಹೊರಬಂದವನ ಕೈಯಲ್ಲಿ ಪುಟ್ಟದೊಂದು ಗಂಟಿತ್ತು. ಅದನ್ನು ರೇಖಾಗೆ ಕೊಟ್ಟು ಗಂಭೀರವಾಗಿ ಹೇಳಿದ: 'ನಿನಗೆ ಕೊಟ್ಟಿರೋದು ನಿಧಾನ ವಿಷದ ಪೌಡರ್. ನಾಳೆಯಿಂದ ನಿಮ್ಮ ಅತ್ತೆಗೆ ರುಚಿರುಚಿಯಾದ ತಿಂಡಿ ಮಾಡಿಕೊಡು. ತಟ್ಟೆಗೆ ತಿಂಡಿ ಹಾಕಿದ ಮೇಲೆ ಅದರ ಮೇಲೆ ಒಂದು ಚಮಚೆಯಷ್ಟು ಪ್ರಮಾಣದಲ್ಲಿ ಈ ಪೌಡರ್‌ನ ಉದುರಿಸಬೇಕು. ಹೀಗೆ ಮಾಡಿದ್ರೆ ವಿಷ ನಿಧಾನವಾಗಿ ನಿಮ್ಮ ಅತ್ತೆಯ ಮೈ ಸೇರುತ್ತೆ. ದಿನಕಳೆದಂತೆಲ್ಲಾ ಆಕೆ ತುಂಬು ಆರೋಗ್ಯದಿಂದಲೇ ಇರ್ತಾರೆ. ಆದರೆ ಇದೆಲ್ಲಾ ಎಂಟು ತಿಂಗಳು ಮಾತ್ರ. ಆನಂತರ ಒಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಕಥೆ ಮುಗಿದು ಹೋಗುತ್ತೆ. ಯಾರಿಗೂ ಅನುಮಾನ ಬರೋದಿಲ್ಲ. ಒಂದು ಮಾತು ನೆನಪಿಟ್ಕೋ. ನಾಳೆಯಿಂದ ಯಾವುದೇ ಕಾರಣಕ್ಕೂ ನೀನು ಅತ್ತೆಗೆ ಹಿಂತಿರುಗಿ ಮಾತಾಡಬೇಡ. ಉಲ್ಟಾ ಮಾತಾಡಿದ್ರೆ ನಿನಗೇ ಕೆಟ್ಟ ಹೆಸರು ಬರುತ್ತೆ. ಇನ್ನು ಬರೀ ಎಂಟೇ ತಿಂಗಳು ತಾನೇ. ಎಷ್ಟು ಹಿಂಸೆ ಆದ್ರೂ ಪರ್ವಾಗಿಲ್ಲ. ಸುಮ್ನೆ ಇದ್ದು ಬಿಡು. ನಿಂಗೆ ಒಳ್ಳೆಯದಾಗ್ಲಿ. ಹೋಗಿ ಬಾ...'ಒಂದು ಕೆಟ್ಟ ಕೆಲಸ ಮಾಡಲು ಆ ವೇಳೆಗೆ ಮಾನಸಿಕವಾಗಿ ಸಜ್ಜಾಗಿದ್ದಳು ರೇಖಾ. ಹಾಗಾಗಿ ಅವಳಿಗೆ ಹೆದರಿಕೆಯಾಗಲಿಲ್ಲ. ಪಾಪಪ್ರಜ್ಞೆಯೂ ಕಾಡಲಿಲ್ಲ. ಮರುದಿನದಿಂದಲೇ ದಿನವೂ ರುಚಿರುಚಿಯ ತಿಂಡಿ ಮಾಡಿ, ನಾಟಿ ವೈದ್ಯ ಕೊಟ್ಟಿದ್ದ ಔಷಧಿಯನ್ನು ಗುಟ್ಟಾಗಿ ಬೆರೆಸಿ, ಅದನ್ನು ಅತ್ತೆಗೆ ಕೊಡುವುದು ರೇಖಾಳ ದಿನಚರಿಯಾಯಿತು. ಈ ಕೆಲಸ ಗಂಡನಿಗಾಗಲಿ, ಅತ್ತೆಗಾಗಲಿ ತಿಳಿಯದಂತೆ ಆಕೆ ಎಚ್ಚರ ವಹಿಸಿದಳು. ಈ ನಡುವೆಯೂ ಹಲವು ಸಂದರ್ಭದಲ್ಲಿ ಗಿರಿಜಮ್ಮನವರೇ ಏನಾದರೂ ಕೊಂಕು ನುಡಿಯುತ್ತಿದ್ದರು. ಆಗೆಲ್ಲಾ ತಿರುಗಿ ಮಾತಾಡುವ ಮನಸ್ಸಾದರೂ ನಾಟಿವೈದ್ಯನ ಕಿವಿಮಾತು ನೆನಪಾಗಿ, ತಕ್ಷಣವೇ ಸಂಯಮ ತಂದುಕೊಂಡು ಮೌನವಾಗುತ್ತಿದ್ದಳು ರೇಖಾ.ಸೊಸೆಯ ನಡವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಯನ್ನು ಗಿರಿಜಮ್ಮ ಗಮನಿಸಿದ್ದರು. ಬಹುಶಃ ಅವಳಿಗೆ ಪ್ರಕಾಶ ಗದರಿಸಿ ಬುದ್ಧಿ ಹೇಳಿರಬೇಕು ಅಂದುಕೊಂಡರು. ಆಕೆ ದಿನವೂ ಮಾಡಿಕೊಡುತ್ತಿದ್ದ ರುಚಿರುಚಿಯಾದ ತಿಂಡಿಯ ನೆನಪಾಗಿ ಖುಷಿಯಾದರು. ತಾನು ಹೇಗೆಲ್ಲಾ ಕನಸು ಕಂಡಿದ್ದೆನೋ ಅದೇ ಥರಾ ಸೇವೆ ಮಾಡುತ್ತಿದ್ದಾಳೆ ಅಂದುಕೊಂಡರು. ಮರುಕ್ಷಣವೇ ಅವಳ ಒಳಮನಸ್ಸು ಮಾತಾಡಿತು: ಸೊಸೆಯನ್ನು ಮಗಳ ಥರಾ ನೋಡ್ಕೋ ಬೇಕು ಅಂತ ಹಿರಿಯರು ಹೇಳಿದ್ದಾರೆ. ಈ ಹುಡುಗೀನ ಒಂದು ದಿನವಾದ್ರೂ ಹಾಗೆ ನೋಡಿಕೊಂಡೆಯಾ? ಸಲ್ಲದ ಮಾತಾಡಿ ಅವಳನ್ನು ಇಂಚಿಂಚಾಗಿ ಕಾಡ್ತಾ ಇದ್ದೀಯಲ್ಲ; ಇದೆಲ್ಲಾ ಸರಿಯಾ? ಇದಕ್ಕೆಲ್ಲಾ ದೇವರು ಶಿಕ್ಷೆ ಕೊಡದೇ ಬಿಡ್ತಾನಾ ಎಂದು ಪ್ರಶ್ನೆ ಹಾಕಿತು. ಪಾಪಪ್ರಜ್ಞೆಯಿಂದ ಕಂಗಾಲಾದ ಗಿರಿಜಮ್ಮ, ಅವತ್ತು ರಾತ್ರಿ ಸೊಸೆ ಮಲಗಿದ್ದಾಳೆ ಎಂಬುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡು ಮಗನನ್ನು ಎದುರು ಕೂರಿಸಿಕೊಂಡು ಹೇಳಿದರು: 'ನಿನ್ನ ಹೆಂಡ್ತಿ, ದೇವರಂಥ ಹುಡುಗಿ ಕಣೋ ಪ್ರಕಾಶ. ನಾನೇ ದುಡುಕಿಬಿಟ್ಟೆ. ಕೆಟ್ಟ ಮಾತುಗಳಿಂದ ಅವಳನ್ನು ನೋಯಿಸಿಬಿಟ್ಟೆ. ಒಂದೆರಡು ಬಾರಿ ಹೊಡೆದೂ ಬಿಟ್ಟೆ. ಅವತ್ತು ನಂಗೆ ಬುದ್ಧಿ ನೆಟ್ಟಗಿರಲಿಲ್ಲ. ಪಾಪ, ಆ ಹುಡುಗೀಗೆ ಎಷ್ಟು ಬೇಜಾರಾಯ್ತೋ ಏನೋ. ನಾಳೆಯಿಂದ ನಾನೇ ಬದಲಾಗ್ತೇನೆ. ಅವಳನ್ನು ಯಾವುದೇ ಕಾರಣಕ್ಕೂ ಬಯ್ಯೋದಿಲ್ಲ ಕಣೋ...'ಮರುದಿನದಿಂದಲೇ ಕಂಪ್ಲೀಟ್ ಬದಲಾಗಿ ಬಿಟ್ಟರು ಗಿರಿಜಮ್ಮ. ಮನೆಗೆ ಬಂದವರ ಮುಂದೆಲ್ಲ ಸೊಸೆಯನ್ನು ಹಾಡಿ ಹೊಗಳುವುದು ಅವರ ಕೆಲಸವಾಯಿತು. ಇವಳು ನಂಗೆ ಸೊಸೆಯಲ್ಲ ಕಣ್ರೀ. ಮಗಳು ಎಂದೆಲ್ಲಾ ಆಕೆ ಹೇಳುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೆ ದೇವಾಲಯಕ್ಕೆ ಹೋಗಿ ಸೊಸೆಯ ಹೆಸರಲ್ಲಿ ವಿಶೇಷ ಅರ್ಚನೆಯನ್ನೂ ಮಾಡಿಸಿದರು. ಮನೆಗೆ ಬರುವ ದಾರಿಯಲ್ಲಿ ಛಕ್ಕನೆ ರೇಖಾಳ ಕೈ ಹಿಡಿದು -'ಇಷ್ಟು ದಿನ ನಿಂಗೆ ತೊಂದರೆ ಕೊಟ್ಟೆ. ಕ್ಷಮಿಸಿಬಿಡಮ್ಮಾ' ಅಂದೂಬಿಟ್ಟರು. ನಿಜಕ್ಕೂ ಬದಲಾಗಿ ಹೋದ ಅತ್ತೆಯನ್ನು ಕಂಡು, ಆನಂದಭಾಷ್ಪದೊಂದಿಗೆ ಮನೆಗೆ ಬಂದ ರೇಖಾ ಒಮ್ಮೆ ಕ್ಯಾಲೆಂಡರ್ ನೋಡಿದವಳೇ ಮಾತೇ ಹೊರಡದೆ ನಿಂತು ಬಿಟ್ಟಳು: ಏಕೆಂದರೆ, ನಾಟಿವೈದ್ಯ ನೀಡಿದ್ದ ಗಡುವಿನಲ್ಲಿ ಆಗಲೇ ಆರು ತಿಂಗಳು ಕಳೆದು ಹೋಗಿದ್ದವು. ಈ ಅವಧಿಯಲ್ಲಿ ಗಿರಿಜಮ್ಮ ತುಂಬು ಆರೋಗ್ಯದಿಂದ ಕಂಗೊಳಿಸುತ್ತಿದ್ದರು. ಇನ್ನು ಎರಡು ತಿಂಗಳು ಕಳೆದರೆ, ಯಾವಾಗ ಬೇಕಾದರೂ  ದಿಢೀರನೆ ಅತ್ತೆ ಸತ್ತು ಹೋಗುತ್ತಾರೆ ಎಂದು ನೆನಪಾಗುತ್ತಿದ್ದಂತೆ ರೇಖಾಗೆ ವಿಪರೀತ ಸಂಕಟವಾಯಿತು. ಅತ್ತೆ ಸತ್ತು ಹೋದರೆ, ಮುಂದೆ ತಿಂಡಿ ತಿನ್ನುವ ಸಂದರ್ಭದಲ್ಲೆಲ್ಲ ಆಕೆಯ ನೆನಪು ಕೈ ಜಗ್ಗುತ್ತದೆ ಅನ್ನಿಸಿತಲ್ಲ; ಆಗಲೇ ರೇಖಾ ಒಂದು ತೀರ್ಮಾನಕ್ಕೆ ಬಂದಳು.ಮರುದಿನವೇ ನಾಟಿವೈದ್ಯನ ಬಳಿಗೆ ಓಡಿಬಂದಳು. ಅತ್ತೆ ಈಗ ಬದಲಾಗಿರುವುದನ್ನೂ, ಸ್ವಂತ ಮಗಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದನ್ನು ವಿವರಿಸಿದಳು. ನಾನೂ ಆಕೆಯಲ್ಲಿ ಅಮ್ಮನನ್ನು ಕಾಣುತ್ತಿದ್ದೇನೆ. ಮುಂದೆಯೂ ಆಕೆ ನನಗೆ ಬೇಕು. ಆಕೆಯ ಜೀವಕ್ಕೆ ಯಾವುದೇ ತೊಂದರೆ ಆಗಬಾರ್ದು. ಈವರೆಗೂ ಕೊಟ್ಟಿದ್ದೀವಲ್ಲ; ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಔಷಧೀನ ಕೊಡಿ. ಹೇಗಾದ್ರೂ ಮಾಡಿ ನಮ್ಮ ಅತ್ತೆಯ ಜೀವ ಉಳಿಸಿ. ಯಾವುದೋ ಕೆಟ್ಟಗಳಿಗೇಲಿ ನಾನು ಕೆಟ್ಟದಾಗಿ ನಡ್ಕೊಂಡೆ, ನನ್ನನ್ನು ಕ್ಷಮಿಸಿಬಿಡಿ ಎಂದು ಬಿಕ್ಕಳಿಸುತ್ತಾ ನಾಟಿವೈದ್ಯನ ಕಾಲು ಹಿಡಿದುಬಿಟ್ಟಳು.ನಾಟಿವೈದ್ಯ, ಮಮತೆಯಿಂದ ರೇಖಾಳ ತಲೆ ನೇವರಿಸಿದ. ನೀನು ನನ್ನ ಮಗಳ ಸಮಾನ. ನಿಂಗೆ ಸಹಾಯ ಮಾಡ್ತೀನಿ ಎಂದ. ಈ ಮಾತು ಕೇಳಿದ್ದೇ, ರೇಖಾ ಖುಷಿಯಿಂದ ಕೂತಳು. ಆಗ ನಾಟಿ ವೈದ್ಯ ಹೇಳಿದ:' ಮಗಳೇ, ನಿಜ ಹೇಳಬೇಕು ಅಂದ್ರೆ ವಿಷದ ಪ್ರಭಾವ ಹೊಂದಿದ್ದ ಔಷಧವನ್ನು ನಾನು ಕೊಡಲೇ ಇಲ್ಲ. ನಾನು ಕೊಟ್ಟಿದ್ದು ವಿಟಮಿನ್‌ಗಳಿಂದ ತುಂಬಿದ ಔಷಧಿ. ಅದರಿಂದ ಯಾವುದೇ ತೊಂದೆರೆ ಇಲ್ಲ. ವಿಷ ಎಂಬುದು ನಿನ್ನ ಮನದೊಳಗಿತ್ತು. ಅದೀಗ ಅಮೃತವಾಗಿ ಹೊರಗೆ ಬಂದಿದೆ. ಮುಂದೊಂದು ದಿನ ಹೀಗೆ ಆಗೇ ಆಗುತ್ತೆ ಅಂದುಕೊಂಡೇ ಹಾಗೆಲ್ಲಾ ಮಾತಾಡಿದ್ದೆ. ಅದೆಲ್ಲಾ ನಿಜವಾಗಿದೆ. ನಿಂಗೆ ಒಳ್ಳೇದಾಗ್ಲಿ. ಹೋಗಿ ಬಾ...'ಇವತ್ತು ಅತ್ತೆಗೆ ಹೋಳಿಗೆ ಮಾಡಿಕೊಡ್ತೇನೆ ಎಂದು ಹರ್ಷದಿಂದ ಜಿಗಿಯುತ್ತಾ ಮನೆಗೆ ಹೊರಟಳು ರೇಖಾ.


- ಎ.ಆರ್. ಮಣಿಕಾಂತ್armanikanth@gmail.com



















ಟೆಡ್ಡಿಬೇರ್ ಪಡೆದ ಮಕ್ಕಳಲ್ಲಿ ದೇವರ ಕಂಡಳು ಟೇಲರ್


ಟೆಡ್ಡಿಬೇರ್ ಪಡೆದ ಮಕ್ಕಳಲ್ಲಿ ದೇವರ ಕಂಡಳು ಟೇಲರ್

ಭಾವತೀರಯಾನ- ಎ.ಆರ್.ಮಣಿಕಾಂತ್


ಆ ಹುಡುಗಿಯ ಹೆಸರು ಟೇಲರ್ ಮೇರಿ ಕ್ರಾಬ್ ಟ್ರೀ. ಆಕೆ, ಅಮೆರಿಕಾದ ಕ್ಯಾಲಿಫೋರ್ನಿಯಾಕ್ಕೆ ಹತ್ತಿರವಿರುವ ಸ್ಯಾನ್‌ಡಿಯಾಗೋ ನಗರದ ನಿವಾಸಿ. 7 ವರ್ಷದ ಅವಳು, ಆಗಷ್ಟೇ ಸ್ಕೂಲ್‌ಗೆ ಸೇರಿಕೊಂಡಿದ್ದಳು. ಅಂದಮೇಲೆ ಕೇಳಬೇಕೆ? ದಿನವೂ ಮನೆಗೆ ಬಂದ ತಕ್ಷಣ ಟೀಚರ್‌ಗಳು ಹೇಳಿಕೊಟ್ಟಿದ್ದನ್ನೆಲ್ಲಾ ಅಮ್ಮನಿಗೆ ವರದಿ ಮಾಡುತ್ತಿದ್ದಳು. ಅಂಥ ಹುಡುಗಿ, ಅದೊಂದು ಮಧ್ಯಾಹ್ನ ಅಮ್ಮನೊಂದಿಗೆ ಮಾತೇ ಆಡದೇ ಕತ್ತರಿ, ಸ್ಪ್ರಿಂಗ್, ಪ್ಲಾಸ್ಟಿಕ್ ಪಟ್ಟಿಗಳು ಹಾಗೂ ಪೆಯಿಂಟ್ ಬಾಕ್ಸನ್ನು ಎದುರಿಗಿಟ್ಟುಕೊಂಡು ಪ್ಲಾಸ್ಟಿಕ್ ಕತ್ತರಿಸುತ್ತಾ, ಸ್ಪ್ರಿಂಗ್‌ಗಳನ್ನು ಬಗ್ಗಿಸುತ್ತಾ ಕೂತುಬಿಟ್ಟಳು. ಅದನ್ನು ಕಂಡು ಟೇಲರ್‌ಳ ತಾಯಿ ಟ್ರಿಸಿಯಾ ತನಗೆ ತಾನೇ ಹೇಳಿಕೊಂಡಳು: 'ಸ್ಕೂಲ್‌ನಲ್ಲಿ ಯಾವುದೋ ಹೊಸ ಪ್ರಯೋಗದ ಬಗ್ಗೆ ಹೇಳಿಕೊಟ್ಟಿರಬೇಕು. ಅದನ್ನೇ ಈಗ ಮಾಡಿ ತೋರಿಸಲು ಕೂತಿದ್ದಾಳೆ ಅನ್ಸುತ್ತೆ. ನೋಡೋಣ. ಅದೇನು ಮಾಡ್ತಾಳೋ ಮಾಡಲಿ...'ಹೀಗೇ ಒಂದು ಗಂಟೆ ಕಳೆಯಿತು. ಅಷ್ಟು ಹೊತ್ತೂ ತನ್ನದೇ ಕೆಲಸದಲ್ಲಿ ಮುಳುಗಿದ್ದ ಟೇಲರ್ ಕಡೆಗೊಮ್ಮೆ ಖುಷಿಯಿಂದ ತಲೆಯೆತ್ತಿದಳು. ಅವಳ ಕೈಯಲ್ಲಿ ಹೇರ್ ಕ್ಲಿಪ್ ಇತ್ತು. ಅದನ್ನೇ ಮೆಚ್ಚುಗೆಯಿಂದ ನೋಡುತ್ತಾ-'ಮಮ್ಮೀ, ಇದಕ್ಕೆ ಯಾವ ಕಲರ್ ಹಚ್ಚಲಿ ಎಂದು ಪ್ರಶ್ನಿಸಿದಳು. ಆ ಕಡೆಯಿಂದ ಉತ್ತರ ಬರುವ ಮೊದಲೇ ಕೆಂಪು ಬಣ್ಣದ ಡಬ್ಬಿಯೊಳಕ್ಕೆ ಬ್ರಷ್ ಅದ್ದಿದಳು. ಮುಂದಿನ ಹದಿನೈದು ನಿಮಿಷದಲ್ಲಿ, ಅವಳು ತಾನೇ ಕೈಯಾರೆ ತಯಾರಿಸಿದ ಹೇರ್ ಕ್ಲಿಪ್, ಒಂದಷ್ಟು ಹೊತ್ತು ಬಿಸಿಲಿನಲ್ಲಿ ಮೈ ಒಣಗಿಸಿಕೊಂಡು ತಲೆಗೇರಲು ಸಿದ್ಧವಾಗಿತ್ತು. ಆಗ, ತನ್ನನ್ನೇ ಹೆಮ್ಮೆಯಿಂದ ನೋಡುತ್ತಿದ್ದ ಅಮ್ಮನನ್ನು ಗಮನಿಸಿ ಹೇಳಿದಳು:'ಮಮ್ಮೀ, ನಾಳೆಯಿಂದ ಈ ಥರದ ಕ್ಲಿಪ್‌ಗಳನ್ನು ಮಾಡಿ ಮಾರ್ಲಾ?''ಛೆ, ಛೆ, ಮಾರೋದೆಲ್ಲ ಯಾಕಮ್ಮ? ನಿಂಗೆ ಎಷ್ಟು ಬೇಕೋ ಅಷ್ಟು ಮಾಡಿಕೋ ಸಾಕು' ಅಂದಳು ಟ್ರಿಸಿಯಾ.
'ಹಾಗಲ್ಲ ಮಮ್ಮೀ, ಹೇರ್‌ಕ್ಲಿಪ್‌ನ ಮಾರಿದ್ರೆ ದುಡ್ಡು ಬರ್ತದೆ ಅಲ್ವಾ?''ದುಡ್ಡು ಕೊಡಲಿಕ್ಕೆ ನಾವಿಲ್ವೇನೇ? ನಿಮ್ ಡ್ಯಾಡಿಗೆ ಕೇಳು, ಕೊಡ್ತಾರೆ...''ಮಮ್ಮೀ, ಹೀಗೆ ಸಂಪಾದಿಸೋ ದುಡ್ಡು ನನ್ನ ಖರ್ಚಿಗಲ್ಲ ಮಮ್ಮೀ...''ಮತ್ತೆ? ಯಾಕೆ ಆ ದುಡ್ಡು?''ಮಮ್ಮಿ, ಏನ್ಗೊತ್ತಾ? ಕ್ಲಿಪ್ ಮಾರಿದ್ರೆ ಒಂದಷ್ಟು ದುಡ್ಡು ಸಿಗುತ್ತೆ ಅಲ್ವಾ? ಅದರಿಂದ ಒಂದು ಟೆಡ್ಡಿ ಬೇರ್ ತಗೊಂಡು ನನ್ನ ಫ್ರೆಂಡ್‌ಗೆ ಕೊಡ್ಬೇಕು ಅಂತ ಆಸೆ. ಪಾಪ, ಅವ್ಳು ಆಸ್ಪತ್ರೇಲಿದಾಳೆ... ಅವಳಿಗೆ ಕ್ಯಾನ್ಸರಂತೆ.'ಮಗಳ ಮಾತು ಕೇಳುತ್ತಿದ್ದಂತೆಯೇ ಟ್ರಿಸಿಯಾಗೆ ಕಣ್ತುಂಬಿ ಬಂತು. ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೆ ಆಕೆ ಚಡಪಡಿಸುತ್ತಿದ್ದಾಗಲೇ ಟೇಲರ್ ಮಾತು ಮುಂದುವರಿಸಿದಳು: 'ಮಮ್ಮಿ, ನಾನು ದಿನಾಲೂ ಒಂದಷ್ಟು ಹೇರ್‌ಕ್ಲಿಪ್ ಮಾರ್ತಾ ಬಂದ್ರೆ 50 ಟೆಡ್ಡಿ ಬೇರ್ ತಗೊಳ್ಳೋಕೆ ಆಗುವಷ್ಟು ಹಣ ಹೊಂದಿಸಬಹುದು ಅಲ್ವಾ? ಯಾಕಂದ್ರೆ, ನನ್ನ ಫ್ರೆಂಡ್ ಇದಾಳಲ್ಲ; ಅದೇ ಆಸ್ಪತ್ರೇಲಿ ಕ್ಯಾನ್ಸರ್‌ನಿಂದ ಬಳಲ್ತಾ ಇರುವ 50ಕ್ಕೂ ಹೆಚ್ಚು ಮಕ್ಕಳಿವೆ. ಅವರಿಗೆಲ್ಲಾ ಒಂದೊಂದು ಟೆಡ್ಡಿಬೇರ್ ಕೊಡಬೇಕು ಅಂತ ಆಸೆ ಮಮ್ಮೀ...'ಉಹುಂ, ಅದು ಏಳು ವರ್ಷದ ಹುಡುಗಿಯೊಬ್ಬಳು ಆಡುವಂಥ ಮಾತಾಗಿರಲಿಲ್ಲ. ಚಿಕ್ಕ ಪುಟ್ಟದ್ದಕ್ಕೆಲ್ಲ ಹಠ ಹಿಡಿಯುತ್ತಾ ತರಲೆ ಮಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಟೇಲರ್, ತುಂಬಾ ಭಿನ್ನವಾಗಿ ಯೋಚಿಸಿದ್ದಳು. ಮಗಳ ಕನಸು ನನಸಾಗುತ್ತೋ ಇಲ್ಲವೋ ಎಂಬುದರ ಬಗ್ಗೆ ಟ್ರಿಸಿಯಾ ಯೋಚಿಸಲಿಲ್ಲ. ಮಗಳ ಪ್ರಬುದ್ಧ ಯೋಚನೆಯೇ ಅವಳಲ್ಲಿ ರೋಮಾಂಚನ ಉಂಟು ಮಾಡಿತ್ತು. ಆಕೆ ತಕ್ಷಣವೇ ಹೇಳಿದಳು: ಕ್ಲಿಪ್‌ಗಳನ್ನು ಮಾರಿ ಐವತ್ತಲ್ಲ, ನೂರು ಟೆಡ್ಡಿ ಬೇರ್‌ಗೂ ದುಡ್ಡು ಹೊಂದಿಸಬಹುದು ಮಗಳೇ. ನಾಳೆಯಿಂದಾನೇ ಕೆಲ್ಸ ಶುರು ಮಾಡು. ನಿಂಗೆ ಹೆಲ್ಪರ್ ಥರಾ ನಾನೂ ಇರ್ತೀನಿ. ಆದ್ರೆ ಕ್ಲಿಪ್‌ಗಳನ್ನು ಮಾರುವ ಕೆಲಸ ಮಾತ್ರ ನನ್ನದು...'ಇದಿಷ್ಟೂ ಮಾತುಕತೆ ನಡೆದದ್ದು 1997ರ ಅಕ್ಟೋಬರಿನಲ್ಲಿ. ಅದೇ ತಿಂಗಳು ಶುರುವಾಗಿದ್ದೇ ಟೇ-ಬೇರ್ ಕಂಪನಿ. 'ಟೇ' ಎಂಬುದು ಟೇಲರ್‌ಳ ಹೆಸರಿನ ಶಾರ್ಟ್ ಫಾರಂ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಟೆಡ್ಡಿ ಬೇರ್ ಕೊಡಬೇಕು ಎಂಬ ದಿವ್ಯ ಯೋಚನೆಯೊಂದು ಏಳು ವರ್ಷದ ಟೇಲರ್‌ಗೆ ಬಂದದ್ದು ಹೇಗೆಂದರೆ-ಈ ಹುಡುಗಿಯ ಇಬ್ಬರು ಅಜ್ಜಿಯರೂ ಕ್ಯಾನ್ಸರ್‌ನಿಂದಲೇ ಮೃತಪಟ್ಟರು. ಪುಟ್ಟ ಹುಡುಗಿಯ ಪುಟಾಣಿ ಮನಸ್ಸು ಈ ದುರ್ಘಟನೆಯನ್ನು ಮರೆಯುವ ಮೊದಲೇ ಸಹಪಾಠಿಯೊಬ್ಬಳು ಅದೇ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ ಸುದ್ದಿ ಬಂದಿತ್ತು. ಸೋಂಕು ಹರಡಬಹುದು ಎಂಬ ಕಾರಣದಿಂದ ಆಸ್ಪತ್ರೆಗೆ ಬಂದವರೆಲ್ಲ ಮಾಸ್ಕ್ ಕಟ್ಟಿಕೊಂಡೇ ಮಾತಿಗೆ ಶುರುವಿಡುತ್ತಿದ್ದರು. ಮಕ್ಕಳ ಮುಂದೆ ಕೂತ ಪೋಷಕರು, ಮಾತಾಡುವ ಬದಲು ಬಿಕ್ಕಳಿಸುತ್ತಿದ್ದರು. ಅಲ್ಲಿ ಮಕ್ಕಳನ್ನು ನಗಿಸುವವರಾಗಲಿ, ಅವರಿಗೆ ಸಮಾಧಾನ ಹೇಳುವವರಾಗಲಿ ಇರಲೇ ಇಲ್ಲ. ಅದನ್ನು ಕಂಡಾಗಲೇ ಏಳೇ ಏಳು ವರ್ಷದ ಟೇಲರ್ ಮೇರಿ ಕ್ರಾಬ್‌ಟ್ರೀಗೆ ಅನಿಸಿದ್ದು: ಆಸ್ಪತ್ರೇಲಿರುವ ಎಲ್ಲ ಮಕ್ಕಳಿಗೂ ಒಂದೊಂದು ಟೆಡ್ಡಿಬೇರ್ ಕೊಟ್ಟರೆ, ಅವರ ಮೊಗದಲ್ಲಿ ಖಂಡಿತ ನಗು ಅರಳುತ್ತೆ. ರಾತ್ರಿ ಹೊತ್ತು ಟೆಡ್ಡಿಯನ್ನೇ ತಬ್ಬಿಕೊಂಡು ಮಲಗಿಕೊಂಡರೆ, ಆ ಮಕ್ಕಳಿಗೆ ಎಂಥದೋ ಧೈರ್ಯ, ಖುಷಿ ಜೊತೆಯಾಗುತ್ತೆ...'ಮಗಳ ಈ ಯೋಜನೆ ಯಶಸ್ಸು ಕಾಣುತ್ತೆ ಎಂದು ಟ್ರಿಸಿಯಾಗೆ ನಂಬಿಕೆಯಿರಲಿಲ್ಲ. ತೀರಾ ಚಿಲ್ಲರೆ ಬೆಲೆಯ ಹೇರ್ ಕ್ಲಿಪ್‌ಗಳನ್ನು ಮಾರಿ ಒಂದೆರಡಲ್ಲ, 50 ಟೆಡ್ಡಿಬೇರ್‌ಗಳನ್ನು ಖರೀದಿಸುವುದು ಹುಡುಗಾಟದ ಮಾತಲ್ಲ ತಾನೆ? ಏಕೆಂದರೆ, ಹೇರ್ ಕ್ಲಿಪ್‌ಗಳನ್ನು ಮಾರಲು ಅವರಿಗೆ ಅಂಗಡಿಯಿರಲಿಲ್ಲ. ವ್ಯಾಪಾರದಲ್ಲಿ ಅನುಭವವೂ ಇರಲಿಲ್ಲ. ಆದರೆ, ಹಾಗೆಲ್ಲ ಹೇಳಿ ಮಗಳಿಗೆ ನಿರಾಶೆ ಮಾಡಲು ಟ್ರಿಸಿಯಾಗೆ ಇಷ್ಟವಿರಲಿಲ್ಲ. ಸಾಕಷ್ಟು ಹೇರ್‌ಕ್ಲಿಪ್ ತಯಾರಿಸಿ ಅವುಗಳನ್ನೆಲ್ಲಾ ಮಗಳ ಮುಂದಿಟ್ಟು-'ಹೋಗಿ ಮಾರಾಟ ಮಾಡಿಕೊಂಡು ಬಾ. ನಿಂಗೆ ಗೆಲುವಾಗಲಿ' ಎಂದಳು. ಅಂದಿನಿಂದ, ಶಾಲೆ ಮುಗಿಸಿದ ತಕ್ಷಣವೇ ಸೂಪರ್‌ಬಜಾರ್‌ಗಳ ಮುಂದೆ ಹೇರ್‌ಕ್ಲಿಪ್‌ಗಳ ಮಾರಾಟಕ್ಕೆ ನಿಲ್ಲುವುದು ಟೇಲರ್‌ಳ ಕೆಲಸವಾಯಿತು. ಏಳು ವರ್ಷದ ಈ ಹುಡುಗಿಯ ವ್ಯಾಪಾರ ಕಂಡು ಹಲವರಿಗೆ ಅಚ್ಚರಿ, ಅನುಮಾನ. ಆ ಕುರಿತು ಟೇಲರ್ ತಲೆಕೆಡಿಸಿಕೊಳ್ಳಲಿಲ್ಲ. ಎದುರು ನಿಂತವರಿಗೆಲ್ಲ ತನ್ನ ಆಸೆ, ಕನಸುಗಳ ಬಗ್ಗೆ ಹೇಳಿಕೊಂಡಳು. ಹೆಲ್ಪ್ ಮಿ ಪ್ಲೀಸ್ ಎಂದು ಪ್ರಾರ್ಥಿಸಿದಳು.ಕೆಲದಿನಗಳ ನಂತರ ಈ ಪುಟ್ಟ ಹುಡುಗಿಯ ದೊಡ್ಡ ಆಸೆ ಪತ್ರಿಕೆಗಳಿಗೆ ಗೊತ್ತಾಯಿತು. ಟೇಲರ್‌ಳ ಮುಗ್ಧತೆ ಮತ್ತು ಪ್ರಾಮಾಣಿಕತೆ ಎಲ್ಲ ಪತ್ರಕರ್ತರ ಕರುಳು ತಾಕಿತು. ಪರಿಣಾಮ, ಟೇಲರ್‌ಳ ಬಗ್ಗೆ ವಿಶೇಷ ವರದಿಗಳು ಪ್ರಕಟವಾದವು. ಈ ಹುಡುಗಿ ತಯಾರಿಸಿದ ಹೇರ್‌ಕ್ಲಿಪ್‌ಗಳನ್ನು ಖರೀದಿಸಲು ಪ್ರಾಯೋಜಕರೂ ಮುಂದೆ ಬಂದರು. ಪರಿಣಾಮ, ಕೆಲವೇ ದಿನಗಳಲ್ಲಿ 50 ಟೆಡ್ಡಿ ಬೇರ್ ಖರೀದಿಗೆ ಅಗತ್ಯವಿದ್ದಷ್ಟು ಹಣ ಸಂಗ್ರಹವಾಗಿಯೇ ಬಿಟ್ಟಿತು. ಮೊದಲ ಟೆಡ್ಡಿ ಬೇರ್‌ನೊಂದಿಗೆ ಗೆಳತಿಯ ಮುಂದೆ ನಿಂತಳು ಟೇಲರ್. ಹಾಸಿಗೆಯಲ್ಲಿದ್ದ ಆ ಹುಡುಗಿ ಛಕ್ಕನೆ ಮೇಲೆದ್ದು, ಮಾತಾಡದ ಆ ಗೊಂಬೆಯೇ ತನ್ನ ಜೀವವೇನೋ ಎಂಬಂತೆ ಅದನ್ನು ಬಾಚಿ ತಬ್ಬಿಕೊಂಡಿತು. ನಂತರ ಸ್ವಲ್ಪ ಹೊತ್ತು ಮಾತಾಡಿ, ಟೆಡ್ಡಿಯನ್ನು ತಬ್ಬಿಕೊಂಡೇ ನಿದ್ರೆಗೆ ಜಾರಿತು. ಟೇಲರ್‌ಳಿಂದ ಟೆಡ್ಡಿಬೇರ್‌ಗಳನ್ನು ಉಡುಗೊರೆಯಾಗಿ ಪಡೆದ ಉಳಿದ ಮಕ್ಕಳ ಸ್ಥಿತಿಯೂ ಬೇರೆ ಇರಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ಅಮ್ಮನೊಂದಿಗೆ ಮನೆ ತಲುಪಿದ ಸ್ವಲ್ಪ ಹೊತ್ತಿಗೇ, ಅದೇ ಕ್ಯಾನ್ಸರ್ ಆಸ್ಪತ್ರೆಯಿಂದ ಟೇಲರ್‌ಗೆ ಸುದ್ದಿ ಬಂತು: 'ಮತ್ತಷ್ಟು ಟೆಡ್ಡಿ ಬೇರ್‌ಗಳು ಬೇಕು. ಅವುಗಳನ್ನು ತಬ್ಬಿಕೊಳ್ಳಲು ಮತ್ತಷ್ಟು ಮಕ್ಕಳು ಕಾಯುತ್ತಿವೆ...'ಮರುದಿನದಿಂದ ಮತ್ತೆ ಸೂಪರ್ ಬಜಾರ್‌ನ ಮುಂದೆ ಹೇರ್ ಕ್ಲಿಪ್‌ಗಳನ್ನು ಮಾರಲು ಬಂದಳು ಟೇಲರ್. ಅವಳ ನಿಸ್ವಾರ್ಥ ಸೇವೆಯನ್ನು ಪತ್ರಿಕೆಗಳು ಮುಕ್ತಕಂಠದಿಂದ ಹೊಗಳಿದವು. ಪರಿಣಾಮ ಟೇಲರ್ ವಾಸವಿದ್ದಳಲ್ಲ: ಆ ಏರಿಯಾದಿಂದ 50ಕ್ಕೂ ಹೆಚ್ಚು ಮಕ್ಕಳು  ಹೇರ್‌ಕ್ಲಿಪ್ ತಯಾರಿಸುವ ಕೆಲಸಕ್ಕೆ ಬಂದವು. ಎಲ್ಲರ ನೆರವಿನಿಂದ ತಯಾರಾದ ಹೇರ್‌ಕ್ಲಿಪ್‌ಗಳನ್ನು ಗುಡ್ಡೆ ಹಾಕಿಕೊಂಡು -'ಈ ಹೇರ್‌ಕ್ಲಿಪ್‌ಗಳನ್ನು ಖರೀದಿಸಿ. ಕ್ಯಾನ್ಸರ್ ಇರುವ ಮಕ್ಕಳಿಗೆ ಟೆಡ್ಡಿಬೇರ್ ಖರೀದಿಸಲು ನೆರವಾಗಿ' ಎಂಬ ಬ್ಯಾನರ್ ಮುಂದಿಟ್ಟುಕೊಂಡು ಸೂಪರ್ ಮಾರ್ಕೆಟ್‌ಗಳ ಮುಂದೆ ನಿಲ್ಲುತ್ತಿದ್ದಳು ಟೇಲರ್. ಅದೊಂದು ಸಂಜೆ ಮಧ್ಯ ವಯಸ್ಕ ಆಂಟಿಯೊಬ್ಬಳು ಟೇಲರ್‌ಳನ್ನೇ ಹುಷಾರಾಗಿ ಗಮನಿಸಿದಳು. ಈ ಹುಡುಗಿ ಎಮೋಷನಲ್ ಮಾತುಗಳ ಮೂಲಕ ದುಡ್ಡು ಮಾಡಿಕೊಂಡು ಅದನ್ನು ಮತ್ತಾವುದಕ್ಕೋ ಬಳಸ್ತಾಳೆ ಎಂಬ ಗುಮಾನಿ ಆಕೆಗಿತ್ತು. ಟೇಲರ್‌ಳ ಮುಂದೆ ನಿಂತ ಆಕೆ ನಿಷ್ಠುರ ದನಿಯಲ್ಲಿ ಕೇಳಿದಳು: 'ನಿಜ ಹೇಳು. ಹೀಗೆ ದುಡಿದಿದ್ದನ್ನು ಏನು ಮಾಡ್ತೀಯ? ಹೀಗೆ ಸಿಗುವ ದುಡ್ಡಿಂದ ಏನು ತಗೋತೀಯ?'ಟೇಲರ್ ತುಂಬ ಸಂಭ್ರಮದಿಂದಲೇ ತನ್ನ ಕನಸುಗಳ ಬಗ್ಗೆ, ಕೆಲಸದ ಬಗ್ಗೆ ಹೇಳಿಕೊಂಡಳು. ಅಷ್ಟಕ್ಕೇ ನಿಲ್ಲಿಸದೆ, ತನಗೆ ಯಾರೆಲ್ಲಾ ನೆರವಾಗಿದ್ದಾರೆ, ಈವರೆಗೆ ಎಷ್ಟು ಹಣ ಸಂಗ್ರಹವಾಗಿದೆ, ಎಷ್ಟು ಖರ್ಚಾಗಿದೆ, ಟೆಡ್ಡಿ ಬೇರ್‌ಗಳನ್ನು ಯಾವ್ಯಾವ ಆಸ್ಪತ್ರೆಗೆ ಹಂಚಲಾಗಿದೆ ಎಂದೂ ವಿವರಿಸಿದಳು. ಗಣ್ಯರಿಂದ, ಟೆಡ್ಡಿ ಪಡೆದ ಮಕ್ಕಳಿಂದ ತನಗೆ ಬಂದ ಮೆಚ್ಚುಗೆಯ ಪತ್ರಗಳನ್ನು ತೋರಿಸಿದಳು. ನಂತರ, ನೀವೂ ಒಂದು ಹೇರ್ ಕ್ಲಿಪ್ ತಗೊಳ್ಳಿ ಆಂಟಿ, ಪ್ಲೀಸ್... ಅಂದಳು. ಒಂದೆರಡಲ್ಲ, ಹತ್ತು ಹೇರ್‌ಕ್ಲಿಪ್‌ಗಳನ್ನು ಖರೀದಿಸಿದ ಆ ಹೆಂಗಸು, ಮರುಕ್ಷಣವೇ ಕುಸಿದು, ಟೇಲರ್‌ಳನ್ನು ಬಾಚಿ ತಬ್ಬಿಕೊಂಡು ಹೇಳಿದಳು: ಕಂದಾ, ನೀನು ಆರು ತಿಂಗಳ ಮುಂಚೆ ನನಗೆ ಸಿಗಬಾರದಿತ್ತಾ? ನನ್ನ ಎಂಟು ವರ್ಷದ ಮಗ ಐದು ತಿಂಗಳ ಹಿಂದೆ ಕ್ಯಾನ್ಸರಿನಿಂದ ಸತ್ತು ಹೋದ. ನಿನ್ನ ಟೆಡ್ಡಿ ಬೇರ್ ಸಿಕ್ಕಿದ್ರೆ ಅವನು ತುಂಬಾ ಖುಷಿಪಡ್ತಿದ್ದ...'ನಂತರದ ದಿನಗಳಲ್ಲಿ ಟೇಲರ್‌ಳ ಬಳಗ ದೊಡ್ಡದಾಗುತ್ತಾ ಹೋಯಿತು. ಆಕೆಯ ಟೇ-ಬೇರ್ ಕಂಪನಿಗೆ ಒಂದು ಭಾವನಾತ್ಮಕ ನೆಲೆಗಟ್ಟು ಸಿಕ್ಕಿಬಿಟ್ಟಿತು. ಹೇರ್‌ಕ್ಲಿಪ್‌ಗಳನ್ನು ಖರೀದಿಸುವುದು ಅಮೆರಿಕನ್ನರ ಪಾಲಿಗೆ ಕರ್ತವ್ಯವೇ ಆಯಿತು. ಕೆಲವು ಮಕ್ಕಳು ತಾವೂ ಹೇರ್‌ಕ್ಲಿಪ್ ತಯಾರಿಸಿ ಅದನ್ನು ಟೇಲರ್‌ಳ ವಿಳಾಸಕ್ಕೆ ತಲುಪಿಸಿದರು. ಉದ್ಯಮಿಗಳು, 'ಹೇರ್‌ಕ್ಲಿಪ್ ಬೇಡ. ದುಡ್ಡು ಕೊಡ್ತೇವೆ ತಗೋ' ಎಂದರು. ಉಹುಂ, ನಾನು ಯಾರಿಂದಲೂ ದಾನ ಪಡೆಯಲಾರೆ. ಸೇವೆಯೊಂದೇ ನನ್ನ ಗುರಿ. ನನ್ನೊಂದಿಗೆ ಕೈ ಜೋಡಿಸುವ ಆಸೆಯಿದ್ದರೆ ಹೇರ್‌ಕ್ಲಿಪ್ ಖರೀದಿಸಿ ಎಂದಳು ಟೇಲರ್. ಮಗಳ ಹೆಸರಿಗೆ ಬಂದ ಪ್ರತಿಯೊಂದು ಪೈಸೆಗೂ ಟೇಲರ್‌ಳ ತಂದೆ ಲೆಕ್ಕ ಬರೆದು, ಅದನ್ನು ವರ್ಷ ವರ್ಷವೂ ಸಾರ್ವಜನಿಕರ ಮುಂದಿಟ್ಟ. ವ್ಯವಹಾರದಲ್ಲಿನ ಈ ಪಾರದರ್ಶಕತೆ, ಟೇ-ಬೇರ್ ಕಂಪನಿಯ ಮೇಲಿದ್ದ ನಂಬಿಕೆಯನ್ನು ಮತ್ತಷ್ಟು ಗಟ್ಟಿ ಮಾಡಿತು. ಟೇಲರ್‌ಳ ಹೆಸರು, ಕ್ಯಾಲಿಫೋರ್ನಿಯಾದ ಗಡಿದಾಟಿ ಅಮೆರಿಕದ ಮೂಲೆಮೂಲೆಯನ್ನೂ ತಲುಪಿತು. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಖುದ್ದಾಗಿ ಟೆಡ್ಡಿಬೇರ್ ವಿತರಿಸುವಂತೆ ಅಮೆರಿಕದ ನೂರಕ್ಕೂ ಹೆಚ್ಚು ಆಸ್ಪತ್ರೆಗಳಿಂದ ಕರೆ ಬಂತು. ಪರಿಣಾಮ, ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ತಲುಪಿದ ಟೆಡ್ಡಿಬೇರ್‌ಗಳ ಸಂಖ್ಯೆ 1000ದ ಗಡಿ ದಾಟಿತು. ಈ ಸೇವಾ ಕಾರ್ಯದ ಮಧ್ಯೆ ಟೇಲರ್ ಓದುವುದನ್ನು ಮರೆಯಲಿಲ್ಲ. ಯೌವನಕ್ಕೆ ಕಾಲಿಡುವ ವೇಳೆಗೆ ಆಕೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಕ್ರೀಡಾಪಟುವಾದಳು. ಅಪ್ಪನಿಂದ ಪಾಕೆಟ್‌ಮನಿ ಪಡೆದೇ ಡಿಗ್ರಿ ಮುಗಿಸಿದಳು.ವೈದ್ಯಕೀಯ ಆವಿಷ್ಕಾರಗಳು ಮುಂದುವರಿದಂತೆಲ್ಲಾ ಕ್ಯಾನ್ಸರ್‌ಗೆ ತಕ್ಕಮಟ್ಟಿಗೆ ಕಡಿವಾಣ ಹಾಕಲೂ ಈಗ ಸಾಧ್ಯವಾಗಿದೆ. ಹಾಗಾಗಿ ಈ ದಿನಗಳಲ್ಲಿ ಟೆಡ್ಡಿಬೇರ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗಿರಬಹುದು. ಆದರೆ, ಟೇ-ಬೇರ್ ಕಂಪನಿಯ ನಿಸ್ವಾರ್ಥ ಸೇವೆ ನಿಂತಿಲ್ಲ. ಈವರೆಗೂ 30 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಟೇ-ಬೇರ್‌ನ ಟೆಡ್ಡಿಗಳು ತಲುಪಿವೆ. ಜೊತೆಗಿರುವುದು, ತಮ್ಮ ಜೀವದ ಮತ್ತೊಂದು ಭಾಗವೇನೋ ಎಂಬಂಥ ಮಮತೆಯಿಂದ ಕ್ಯಾನ್ಸರ್‌ಪೀಡಿತ ಮಕ್ಕಳು ಟೆಡ್ಡಿಯನ್ನು ತಬ್ಬಿಕೊಂಡಿವೆ. ಕ್ಯಾನ್ಸರ್ ಗೆದ್ದ ಮಕ್ಕಳು ಟೇಲರ್‌ಳ ನೆನಪಿಗೆಂದು ಟೆಡ್ಡಿಯನ್ನು ಮನೆಗೆ ಹೊತ್ತೊಯ್ದಿವೆ. ಕೆಲವರು, ಮಕ್ಕಳೊಂದಿಗೆ, ಟೆಡ್ಡಿಗಳನ್ನೂ ಕಾಫಿನ್ ಬಾಕ್ಸ್‌ನಲ್ಲಿಟ್ಟು ಸಂಸ್ಕಾರ ಮಾಡಿದ್ದಾರೆ. ಮಕ್ಕಳು ಮಾತ್ರವಲ್ಲ, ಕ್ಯಾನ್ಸರ್‌ಪೀಡಿತ ಅಜ್ಜ-ಅಜ್ಜಿಯರೂ, ನಮಗೊಂದು ಟೆಡ್ಡಿಬೇರ್ ತಂದುಕೊಡಿ. ಅದನ್ನು ತಬ್ಬಿಕೊಂಡು ಮಲಗಿದ್ರೆ ಏನೋ ಸಮಾಧಾನ ಎಂದು ಮಕ್ಕಳ ಮುಂದೆ ಹೇಳಿಕೊಂಡಿದ್ದಾರೆ. ಟೆಡ್ಡಿಗಳು ತಲುಪಿದ ಮರುದಿನವೇ- 'ಮಗಳೇ, ನಿನ್ನ ಸೇವೆ ಮುಂದುವರಿಯಲಿ. ನಿನಗೆ ಥ್ಯಾಂಕ್ಸ್ ಅಂಡ್ ಥ್ಯಾಂಕ್ಸ್‌' ಎಂದು ಟೇಲರ್‌ಗೆ ಪತ್ರ ಬರೆದಿದ್ದಾರೆ.ಅಂದ ಹಾಗೆ, ಈ ಹುಡುಗಿ ಟೆಡ್ಡಿಬೇರ್‌ಗಳನ್ನು ಕ್ಯಾನ್ಸರ್‌ಪೀಡಿತರಿಗೆ ಕೊಡುತ್ತಾಳಲ್ಲ, ಅದರಲ್ಲೇ ಒಂದು ವಿಶೇಷವಿದೆ. ಪ್ರತಿಯೊಂದು ಟೆಡ್ಡಿಯನ್ನೂ ಆಕರ್ಷಕ ಪ್ಯಾಕ್‌ನಲ್ಲಿ ತುಂಬಲಾಗಿರುತ್ತದೆ. ಅದರ ಮೇಲೆ ಮುದ್ದಾದ ಅಕ್ಷರಗಳಲ್ಲಿ ಅದನ್ನು ಪಡೆವ ಮಗುವಿನ ಹೆಸರು ಬರೆದು, ಬೇಗ ಹುಷಾರಾಗು, ಯಾವಾಗ್ಲೂ ಖುಷಿಯಾಗಿರು ಎಂಬ ಸಂದೇಶವನ್ನೂ ಜೊತೆಗಿಟ್ಟು ತನ್ನ ಬಳಗದ ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗುತ್ತಾಳೆ ಟೇಲರ್. ಅಲ್ಲಿನ ಮಕ್ಕಳ ಮುಂದೆ ನಿಂತು-ಟೆಡ್ಡಿ ಬೇರ್‌ನ ಪ್ಯಾಕ್ ಮಾಡಿದ್ದು ಯಾರು? ಕವರ್‌ಗೆ ಫಳಫಳ ಹೊಳೆವ ಹಾಳೆ ತಂದಿದ್ದು ಯಾರು? ಸಂದೇಶವಾಗಿರುವ ಮುದ್ದು ಅಕ್ಷರಗಳ ಒಡೆಯರು ಯಾರು ಎಂದೆಲ್ಲಾ ವಿವರಿಸುತ್ತಾಳೆ. ನಂತರ- ನಿನ್ನ ಒಳಿತಿಗಾಗಿ ನಾವೆಲ್ರೂ ಪ್ರಾರ್ಥಿಸ್ತಾ ಇರ್ತೇವೆ. ನೀನು ಖುಷಿಯಾಗಿರು, ಗೆಲುವಾಗಿರು, ನೆಮ್ಮದಿಯಾಗಿರು ಎಂದು ಸಮಾಧಾನ ಹೇಳುತ್ತಾಳೆ. ಉಹುಂ, ನಾನು ಖಂಡಿತ ಮಹತ್ವದ್ದೇನೂ ಮಾಡಿಲ್ಲ. ಕ್ಯಾನ್ಸರ್‌ನಿಂದ ಕಂಗಾಲಾದ ಮಕ್ಕಳ ಮೊಗದಲ್ಲಿ ಮಂದಹಾಸ ತರಬೇಕು ಎಂಬ ಆಸೆಯಿತ್ತು. ಅದರಲ್ಲಿ ಯಶಸ್ಸು ಕಂಡಿದ್ದೀನಿ. ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ಇನ್ನೂ 1000 ಟೆಡ್ಡಿಗಳನ್ನು ಕೊಡಲಿಕ್ಕೂ ನಾನು ರೆಡಿ ಅನ್ನುತ್ತಾಳೆ.ಟೇ-ಬೇರ್ ಕಂಪನಿಯ ಬಳಗದಲ್ಲೀಗ 3000 ಮಕ್ಕಳಿದ್ದಾರೆ. ಅವರಿಗೆ, ವಾರಕ್ಕೊಮ್ಮೆ ತರಗತಿ ನಡೆಸುವ ಟೇಲರ್, ಅಲ್ಲಿ ಹೇರ್‌ಕ್ಲಿಪ್ ತಯಾರಿಸುವುದನ್ನು ಹೇಳಿಕೊಡ್ತಾಳೆ. ನಂತರದಲ್ಲಿ ಮಕ್ಕಳ ಕೌಶಲ ಹೇರ್‌ಕ್ಲಿಪ್ ಆಗಿ ಆನಂತರದಲ್ಲಿ, ಟೆಡ್ಡಿಯಾಗಿ ಬದಲಾಗುತ್ತದೆ. ಟೇಲರ್‌ಳ ನಿಸ್ವಾರ್ಥ ಸೇವೆ ಅಮೆರಿಕದಲ್ಲಿ ಮನೆಮಾತು. ಸಿಎನ್‌ಎನ್ ಚಾನೆಲ್ ಈಕೆಯನ್ನು ಸಂದರ್ಶಿಸಿದೆ. ಎಲ್ಲ ಪತ್ರಿಕೆಗಳೂ ಟೇಲರ್‌ಳ ಸೇವೆಯ ಬಗ್ಗೆ ಪುಟಗಟ್ಟಲೆ ಬರೆದಿವೆ. ಹೇರ್‌ಕ್ಲಿಪ್‌ಗಳ ಮಾರಾಟದಿಂದ ಬಂದ ಹಣ ಟೆಡ್ಡಿಗಳ ಖರೀದಿಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಟೇಲರ್‌ಳ ಜತೆಗಿದ್ದ ಮಕ್ಕಳು ಸನ್‌ಗ್ಲಾಸ್‌ಗಳನ್ನು ತಯಾರಿಸಿ, -'ಟೇ, ನಿನ್ನ ಬೆಂಬಲಕ್ಕೆ ನಾವಿದ್ದೇವೆ, ಹೆದರಬೇಡ ಎಂದಿದ್ದಾರೆ. ಹೇರ್‌ಕ್ಲಿಪ್ ಖರೀದಿಸಲೆಂದೇ ನೂರಾರು ಮೈಲಿ ದೂರದಿಂದ ಬಂದವರಿದ್ದಾರೆ. ಹೇರ್‌ಕ್ಲಿಪ್ ಕೊಂಡವರು, ಟೆಡ್ಡಿಯನ್ನು ಪಡೆದವರು- ಎರಡೂ ಕಡೆಯಲ್ಲಿ ಕಾಣುವುದು ಧನ್ಯತಾ ಭಾವ. ಅದನ್ನು ನೆನೆದು ಟೇಲರ್ ಹೇಳುತ್ತಾಳೆ: ದೇವರು ಕಾಣಿಸೋದಿಲ್ಲ ಅಂತಾರಲ್ಲ; ಅದು ಸುಳ್ಳು. ಹೇರ್‌ಕ್ಲಿಪ್ ಖರೀದಿಸುವ, ಟೆಡ್ಡಿಯನ್ನು ಪಡೆಯುವವರ ರೂಪದಲ್ಲಿ ದೇವರು ನನಗೆ ಮೇಲಿಂದ ಮೇಲೆ ಕಾಣಿಸ್ತಾನೇ ಇರ್ತಾನೆ.ಟೇಲರ್‌ಳಿಂದ ನಾವೆಲ್ಲಾ ಕಲಿಯಬೇಕಾದ್ದು ಬಹಳಷ್ಟಿದೆಯಲ್ಲವೇ?

- ಎ.ಆರ್. ಮಣಿಕಾಂತ್armanikanth@gmail.com






















ಮಲಾಲಾ ಗುಂಗಿನ ನಡುವೆಯೇ ಮನಾಲ್‌ಗೊಂದು ಸಲಾಂ


ಮಲಾಲಾ ಗುಂಗಿನ ನಡುವೆಯೇ ಮನಾಲ್‌ಗೊಂದು ಸಲಾಂ

ಭಾವತೀರಯಾನ- ಎ.ಆರ್.ಮಣಿಕಾಂತ್


ಪಾಕಿಸ್ತಾನದಲ್ಲಿ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ದನಿಯೆತ್ತಿದ ಮಲಾಲಾ ಇದ್ದಾಳಲ್ಲ; ಅಂಥದೇ ವ್ಯಕ್ತಿತ್ವದ ಮತ್ತೊಬ್ಬ ದಿಟ್ಟೆ -ಮನಾಲ್ ಶರೀಫ್. ಸೌದಿ ಅರೇಬಿಯಾದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ ಗೆದ್ದದ್ದು ಈಕೆಯ ಹೆಚ್ಚುಗಾರಿಕೆ. ಒಂದು ಕಾಲದಲ್ಲಿ ಈಕೆ ಉಗ್ರಗಾಮಿ ಸಂಘಟನೆಯಲ್ಲಿದ್ದವಳು. ಅಲ್ಲಿಂದ ಹೊರಬರಲು ಕಾರಣವಾದದ್ದು 9/11ರ ಘಟನೆ. ಅವಳ ಹೋರಾಟದ ಬದುಕಿನ ಕಥೆಯನ್ನು ರೀಡರ್ಸ್ ಡೈಜೆಸ್ಟ್ ವಿಶೇಷ ಲೇಖನವೆಂದು ಪ್ರಕಟಿಸಿದೆ. ಅದರ ಭಾವಾನುವಾದ ಇಲ್ಲಿದೆ. ಓದಿಕೊಳ್ಳಿ.'ಮುಸ್ಲಿಮರ ಪಾಲಿನ ಪವಿತ್ರ ಕ್ಷೇತ್ರವೆಂದರೆ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ. ಈ ಪುಣ್ಯ ಕ್ಷೇತ್ರವೇ ನನ್ನ ಹುಟ್ಟೂರು. ನಾನು ಹುಟ್ಟಿದ್ದು 1979ರಲ್ಲಿ. ಅದೇ ವರ್ಷದ ನವೆಂಬರ್‌ನಲ್ಲಿ, ಜುಹೇಮನ್ ತಯ್ಯಬಿ ಎಂಬ ಮುಸ್ಲಿಂ ಉಗ್ರಗಾಮಿ ನಾಯಕ ಮತ್ತು ಆತನ 400ಕ್ಕೂ ಹೆಚ್ಚು ಬೆಂಬಲಿಗರು, ಏಕಾಏಕಿ ಮೆಕ್ಕಾ ಕ್ಷೇತ್ರವನ್ನೇ ಆಕ್ರಮಿಸಿಕೊಂಡರು. ಈ ದಿಢೀರ್ ಆಕ್ರಮಣದಿಂದ ಸರ್ಕಾರ ಕಂಗಾಲಾಯಿತು. ನಂತರ, ಸೇನಾ ಕಾರ್ಯಾಚರಣೆಯ ಮೂಲಕ ಜುಹೇಮನ್ ಮತ್ತು ಬೆಂಬಲಿಗರನ್ನು ಸೆರೆ ಹಿಡಿದು ಎಲ್ಲರನ್ನೂ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.ಅರಬ್ ರಾಷ್ಟ್ರಗಳು ಮೈ ತುಂಬಾ ಮಡಿವಂತಿಕೆಯನ್ನು ಹೊದ್ದುಕೊಂಡಿದ್ದ ಕಾಲ ಅದು. ಅಂಥ ಸಂದರ್ಭದಲ್ಲಿ ಸೌದಿ ಅರೇಬಿಯಾದ ರಾಜ, ಕೆಲವೊಂದು ಬದಲಾವಣೆಗಳಿಗೆ ಮುಂದಾಗಿದ್ದ. ಮುಖ್ಯವಾಗಿ, ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಹೇರಲಾಗಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಇಂಥ ಸಾಮಾಜಿಕ ಬದಲಾವಣೆ ಇಸ್ಲಾಂ ಧರ್ಮದ ಆಶಯಗಳಿಗೆ ವಿರುದ್ಧವಾದದ್ದು, ಸರ್ಕಾರದ ಇಂಥ ನಡೆಯನ್ನು ಧಿಕ್ಕರಿಸುತ್ತೇವೆ ಎಂದು ಹೇಳಿಕೊಂಡೇ ಜುಹೇಮನ್ ಮತ್ತು ಬೆಂಬಲಿಗರು ಮೆಕ್ಕಾಕ್ಕೆ ನುಗ್ಗಿ ಬಂದಿದ್ದರು.
ಕೆಲವೇ ದಿನಗಳ ನಂತರ, ಜುಹೇಮನ್‌ನ ಸಾವಿಗೆ ಪ್ರತೀಕಾರದ ರೂಪದಲ್ಲಿ ಮತ್ತೆ ಗಲಭೆ ನಡೆಸಲು, ಆ ಮೂಲಕ ತಮ್ಮ ಉದ್ದೇಶ ಏನೆಂದು ಸಾರಲು ಜುಹೇಮನ್‌ನ ಬೆಂಬಲಿಗರು ನಿರ್ಧರಿಸಿರುವ ಸುದ್ದಿ ಸರ್ಕಾರವನ್ನು ತಲುಪಿತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರ, ಉಗ್ರಗಾಮಿಗಳನ್ನು ಸಮಾಧಾನಿಸುವ ಕೆಲಸಕ್ಕೆ ಮುಂದಾಯಿತು. ಪರಿಣಾಮವಾಗಿ, ಟಿ.ವಿ.ಗಳಲ್ಲಿ ಅನೌನ್ಸರ್‌ಗಳಾಗಿದ್ದ ಮಹಿಳೆಯರನ್ನು ನೌಕರಿಯಿಂದ ತೆಗೆದು ಹಾಕಲಾಯಿತು. ಜಾಹೀರಾತುಗಳಲ್ಲಿ ಮಹಿಳೆಯರ ಚಿತ್ರ ಬಳಸಬಾರದೆಂದು ಆದೇಶ ಹೊರಡಿಸಲಾಯಿತು. ಚಿತ್ರಮಂದಿರಗಳಿಗೆ ಮಹಿಳೆಯರು ಹೋಗುವಂತಿಲ್ಲ, ಸಂಗೀತ ಕೇಳುವಂತಿಲ್ಲ, ಬುರ್ಖಾ ಧರಿಸದೆ ಹೊರಗೆ ಬರುವಂತಿಲ್ಲ ಎಂದೆಲ್ಲಾ ಕಾನೂನು ರೂಪಿಸಲಾಯಿತು.ಸರ್ಕಾರ ತಮ್ಮೆದುರು ಮಂಡಿಯೂರುತ್ತಿದೆ ಎಂಬುದು ಗೊತ್ತಾದ ಮೇಲೆ ಉಗ್ರಗಾಮಿ ನಾಯಕರ ಉತ್ಸಾಹ ಮತ್ತಷ್ಟು ಹೆಚ್ಚಿತ್ತು. ಇದೇ ವೇಳೆಗೆ ತೈಲ ಮಾಫಿಯಾದ ಕೆಲವು ಮುಖಂಡರು ಉಗ್ರರಿಗೆ ಕೋಟ್ಯಂತರ ರುಪಾಯಿಗಳನ್ನು ಭಕ್ಷೀಸ್ ಎಂದು ಕೊಟ್ಟು, ಜಗತ್ತಿನ ಎಲ್ಲೆಡೆಯೂ ಧರ್ಮ ಯುದ್ಧ ನಡೆಸುವಂತೆ ಕರೆ ನೀಡಿದರು. ಈ ಬೆಳವಣಿಗೆಗಳನ್ನು ಕಂಡು ಬೆಚ್ಚಿದ ಸರ್ಕಾರ, ಜುಹೇಮನ್ ಎಂಬ ಉಗ್ರಗಾಮಿ ನಾಯಕನ ನೆನಪೇ ಇಲ್ಲದಂತೆ ಮಾಡಲು ಮುಂದಾಯಿತು. ಪರಿಣಾಮವಾಗಿ, ಜುಹೇಮನ್‌ನ ಬಗ್ಗೆ ಪ್ರಕಟವಾಗಿದ್ದ ಎಲ್ಲ ಪತ್ರಿಕಾ ವರದಿ ಹಾಗೂ ಛಾಯಾಚಿತ್ರಗಳನ್ನು ಸುಟ್ಟು ಹಾಕಲಾಯಿತು. ಆದರೆ, ಇಂಥ ಪ್ರಯತ್ನಗಳಿಂದ ಉಗ್ರಗಾಮಿಗಳ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗಲಿಲ್ಲ.ಇಷ್ಟೆಲ್ಲಾ ಆಗುವ ವೇಳೆಗೆ 10 ವರ್ಷಗಳು ಕಳೆದುಹೋಗಿದ್ದವು. ಈ ಸಂದರ್ಭದಲ್ಲಿ ಜಿಹಾದ್‌ನ ಮಹತ್ವ ವಿವರಿಸುವ ಪುಸ್ತಕ, ಕೆಸೆಟ್ ಹಾಗೂ ಕರಪತ್ರ ವಿತರಿಸುವ ಜವಾಬ್ದಾರಿಯನ್ನು ನನ್ನ ವಾರಿಗೆಯ ಮಕ್ಕಳಿಗೆ ವಹಿಸಲಾಗಿತ್ತು. ಆ ದಿನಗಳಲ್ಲಿ ಬಂಡುಕೋರರ ಶಿಬಿರ ಹಾಗೂ ಸಭೆಗಳಲ್ಲಿ-'ನಾವು ಹೇಳಿದಂತೆ ಕೇಳದವರನ್ನು ಕೊಂದು ಹಾಕೋಣ' ಎಂದು ಹೂಂಕರಿಸುತ್ತಿದ್ದ ಯುವಕನೊಬ್ಬ ಎಲ್ಲರ ಗಮನ ಸೆಳೆದಿದ್ದ. ಹೆಚ್ಚಿನ ಸಂದರ್ಭಗಳಲ್ಲಿ ಅವನ ಮಾತು ಆದೇಶದಂತೆ ಇರುತ್ತಿತ್ತು. ಅದೇ ಫೈನಲ್ ಆಗಿರುತ್ತಿತ್ತು. ಆ ಯುವಕನ ಹೆಸರೇನು ಗೊತ್ತೇ? ಒಸಾಮಾ ಬಿನ್ ಲಾಡೆನ್! ಅವತ್ತಿನ ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ಹೆಣ್ಣು ಮಕ್ಕಳಿಗೆ ಯಾವ ಬಗೆಯ ಸ್ವಾತಂತ್ರ್ಯವೂ ಇರಲಿಲ್ಲ. ಹೆಂಗಸರಿಗೆ ಸ್ವಂತ ವ್ಯಕ್ತಿತ್ವವೇ ಇರಲಿಲ್ಲ. ಇಂಥವರ ತಾಯಿ, ಇಂಥ ವ್ಯಕ್ತಿಯ ಮಗಳು, ಇಂಥ ಆಸಾಮಿಯ ಹೆಂಡತಿ ಎಂದೇ ಅವರನ್ನು ಗುರುತಿಸಲಾಗುತ್ತಿತ್ತು. ಬುರ್ಖಾ ಧರಿಸದೆ ಹೊರಗೆ ಕಾಲಿಡುವಂತಿಲ್ಲ ಎಂಬ ಕಾನೂನೇ ಜಾರಿಯಲ್ಲಿತ್ತು. ಗಂಡಸರಿಂದ ಯಾವುದೇ ತೊಂದರೆ ಆಗದಿರಲಿ ಎಂಬ ಸದಾಶಯದಿಂದಲೇ ಹೀಗೆ ಮಾಡಿದ್ದೇವೆ. ಇದೆಲ್ಲಾ ನಿಮ್ಮ ಒಳ್ಳೆಯದಕ್ಕೇ. ನಾಲ್ಕು ಗೋಡೆಗಳ ಮಧ್ಯೆಯೇ ಇದ್ದರೆ ಮಹಾರಾಣಿಯರಂತೆ ಬದುಕಬಹುದು ಎಂಬ ಹಸಿ ಹಸಿ ಸುಳ್ಳನ್ನು ಹೇಳಿ ಮಹಿಳೆಯರನ್ನೂ ನಂಬಿಸಲಾಗಿತ್ತು. ಅವತ್ತಿನ ಸಂದರ್ಭದಲ್ಲಿ ನನಗೆ ಕೇವಲ 11 ವರ್ಷ. ಆ ವಯಸ್ಸಿನಲ್ಲಿ ಅದೆಷ್ಟರ ಮಟ್ಟಿಗೆ ಬ್ರೈನ್ ವಾಶ್ ಮಾಡಲಾಗಿತ್ತು ಎಂದರೆ, ಉಗ್ರಗಾಮಿ ನಾಯಕರು ಹೇಳುವುದೆಲ್ಲಾ ಹೆಂಡ್ರೆಡ್ ಪರ್ಸೆಂಟ್ ಸರಿ ಎಂದೇ ನಾನೂ ವಾದಿಸುತ್ತಿದ್ದೆ.ಹೀಗಿರುವಾಗಲೇ, ಯಾರೂ ನಿರೀಕ್ಷಿಸಿರದ ಘಟನೆಯೊಂದು 1990ರಲ್ಲಿ ನಡೆದು ಹೋಯಿತು. ಅವತ್ತಿಗೆ, ಮುಸ್ಲಿಂ ಹೆಣ್ಣು ಮಕ್ಕಳು ಕಾರು ಓಡಿಸಬಾರದು. ಕಾರು ಓಡಿಸುವುದು ಇಸ್ಲಾಂ ಆಶಯಕ್ಕೆ ವಿರುದ್ಧ ಎಂದೆಲ್ಲ ನಂಬಿಸಲಾಗಿತ್ತು. ಆ ಆದೇಶವನ್ನು ಧಿಕ್ಕರಿಸಿದ 47 ಮಹಿಳೆಯರು, ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಕಾರು ಚಲಾಯಿಸಿ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿದರು. ಅವರ ಬೇಡಿಕೆಗೆ, ಬಂಡುಕೋರ ಮುಖಂಡರಿಂದ ಉಗ್ರ ವಿರೋಧ ವ್ಯಕ್ತವಾಯಿತು. ಆಗ ಸೌದಿಯ ಸರ್ಕಾರ ಮಾಡಿದ ಮೊದಲ ಕೆಲಸವೆಂದರೆ ಕಾರು ಓಡಿಸಿದ ಎಲ್ಲ ಹೆಂಗಸರನ್ನೂ ನೌಕರಿಯಿಂದ ವಜಾ ಮಾಡಿದ್ದು, ಆಗಲೇ ನಾನು ನೋಟ್‌ಬುಕ್‌ನಲ್ಲಿ ಹೀಗೆ ಬರೆದಿದ್ದೆ: 'ಇಸ್ಲಾಂನ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡ ಎಲ್ಲ 47 ಹೆಂಗಸರನ್ನೂ ನೇಣಿಗೆ ಹಾಕಬೇಕು!'. ಜಿಹಾದ್‌ನ ಅಫೀಮು ನನ್ನ ತಲೆಯೊಳಗೆ ಆ ಮಟ್ಟಕ್ಕೆ ತುಂಬಿಕೊಂಡಿತ್ತು.ಹೀಗೇ ವರ್ಷಗಳು ಕಳೆಯುತ್ತಿದ್ದವು. ಆಗಲೇ, ಅಂದರೆ 1996ರಲ್ಲಿ ಸೌದಿಯಲ್ಲಿದ್ದ ಮುಸ್ಲಿಂ ಉಗ್ರಗಾಮಿಗಳು ಖೋಬಾರ್ ಟವರ್‌ಗೆ ಬಾಂಬ್ ಹಾಕಿದರು. ಪರಿಣಾಮವಾಗಿ, ಅಮೆರಿಕದ 19 ಸೇನಾ ಮುಖ್ಯಸ್ಥರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸತ್ತು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಸುದ್ದಿ ಕೇಳಿದಾಗಲೂ ನನಗೆ ಅಯ್ಯೋ ಅನಿಸಲಿಲ್ಲ. 'ಒಂದು ಕ್ರಾಂತಿ ಆಗಬೇಕು ಅಂದ್ರೆ ಹೀಗೆಲ್ಲಾ ಜನ ಸಾಯಲೇಬೇಕು' ಎಂದು ಗೊಣಗಿಕೊಂಡು ಸುಮ್ಮನಾದೆ.ನನ್ನ ಬದುಕಿಗೆ ನಿಜವಾದ ತಿರುವು ಸಿಕ್ಕಿದ್ದು ಇಸವಿ 2000ದಲ್ಲಿ. ಆ ವರ್ಷ, ಸೌದಿಯಲ್ಲಿ ಇಂಟರ್‌ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಾಯಿತು. ಅದುವರೆಗೆ ಪ್ರಪಂಚವೆಂದರೆ ಸೌದಿ ಅರೇಬಿಯಾ ಮಾತ್ರ ಎಂದುಕೊಂಡಿದ್ದೆ. ಆದರೆ ಇಂಟರ್‌ನೆಟ್‌ನ ಕಾರಣದಿಂದ ಪ್ರಪಂಚ ಎಷ್ಟೊಂದು ವಿಶಾಲವಾಗಿದೆ ಎಂಬುದು ಅರ್ಥವಾಯಿತು. ಅವತ್ತಿನವರೆಗೂ ಕಾಲಿನ ಬೆರಳೂ ಸಹ ಗಂಡಸರಿಗೆ ಕಾಣಿಸಬಾರದು ಎಂಬ ನಿರ್ಧಾರದಿಂದ ಪರದೆಯ ಮಧ್ಯೆಯೇ ಬದುಕಿದ್ದವಳು ನಾನು. ಆದರೆ, ಇಂಟರ್‌ನೆಟ್‌ನ ಕಾರಣದಿಂದ ಹೊಸ ಗೆಳೆಯ -ಗೆಳತಿಯರ ಪರಿಚಯವಾದಂತೆಲ್ಲಾ ನಾನು ಪುರಾತನ ಕಾಲದಲ್ಲಿ ಬದುಕುತ್ತಿದ್ದೇನೆ ಅನ್ನಿಸಿತು. ಅಂತರ್ಜಾಲದ ಗೆಳೆಯರೊಂದಿಗೆ ಚರ್ಚಿಸುತ್ತಾ ಹೋದಂತೆಲ್ಲಾ ವಿವಿಧ ಧರ್ಮ ಹಾಗೂ ಅಲ್ಲಿರುವ ಪದ್ಧತಿಗಳ ಪರಿಚಯವಾಯಿತು. ಅದೇ ವೇಳೆಗೆ, ಧರ್ಮದ ಹೆಸರು ಹೇಳಿ ಮಹಿಳೆಯರಿಗೆ ಹಲವು ಬಗೆಯ ನಿರ್ಬಂಧ ಹೇರುವುದು, ಅವರನ್ನು ನಾಲ್ಕು ಗೋಡೆಯ ಮಧ್ಯೆಯೇ ಉಳಿಸಿ ಬಿಡುವುದು ಅಮಾನವೀಯ ನಡವಳಿಕೆ ಎಂದೂ ಅನ್ನಿಸತೊಡಗಿತು. ನನ್ನ ಮನಸ್ಸಿನ ತೊಳಲಾಟವನ್ನೆಲ್ಲಾ ಯಾರೊಂದಿಗೆ ಹೇಳಿಕೊಳ್ಳುವುದೆಂದು ಗೊತ್ತಾಗದೆ ಒದ್ದಾಡುತ್ತಿದ್ದಾಗಲೇ, ಅಮೆರಿಕದ ಪೆಂಟಗನ್ ಕಟ್ಟಡಕ್ಕೆ ಉಗ್ರಗಾಮಿಗಳು ವಿಮಾನ ನುಗ್ಗಿಸಿದ ಸುದ್ದಿ ಬಂತು.ಘಟನೆ ನಡೆದ ಮರುದಿನವೇ, ಹೌದು. ವಿಮಾನ ನುಗ್ಗಿಸಿದ್ದು ನಾವೇ. ಅದಕ್ಕಾಗಿ ನಮಗೆ ವಿಷಾದವಿಲ್ಲ ಎಂದು ಅಲ್-ಖೈದಾ ಸಂಘಟನೆಯ ಮುಖಂಡರು ಹೇಳಿಕೆ ನೀಡಿದರು. ಈ ಹಿಂದೆ ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕ ಸವಾರಿ ಮಾಡುತ್ತಿತ್ತಲ್ಲ; ಅದಕ್ಕೆ ದೇವರು ನೀಡಿದ ಶಿಕ್ಷೆಯೇ ಪೆಂಟಗನ್ ಕಟ್ಟಡದ ಮೇಲಿನ ದಾಳಿ ಎಂದೆಲ್ಲಾ ಅಲ್-ಖೈದಾದ ಮುಖಂಡರು ಹೇಳಿಕೆ ನೀಡಿದರು. ಐದು ವರ್ಷಗಳ ಹಿಂದೆಯೇ ಹೀಗಾಗಿದ್ದರೆ, ಹೌದು ಹೌದು. ನಮ್ಮ ಉಗ್ರಗಾಮಿ ನಾಯಕರು ಹೇಳಿರೋದು ಸರಿ ಎಂದು ವಾದಿಸುತ್ತಿದ್ದೆನೇನೋ; ಆದರೆ ಅಂತರ್ಜಾಲದ ಮೂಲಕ ಹಲವರೊಂದಿಗೆ ನಡೆಸಿದ್ದ ಚರ್ಚೆ ಹಾಗೂ ಓದಿಕೊಂಡಿದ್ದ ಹಲವು ಸಂಗತಿಗಳ ಕಾರಣದಿಂದ, ಆ ಕ್ಷಣಕ್ಕೆ ಅಲ್‌ಖೈದಾದ ದಾಳಿಯನ್ನು ಸಮರ್ಥಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಈ ಗೊಂದಲದ ಮಧ್ಯೆಯೇ ಟಿ.ವಿ. ಹಾಕಿದೆ. ಆಗ ಕಾಣಿಸಿದ ದೃಶ್ಯ, ನನ್ನೊಳಗೆ ತುಂಬಿಕೊಂಡಿದ್ದ ಕೌರ್ಯವೆಲ್ಲ ಕರಗಿ ಹೋಗುವಂತೆ ಮಾಡಿಬಿಟ್ಟಿತು. ಆ ದೃಶ್ಯ ಬೇರಾವುದೂ ಅಲ್ಲ: ಪೆಂಟಗನ್‌ಗೆ ವಿಮಾನ ನುಗ್ಗಿದ ಸಂದರ್ಭದ್ದು. ಸ್ಫೋಟ ಸಂಭವಿಸಿದ ತಕ್ಷಣ, ಗಾಬರಿಯಿಂದ ಓಡಿ ಬಂದ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಳ್ಳುವ ಆಸೆಯಿಂದ 'ಹೋ' ಎಂದು ಜಿಗಿದು ಬಿಟ್ಟ. ಅದನ್ನು ನೋಡುತ್ತಿದ್ದಂತೆಯೇ ಮೈ ನಡುಗಿತು. ಬಹುಶಃ ಮನೆಯಲ್ಲಿ ಹೆಂಡತಿ, ಮಗು, ವಯಸ್ಸಾದ ಪೋಷಕರು ಇದ್ದರೇನೋ. ಅವರೆಲ್ಲರನ್ನೂ ನೆನಪಿಸಿಕೊಂಡು ಆ ವ್ಯಕ್ತಿ 110 ಅಂತಸ್ತಿನ ಆ ಕಟ್ಟಡದಿಂದ ಜಿಗಿದು ಬಿಟ್ಟನೇನೋ ಅನ್ನಿಸಿತು. ಮರುಗಳಿಗೆಯೇ ಹೀಗೆ ಜಿಗಿದ ವ್ಯಕ್ತಿ ನಮ್ಮ ಅಣ್ಣನೇ ಆಗಿದ್ದರೆ ಎಂಬ ಮತ್ತೊಂದು ಯೋಚನೆಯೂ ಕೈ ಜಗ್ಗಿತು. ಅವತ್ತು ಇಡೀ ರಾತ್ರಿ ನಿದ್ದೆ ಬರಲಿಲ್ಲ. ಕಣ್ಮುಚ್ಚಿದರೆ ಸಾಕು, ಹೋ ಎಂದು ಚೀರುತ್ತಾ ಪೆಂಟಗನ್ ಕಟ್ಟಡದಿಂದ ಜಿಗಿಯುತ್ತಿದ್ದ ವ್ಯಕ್ತಿಯ ಚಿತ್ರವೇ ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಅದುವರೆಗೂ ರೋಲ್ ಮಾಡೆಲ್‌ಗಳಂತೆ ಕಾಣುತ್ತಿದ್ದ ಉಗ್ರಗಾಮಿ ನಾಯಕರು, ಆ ಕ್ಷಣದಿಂದಲೇ ಪರಮ ಕ್ರೂರಿಗಳಂತೆ ಕಾಣತೊಡಗಿದರು. ಈವರೆಗೂ ನಾನು ನಡೆದ ಹಾದಿಯೇ ಬೇರೆ. ನಾಳೆಯಿಂದ ತುಳಿಯಲಿರುವ ಹಾದಿಯೇ ಬೇರೆ ಎಂದು ಆ ಕ್ಷಣದಲ್ಲೇ ನಿರ್ಧರಿಸಿದೆ. ಉಗ್ರಗಾಮಿ ಸಂಘಟನೆಗಳೊಂದಿಗಿನ ನಂಟಿಗೆ ಗುಡ್ ಬೈ ಹೇಳಿದೆ.ಹೀಗೇ ಆರೆಂಟು ತಿಂಗಳು ಕಳೆದವು. ಅದೊಮ್ಮೆ ಆಸ್ಪತ್ರೆಗೆ ಹೋಗಿ ಹಿಂದಿರುಗುವಾಗ, ಬಾಡಿಗೆಗೆ ಕಾರು ಸಿಗಲಿಲ್ಲ. ಅದೇ ವೇಳೆಗೆ ಬೇರೊಂದು ಕಾರ್‌ನಲ್ಲಿ ಬಂದ ಯುವಕರು ನನ್ನನ್ನು ಕಿಡ್‌ನ್ಯಾಪ್ ಮಾಡಿಬಿಟ್ಟರು. ಅವರಿಂದ ಬಹಳ ಕಷ್ಟಪಟ್ಟು ತಪ್ಪಿಸಿಕೊಂಡೆ. ಮರುದಿನ ಗೆಳತಿಯೊಂದಿಗೆ ಮಾತಾಡುತ್ತಾ 'ನಿನ್ನೆ ಹೀಗೆಲ್ಲಾ ಆಯ್ತು. ಈ ದೇಶದಲ್ಲಿ ಹೆಂಗಸರು ಕಾರು ಓಡಿಸಬಾರದು ಎಂಬ ಕಾನೂನು ಇಲ್ಲದೇ ಇದ್ದಿದ್ರೆ ನಾವೂ ನೆಮ್ಮದಿಯಿಂದ ಬದುಕಬಹುದಿತ್ತು' ಅಂದೆ. ಗೆಳತಿ ತಕ್ಷಣವೇ ಹೇಳಿದಳು: 'ಹೆಂಗಸರು ಕಾರು ಓಡಿಸಬಾರದು ಎಂದು ಕಾನೂನಿಲ್ಲ. ಇಲ್ಲಿ ಇರೋದು ಧರ್ಮದ ಮುಖಂಡರು ಹೊರಡಿಸಿರುವ ಫತ್ವಾ. ಅಷ್ಟೇ. ನಮ್ಮ ಹಕ್ಕು ಪಡ್ಕೋಬೇಕು ಅನ್ನುವುದಾದ್ರೆ ಫತ್ವಾಕ್ಕೆ ವಿರುದ್ಧವಾಗಿ ಹೆಜ್ಜೆ ಇಡಬೇಕು. ಈ ವಿಷಯದಲ್ಲಿ ಜನಬೆಂಬಲ ಸಿಗಬಹುದೇನೋ. ಒಮ್ಮೆ ಟ್ರೈ ಮಾಡಿ ನೋಡು...'ನಾನು ತಡ ಮಾಡಲಿಲ್ಲ. ಅಣ್ಣನ ಸಹಾಯದಿಂದ ಕೆಲವೇ ದಿನಗಳಲ್ಲಿ ಡ್ರೈವಿಂಗ್ ಕಲಿತೆ. ನಂತರ, ಸೌದಿಯಲ್ಲಿ ಮುಸ್ಲಿಂ ಹೆಂಗಸರಿಗೆ ಇರುವ ಕಟ್ಟುಪಾಡುಗಳು, ಅವರಿಗೆ ದಕ್ಕಬೇಕಿರುವ ಹಕ್ಕುಗಳು, ಕಾರ್ ಡ್ರೈವಿಂಗ್‌ನಿಂದ ಇರುವ ಅನುಕೂಲಗಳು... ಇತ್ಯಾದಿ ವಿಷಯಗಳನ್ನು ನನ್ನದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿಕೊಂಡೆ. ನಂತರ ಬುರ್ಖಾ ಇಲ್ಲದ ನನ್ನ ಫೋಟೋ, ಹೆಸರು ಹಾಗೂ ಈ ಹಿಂದೆ ಕೆಲಸ ಮಾಡಿದ್ದ ಸಂಘಟನೆ, ಅದರಿಂದ ದೂರವಾಗಲು ಕಾರಣವಾದ ಪ್ರಸಂಗವನ್ನು ವಿವರಿಸಿ ಯು-ಟ್ಯೂಬ್‌ಗೆ ಅಪ್‌ಲೋಡ್ ಮಾಡಿದೆ. 2011 ಜೂನ್ 17ರಂದು ಸೌದಿ ಅರೇಬಿಯಾದ ಬೀದಿಗಳಲ್ಲಿ ಕಾರು ಓಡಿಸುವ ಮೂಲಕ ನಮ್ಮ ಹಕ್ಕುಗಳಿಗಾಗಿ ಒತ್ತಾಯಿಸೋಣ. ಪಂಜರದೊಳಗಿನ ಪಕ್ಷಿಗೂ ತನ್ನಿಷ್ಟದಂತೆ ಹಾರಾಡುವ ಸ್ವಾತಂತ್ರ್ಯವಿದೆ. ಆದರೆ, ಸೌದಿ ಅರೇಬಿಯಾದ ಹೆಣ್ಣು ಮಕ್ಕಳಿಗೆ ಹೆಜ್ಜೆ ಹೆಜ್ಜೆಗೂ ನಿರ್ಬಂಧವೇಕೆ ಎಂದು ಕೇಳೋಣ, ಎಲ್ಲರೂ ಬನ್ನಿ ಎಂದು ಯು-ಟ್ಯೂಬ್‌ನಲ್ಲಿ ಮನವಿ ಮಾಡಿಕೊಂಡಿದ್ದೆ. ಮುಸ್ಲಿಂ ರಾಷ್ಟ್ರವೊಂದರ ಕಟ್ಟುಪಾಡುಗಳನ್ನು ವಿರೋಧಿಸಿ ಹೆಂಗಸೊಬ್ಬಳು ಇಂಟರ್‌ನೆಟ್ ಮೂಲಕ ಹೇಳಿಕೊಂಡದ್ದು ಬಹುಶಃ ಅದೇ ಮೊದಲು. ಜಗತ್ತಿನ ನಾನಾ ಭಾಗದ 8 ಲಕ್ಷಕ್ಕೂ ಹೆಚ್ಚು ಜನ, ನನ್ನ ಮಾತುಗಳನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ಅದುವರೆಗೂ ನಾಲ್ಕು ಗೋಡೆಗಳ ಮಧ್ಯೆಯೇ ಉಳಿದು ಹೋಗಿದ್ದ 300ಕ್ಕೂ ಹೆಚ್ಚು ಮಹಿಳೆಯರು ಸೌದಿಯ ರಾಜಧಾನಿಯ ಮುಖ್ಯ ರಸ್ತೆಗಳಲ್ಲಿ ಕಾರು ಚಲಾಯಿಸಿ ಪುರುಷರ ದಬ್ಬಾಳಿಕೆಗೆ ಧಿಕ್ಕಾರ ಕೂಗಿದರು. ಆನಂತರದಲ್ಲಿ ನನಗೆ ಜೈಲು ಶಿಕ್ಷೆಯಾಯಿತು. ಸಾರ್ವಜನಿಕವಾಗಿ ನೇಣಿಗೆ ಹಾಕಿ ಎಂಬ ಒತ್ತಾಯವೂ ಬಂತು. ಹಿಂದೊಮ್ಮೆ ನಾನು ಹೀರೋಗಳೆಂದು ಆರಾಧಿಸಿದ್ದೆನಲ್ಲ, ಅದೇ ಜನರಿಂದ ಕೊಲೆ ಮಾಡುವ ಬೆದರಿಕೆಯೂ ಬಂತು. ಹೀಗೆ, ಒಂದೊಂದೇ ಬೆದರಿಕೆ ಬಂದಾಗಲೂ ಸೌದಿ ಅರೇಬಿಯಾದ ಸಾವಿರಾರು ಹೆಂಗಸರು ನನ್ನ ಪರವಾಗಿ ದನಿ ಎತ್ತಿದರು. ಮನಲ್ ಷರೀಫ್‌ಗೆ ಏನಾದರೂ ತೊಂದರೆಯಾದರೆ, ನಾವೆಲ್ಲರೂ ಬೀದಿಗೆ ಇಳೀತೇವೆ ಹುಷಾರ್ ಎಂದು ಎಚ್ಚರಿಸಿದರು. ಅವರೆಲ್ಲರ ಬೆಂಬಲದಿಂದಲೇ ನಾನು ಬದುಕುಳಿಯಲು ಸಾಧ್ಯವಾಗಿದೆ.ಆದರೆ, ನನ್ನದೀಗ ನೆಮ್ಮದಿಯ ಬದುಕು ಎಂದು ಖಂಡಿತ ಹೇಳಲಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಕ್ಕೆ ವಿದೇಶಗಳಲ್ಲಿರುವ ನಾಗರೀಕರಿಂದ, ವಿಶೇಷವಾಗಿ ಮುಸ್ಲಿಂ ಯುವತಿಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದಕ್ಕಿವೆ. ಮಹಿಳಾ ಸಮಾವೇಶಗಳಿಗೆ ಆಹ್ವಾನಗಳು ಬರುತ್ತಲೇ ಇವೆ. ಅದೇ ಸಂದರ್ಭದಲ್ಲಿ ಉಗ್ರಗಾಮಿಗಳ ಕಡೆಯಿಂದ ನಿರಂತರವಾಗಿ ಕೊಲೆ ಬೆದರಿಕೆಗಳೂ ಬರುತ್ತಿವೆ. ನನ್ನ ತಂದೆ, ಅಣ್ಣ ಹಾಗೂ ಗಂಡನ ಮೇಲೆ ಹಲ್ಲೆಗಳಾಗಿವೆ. 'ಫೇಸ್ ಬುಕ್‌ನಲ್ಲಿ ನಿಮ್ಮಮ್ಮ ಬುರ್ಖಾ ಇಲ್ಲದ ಫೋಟೋ ಹಾಕಿ ಇಸ್ಲಾಂಗೆ ಅವಮಾನ ಮಾಡಿದ್ದಾಳೆ ಕಣೋ' ಎಂದು ಹಂಗಿಸಿದ್ದ ಸಹಪಾಠಿಗಳು, ನನ್ನ ಮಗನ ಮೇಲೆ ಶಾಲೆಯೊಳಗೇ, ಕೈನ ಮೂಳೆ ಮುರಿದು ಹೋಗುವಂತೆ ಹೊಡೆದಿದ್ದಾರೆ. ಇಂಥ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಯಾರೂ ಬರುವುದಿಲ್ಲ. ಹಾಗಾಗಿ, ಭಯ ಮತ್ತು ಅಭದ್ರತೆಯ ಮಧ್ಯೆಯೇ ದಿನಗಳು ಉರುಳುತ್ತಿವೆ. ಸಂದರ್ಭ ಬಂದರೆ ನಾನು ಬಿದ್ದು ಹೋದೇನು. ಆದರೆ ಅನ್ಯಾಯದ ವಿರುದ್ಧ ಬಾಗಲಾರೆ. ಜನ ಜಾಗೃತಿಗೆ ಕಾರಣಳಾದೆ ಎಂಬ ಹೆಮ್ಮೆ-ತೃಪ್ತಿಯಿದೆ. ನನಗಷ್ಟೇ ಸಾಕು...'


- ಎ.ಆರ್. ಮಣಿಕಾಂತ್armanikanth@gmail.com















ಈ ರಾಧೆಯ ಕೂಗು ಆ ಕೃಷ್ಣನಿಗೆ ಕೇಳಿಸಲೇ ಇಲ್ಲ

ಈ ರಾಧೆಯ ಕೂಗು ಆ ಕೃಷ್ಣನಿಗೆ ಕೇಳಿಸಲೇ ಇಲ್ಲ

ಭಾವತೀರಯಾನ- ಎ.ಆರ್.ಮಣಿಕಾಂತ್


ಎಂಟು ತಿಂಗಳ ಹಿಂದಿನ ಮಾತು. ಬೆಂಗಳೂರಿನ ಹೊರವಲಯದಲ್ಲಿದ್ದ ಆಶ್ರಮಕ್ಕೆ ಭೇಟಿ ಕೊಡಬೇಕಿತ್ತು. ಅಲ್ಲಿಗೆ ಕರೆದೊಯ್ಯುವ ಜವಾಬ್ದಾರಿಯನ್ನು ಗೆಳೆಯ ವಹಿಸಿಕೊಂಡಿದ್ದ. ಬೈಕ್‌ನಲ್ಲಿ ಅಷ್ಟು ದೂರ ಭರ್ರನೆ ಹೋಗುವುದು, ಎದುರಾದವರನ್ನು ನಿಲ್ಲಿಸಿ-'ಆಶ್ರಮಕ್ಕೆ ಇಲ್ಲಿಂದ ಎಷ್ಟು ದೂರ ಆಗುತ್ತೆ?' ಎಂದು ಪ್ರಶ್ನೆ ಹಾಕುವುದೇ ಕೆಲಸವಾಯಿತು. ಹೀಗೆ ವಿಚಾರಿಸಿಕೊಂಡೇ ಕಡೆಗೊಮ್ಮೆ ಆಶ್ರಮದ ಎದುರು ನಿಂತೆವು. ಅದೇ ವೇಳೆಗೆ ಮೃತದೇಹವನ್ನು ಹೊತ್ತಿದ್ದ ಮೆಟಡಾರೊಂದು ಹೊರಬಂತು. ಸಾವಿನ ಮನೆಯಲ್ಲಿ ಕಾಣುವಂಥ ಬಿಕ್ಕಳಿಕೆ, ಅಳು, ಚೀತ್ಕಾರ... ಇಂಥ ಯಾವ ದೃಶ್ಯವೂ ಅಲ್ಲಿ ಕಾಣಲಿಲ್ಲ. ವ್ಯಾನ್‌ನ ಒಳಗೆ ಕೂತಿದ್ದವರೆಲ್ಲ ನಿರ್ಲಿಪ್ತರಂತೆ ಇದ್ದರು.ಒಂದು ಸಾವನ್ನು ಅಷ್ಟೊಂದು ನಿರ್ಲಿಪ್ತರಾಗಿ ಸ್ವೀಕರಿಸಿದರಲ್ಲ; ಅಂಥ ಗಟ್ಟಿ ಮನಸ್ಸು ಹೊಂದಿದವರನ್ನು ಒಮ್ಮೆಯಾದರೂ ಮಾತಾಡಿಸಲೇಬೇಕು ಅನಿಸಿದ್ದೇ ಆಗ. ತಿಂಗಳ ನಂತರ ಅದೇ ಆಶ್ರಮಕ್ಕೆ ಹೋಗಿ, ಅಲ್ಲಿನ ಮುಖ್ಯಸ್ಥರನ್ನು ಕಂಡಾಗ ಅವರು ಹೇಳಿದರು: 'ನಮ್ಮಲ್ಲಿ ಪೇಷೆಂಟ್ಸ್ ಅಂತ ಇರುವವರೆಲ್ಲ ಎಚ್‌ಐವಿ ಪಾಸಿಟಿವ್ ಜನ.  ನಾವು ಯಾವತ್ತು ಬೇಕಾದ್ರೂ ಸತ್ತು ಹೋಗುತ್ತೇವೆ ಅಂತ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂಥದೇ ಅಂದಾಜು ನಮಗೂ ಇರುತ್ತೆ. ತಿಂಗಳಿಗೆ ನಾಲ್ಕೈದು ಸಾವು ನೋಡುವುದು ಅಭ್ಯಾಸ ಆಗಿಬಿಟ್ಟಿದೆ. ಪೇಷೆಂಟ್ಸ್ ಜೊತೆ ರಕ್ತ ಸಂಬಂಧ ಇರೋದಿಲ್ಲ ನೋಡಿ; ಹಾಗಾಗಿ ಗೋಳಾಡಿ ಅಳುವವರ ಸೀನ್ ಇಲ್ಲಿ ಕಾಣಿಸೋದಿಲ್ಲ. ಸಾವಿನ ಸಮ್ಮುಖದಲ್ಲಿ ಇದ್ದಾರಲ್ಲ; ಅವರಿಗೆ, ಇರುವಷ್ಟು ದಿನ ನೆಮ್ಮದಿಯ ಬದುಕು ಕೊಡಬೇಕು ಎಂಬುದಷ್ಟೇ ನಮ್ಮ ಗುರಿ. ಧ್ಯಾನ, ಪೂಜೆ, ಪಾಸಿಟಿವ್ ವಿಷಯಗಳ ಪ್ರವಚನ... ಎಲ್ಲವೂ ಇಲ್ಲಿ ನಡೆಯುತ್ತೆ. ಬಿಡುವು ಸಿಕ್ಕಾಗಲೆಲ್ಲ ಬರ್ತಾ ಇರಿ...'ಆನಂತರದಲ್ಲಿ ಅಲ್ಲಿಗೆ ಹೋಗಿ ಬರುವುದು 'ಕರ್ತವ್ಯ'ದಂತೆ ಆಯಿತು. ಹೀಗೆ ಹೋದಾಗಲೆಲ್ಲ ಆ ಹುಡುಗಿ ಕಣ್ಣಿಗೆ ಬೀಳುತ್ತಿದ್ದಳು. ಹೆಚ್ಚಿನ ಸಂದರ್ಭದಲ್ಲಿ ಆಕೆ ಪೂಜಾಗೃಹದಲ್ಲಿ ಇರುತ್ತಿದ್ದಳು. ಸುತ್ತಲಿನ ಪರಿವೆಯೇ ಇಲ್ಲದಂತೆ ಕೃಷ್ಣನಿಗೆ ಸಂಬಂಧಿಸಿದ ಹಾಡುಗಳನ್ನು ಗುನುಗುತ್ತಾ ಕೂತಿರುತ್ತಿದ್ದಳು. ಅಕಸ್ಮಾತ್ ಎದುರಾದರೂ, ಆಕೆ ನಗುತ್ತಿರಲಿಲ್ಲ. ನಮಸ್ತೆ ಅನ್ನುತ್ತಿರಲಿಲ್ಲ. ಕಾಣಿಸಿಕೊಂಡಷ್ಟೇ ವೇಗವಾಗಿ ಮಾಯವಾಗುತ್ತಿದ್ದಳು. ಬಹುಶಃ ಯಾವುದೋ ಎನ್‌ಜಿಒದಿಂದ ಇಂಟರ್ನ್‌ಶಿಪ್‌ಗೆ ಬಂದವಳಿರಬೇಕು. ಅದಕ್ಕೆ ಇಷ್ಟೊಂದು ಬಿಗುಮಾನ, ಒಣಜಂಭ ಎಂದುಕೊಂಡು, ಆಶ್ರಮದ ಮುಖ್ಯಸ್ಥರಿಗೂ ಅದನ್ನೇ ಹೇಳಿದಾಗ ಅವರೆಂದರು: ' ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಅವಳ ಹೆಸರು ರಾಧಾ. ಆಕೆ ಎನ್‌ಜಿಒ ಕಡೆಯ ಹುಡುಗಿಯಲ್ಲ. ಎಚ್‌ಐವಿ ಪಾಸಿಟಿವ್ ಇರುವವರ ಪೈಕಿ ಅವಳೂ ಒಬ್ಬಳು. ಆಕೆ ಶ್ರೀಕೃಷ್ಣನ ಪರಮಭಕ್ತೆ. ಏನಾಡ್ಮೋಣ ಸಾರ್? ಈ ಅಮಾಯಕಿಯ ವಿಷಯದಲ್ಲಿ ದೇವರು ಕರುಣಮಾಯಿಯಾಗಲಿಲ್ಲ...'ಆಶ್ರಮದ ಮುಖ್ಯಸ್ಥರೇ ಆ ಹುಡುಗಿಯ ಪರ ವಹಿಸಿ ಮಾತಾಡಿದಾಗ, ಅವಳ ಬದುಕಿನ ಕಥೆ ಕೇಳಬೇಕು ಅನ್ನಿಸಿತು. ಮುಖ್ಯಸ್ಥರ ಒತ್ತಾಯದ ಮೇರೆಗೆ ಕಡೆಗೊಂದು ದಿನ ಎದುರು ಕೂತ ರಾಧಾ, ತನ್ನ ಬದುಕಿನ ಕಥೆಯನ್ನು ಹೇಳಲು ಶುರುವಿಟ್ಟಳು. ಅದು ಮುಂದುವರಿದಿದ್ದು ಹೀಗೆ:'ಅಪ್ಪ, ಅಮ್ಮ, ಮಗಳು-ಹೀಗೆ ಮೂರೇ ಜನರಿದ್ದ ಪುಟ್ಟ ಕುಟುಂಬ ನಮ್ಮದು. ವಾಸಕ್ಕೆ ಬಾಡಿಗೆ ಮನೆಯಿತ್ತು. ಅಮ್ಮನಿಗೆ ಹೂಗಿಡಗಳನ್ನು ಬೆಳೆಸುವ ಖಯಾಲಿ. ಎಂಟನೇ ತರಗತಿಗೇ ಓದು ನಿಲ್ಲಿಸಿದ್ದ ಆಕೆಗೆ ಸುಶ್ರಾವ್ಯ ಕಂಠವಿರಲಿಲ್ಲ. ಆದರೂ ಹಾಡುತ್ತಿದ್ದಳು. ಹಾಡು ಮುಗಿಯುತ್ತಿದ್ದಂತೆಯೇ, ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು. ಯಾಕಮ್ಮಾ, ಏನಾಯ್ತಮ್ಮಾ ಎಂದು ಗಾಬರಿಯಿಂದ ಪ್ರಶ್ನಿಸಿದರೆ, ಹಳೆಯದೇನೋ ನೆನಪಾಯ್ತು ಕಂದಾ, ಕಣ್ಣಿಗೆ ಕಸ ಬಿದ್ದು ಬಿಡ್ತು ಮಗಳೇ ಎನ್ನುತ್ತಾ ಮಾತು ಮರೆಸುತ್ತಿದ್ದಳು. ಆನಂತರದಲ್ಲಿ ಗೊತ್ತಾಗಿದ್ದು ಏನೆಂದರೆ, ಅಪ್ಪ-ಅಮ್ಮನ ಮಧ್ಯೆ ಮಧುರ ಬಾಂಧವ್ಯವಿರಲಿಲ್ಲ. ಹೊಂದಾಣಿಕೆಯೂ ಇರಲಿಲ್ಲ. ಅವರ ಮಧ್ಯೆ ಮೇಲಿಂದ ಮೇಲೆ ಜಗಳಗಳಾಗುತ್ತಿದ್ದವು. ವಾಸ್ತವ ಹೀಗಿದ್ದರೂ, ಅವರ ಪ್ರೀತಿಯ ಫಲವಾಗಿ ನಾನು ಹುಟ್ಟಿಬಿಟ್ಟಿದ್ದೆ. ಅಮ್ಮ, ತನ್ನ ಹಣೆ ಬರಹವನ್ನು ಹಳಿದುಕೊಂಡು ಬಿಕ್ಕಳಿಸುತ್ತಿದ್ದಳೋ ಅಥವಾ ನನ್ನ ಭವಿಷ್ಯವನ್ನು ನೆನಪಿಸಿಕೊಂಡು ಅಳುತ್ತಿದ್ದಳೋ ಅರ್ಥವಾಗುತ್ತಿರಲಿಲ್ಲ.ಅಮ್ಮನಿಗೆ ಹೂಗಿಡಗಳನ್ನು ಬೆಳೆಸುವ ಖಯಾಲಿಯಿತ್ತು ಅಂದೆನಲ್ಲವೇ? ಆ ನೆಪದಲ್ಲಿ ನನಗೊಂದು ವಿಸ್ಮಯಲೋಕದ ಪರಿಚಯ ಮಾಡಿಕೊಟ್ಟಳು ಅಮ್ಮ. ಮನೆಯ ಮುಂದಿನ ಅಂಗಳದಲ್ಲಿ ಮಲ್ಲಿಗೆ, ಕನಕಾಂಬರ, ಸಂಪಿಗೆ, ದಾಸವಾಳ, ಬೆಟ್ಟತಾವರೆ, ಪಾರಿಜಾತ, ದೇವಕಣಗಲೆ...ಹೀಗೆ ಎಲ್ಲ ಹೂಗಳೂ ಇದ್ದವು. ಅಮ್ಮ ಅವುಗಳನ್ನು ಬಿಡಿಸುತ್ತಿರಲಿಲ್ಲ. ಗಿಡದಲ್ಲಿಯೇ ಉಳಿಸುತ್ತಿದ್ದಳು. ಎಲ್ಲಾ ಹೂಗಳ ಸುವಾಸನೆಯೂ ಆ ಭಗವಂತನನ್ನು ಸೇರಲಿ ಎನ್ನುತ್ತಿದ್ದಳು. ಸಮಯ ಸಿಕ್ಕಾಗಲೆಲ್ಲ ಹೂ ಗಿಡಗಳೊಂದಿಗೆ ಮಾತಾಡುತ್ತಿದ್ದಳು. ನಾವು ಹೇಳುವುದನ್ನೆಲ್ಲ ಗಿಡಗಳು ಮೌನವಾಗಿ ಕೇಳಿಸಿಕೊಳ್ತವೆ. ನಂತರ ತಮ್ಮದೇ ರೀತಿಯಲ್ಲಿ ಉತ್ತರ ಹೇಳುತ್ತವೆ ಅನ್ನುತ್ತಿದ್ದಳು. ನೀನೂ ಮಾತಾಡು ಮಗಳೇ ಎಂದು ಹುರಿದುಂಬಿಸುತ್ತಿದ್ದಳು. ಇಡೀ ದಿನ ನಾವು ಹೂ ಗಿಡಗಳ ಧ್ಯಾನದಲ್ಲೇ ಖುಷಿಪಡುತ್ತಿದ್ದೆವು.ರಾತ್ರಿಯಾದರೆ ಸಾಕು; ಮನೆ ರಣರಂಗವಾಗುತ್ತಿತ್ತು. ಅಪ್ಪ, ದಿನವೂ ಕುಡಿದು ಬರುತ್ತಿದ್ದ. ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಮ್ಮನಿಗೆ, ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ಫುಟ್‌ಬಾಲ್ ಥರಾ ಒದೆಯುತ್ತಿದ್ದ. ಬಿಡಿಸಿಕೊಳ್ಳಲು ಹೋದರೆ, ನನಗೂ ಏಟು ಬೀಳುತ್ತಿದ್ದವು. ನೆರೆಹೊರೆಯವರು ಐದಾರು ಬಾರಿ ಬುದ್ಧಿ ಹೇಳಿದರು. ಆನಂತರ, ಇವ್ನು ಸರಿ ಹೋಗುವ ಆಸಾಮಿಯಲ್ಲ ಅಂದುಕೊಂಡು ಸುಮ್ಮನಾದರು. ಮುಂದೆ ಏನಾಯಿತೆಂದರೆ, ಅದೊಂದು ರಾತ್ರಿ ಕಂಠಪೂರ್ತಿ ಕುಡಿದು ಬಂದ ಅಪ್ಪ, ಹೊಡೆಯುವ ಭರದಲ್ಲಿ ಅಮ್ಮನನ್ನು ಗೋಡೆಯ ಕಡೆಗೆ ಬಲವಾಗಿ ನೂಕಿದ. ಗೋಡೆಗೆ ಡಿಕ್ಕಿ ಹೊಡೆದ ಅಮ್ಮ, ನಂತರ ಅಂಗಾತ ಬಿದ್ದು ಹೋದಳು. ಆನಂತರ ಆಕೆ ಚೀರಲಿಲ್ಲ. ಬಿಕ್ಕಳಿಸಲಿಲ್ಲ. ತಡವರಿಸಿಕೊಂಡು ಎದ್ದು ನಿಲ್ಲಲಿಲ್ಲ. ಆಕೆ ಸತ್ತು ಹೋಗಿದ್ದಳು.ಹೀಗೆಲ್ಲಾ ಆದಾಗ ನನಗಿನ್ನೂ ಹನ್ನೆರಡು ವರ್ಷ. ಕ್ರೌರ್ಯ ಮತ್ತು ಸಾವನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲ; ಆ ಶಾಕ್‌ನಿಂದ ಮಾತುಗಳು ಮರೆತು ಹೋಗಿದ್ದವು. ಅಮ್ಮನ ನೆನಪಾದಾಗಲೆಲ್ಲಾ ಬವಳಿ ಬಂದು ಬೀಳುತ್ತಿದ್ದೆ. ಈ ಮಧ್ಯೆಯೇ ಅಪ್ಪ ಬೃಹನ್ನಾಟಕವನ್ನಾಡಿದ್ದ. ಪೊಲೀಸರನ್ನು ಬುಟ್ಟಿಗೆ ಹಾಕಿಕೊಂಡು ಅರೆಸ್ಟ್ ಆಗುವುದನ್ನು ತಪ್ಪಿಸಿಕೊಂಡಿದ್ದ. ಅಮ್ಮ ತೀರಿಕೊಂಡು ಎಂಟು ತಿಂಗಳು ಕಳೆದಿರಲಿಲ್ಲ: ಆಗಲೇ ಮತ್ತೊಂದು ಮದುವೆಯಾದ.ಮಲತಾಯಿಯ ಕಾಟವನ್ನು ವಿವರಿಸಬೇಕಿಲ್ಲ ತಾನೆ? ಅಮ್ಮನನ್ನು ಕಳೆದುಕೊಂಡ ಮೇಲೆ ಪರದೇಸಿಯಂತಾದೆ. ಓದುವ ಮನಸ್ಸಾಗಲಿಲ್ಲ. ಕುಡುಕ ತಂದೆ, ಕೆಟ್ಟ ಮಲತಾಯಿಯಿಂದ ದೂರ ಹೋಗಿ ಬಿಡಬೇಕು ಅನಿಸುತ್ತಿತ್ತು. ನಾನು ಏಕಾಂಗಿ ಅನ್ನಿಸಿದಾಗಲೆಲ್ಲ ಎದ್ದು ಬಂದು ಹೂಗಿಡಗಳೊಂದಿಗೆ ಮಾತಾಡುತ್ತಿದ್ದೆ. ಬಿಕ್ಕಳಿಸುತ್ತಿದ್ದೆ. ಹೂಗಿಡದ ಮಧ್ಯೆಯೇ ಅಮ್ಮನ ಮುಖವೂ ಕಂಡಂತಾಗಿ ಎಲ್ಲವನ್ನೂ ಮರೆತು 'ಅಮ್ಮಾ' ಎಂದು ಚೀರುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಮಲತಾಯಿ ಸೈಲೆಂಟಾಗಿ ನಡೆದು ಬಂದಳು. ಹೂ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿ ಒಳಗೆ ಹೋಗಿಬಿಟ್ಟಳು.ಇವರೆಲ್ಲರಿಂದ ತಪ್ಪಿಸಿಕೊಂಡು ಬಹಳ ದೂರದ ಜಾಗಕ್ಕೆ ಹೋಗಿ ಬಿಡಬೇಕು. ಅಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದೆಲ್ಲ ನಾನು ಕನಸು ಕಾಣುತ್ತಿದ್ದಾಗಲೇ ಚಿಗುರು ಮೀಸೆಯ ತರುಣನೊಬ್ಬ ಪರಿಚಯವಾದ. ಅವನ ಹೆಸರು ವಸಂತ್. ಆತ ತುಂಬ ಸೌಜನ್ಯದಿಂದ ಮಾತಾಡಿಸಿದ. ತನ್ನ ಕುರಿತೂ ಹೇಳಿಕೊಂಡ. ಅವನ ಮಾತುಗಳಲ್ಲಿ ಎಂಥದೋ ಆಕರ್ಷಣೆಯಿತ್ತು. ಕುಡುಕ ಅಪ್ಪನಿಂದ, ಕ್ರೂರಿ ಚಿಕ್ಕಮ್ಮನಿಂದ ಪಾರಾಗಬೇಕು ಎಂಬ ಆಸೆಯಿತ್ತಲ್ಲ; ಅದನ್ನೆಲ್ಲ ಅವನೊಂದಿಗೆ ಹೇಳಿಕೊಂಡೆ. ಸಂಕಟ ತಡೆಯಲಾರದೆ ಬಿಕ್ಕಳಿಸಿದೆ. ಆತ ಧೈರ್ಯ ಹೇಳಿದ. ಸಮಾಧಾನ ಮಾಡಿದ. ತನ್ನೂರಿಗೆ ಕರೆದೊಯ್ದು ಯಾವುದಾದರೂ ಕೆಲಸಕ್ಕೆ ಸೇರಿಸುವುದಾಗಿ ಆಶ್ವಾಸನೆ ನೀಡಿದ. ಮೊದಲು ಕೆಲಸಕ್ಕೆ ಸೇರಿಕೋ. ಸಂಬಳ ದೊರೆತ ಮೇಲೆ ನಿಮ್ಮ ಮನೇಲಿ ವಿಷಯ ತಿಳಿಸು ಎಂದ. ನಾನು ಅದೆಂಥ ಪೆದ್ದಿಯಾಗಿದ್ದೆ ಅಂದರೆ ಅವನು ಹೇಳಿದ್ದನ್ನೆಲ್ಲ ನಂಬಿದೆ. ಕಡೆಗೊಂದು ದಿನ ಪುಟ್ಟ ಲಗೇಜಿನೊಂದಿಗೆ ಅವನೊಂದಿಗೆ ಬಸ್ ಹತ್ತಿ ಬಿಟ್ಟೆ. ಪ್ರತಿ ಅರ್ಧ ಗಂಟೆಗೊಮ್ಮೆ-'ನೀನು ನಂಗೆ ಮೋಸ ಮಾಡಲ್ಲ ತಾನೆ? ನನ್ನ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಲ್ಲ ತಾನೆ ಎಂದು ಪ್ರಶ್ನೆ ಹಾಕಿದೆ. ಎಲ್ಲ ದೇವರುಗಳ ಮೇಲೂ ಆಣೆ-ಪ್ರಮಾಣ ಮಾಡಿಸಿದೆ. ಪ್ರತಿ ಬಾರಿಯೂ ಆತ ನಾನು ಹೇಳಿದಂತೆಯೇ ಕೇಳಿದ. ನನ್ನ ಸಡಗರಕ್ಕೆ ಪಾರವೇ ಇರಲಿಲ್ಲ. ನನ್ನ ಬದುಕಿಗೂ ವಸಂತಕಾಲ ಬಂತೆಂದು ನಿಂತಲ್ಲೇ ನಲಿದಾಡಿದೆ.ನನ್ನ ಕನಸಿನ ಬಲೂನು ಒಡೆದು ಚೂರಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಗೆಳೆಯನೊಂದಿಗೆ ನಾನು ತಲುಪಿಕೊಂಡದ್ದು ಮುಂಬಯಿಯನ್ನು. ನಾಲ್ಕೈದು ದಿನ ಒಂದು ಹೋಟೆಲ್‌ನಲ್ಲಿ ತಂಗಿದ್ದೆವಲ್ಲ, ಆಗಲೂ ಅವನು ಕೆಟ್ಟದಾಗಿ ವರ್ತಿಸಲಿಲ್ಲ. ಐದನೇ ದಿನ-'ನಾಳೆಯಿಂದ ಕೆಲಸಕ್ಕೆ ಹೋಗು. ನಾಲ್ಕು ದಿನ ಟ್ರೈನಿಂಗ್. ತಿಂಗಳ ಕೊನೆಗೆ ಸಂಬಳ. ಆಗ ಮತ್ತೆ ಭೇಟಿಯಾಗೋಣ' ಎಂದ. ನನ್ನನ್ನು ಕರೆದೊಯ್ಯಲು ಹೆಂಗಸೊಬ್ಬಳು ಬಂದಿದ್ದಳು. ಮೊದಲು ನಾಲ್ಕು ದಿನ ಏನೇನೂ ಕೆಲಸ ಹೇಳಲಿಲ್ಲ. ಐದನೇ ದಿನ ಎದೆಯೊಡೆಯುವಂಥ ವಿಷಯ ತಿಳಿಯಿತು. ಹೊಸ ಬದುಕಿಗೆ ದಾರಿ ತೋರುವುದಾಗಿ ಹೇಳಿದ್ದ ಗೆಳೆಯ ಕೆಲವೇ ಸಾವಿರ ರೂಪಾಯಿಗೆ ನನ್ನನ್ನು ಮಾರಿಬಿಟ್ಟಿದ್ದ! ನಾನು ವೇಶ್ಯಾವಾಟಿಕೆಯ ಪಾಲಾಗಿದ್ದೆ. ಈ ವಿಷಯ ತಿಳಿದಾಕ್ಷಣ ನಾನು ಪ್ರತಿಭಟಿಸಿದೆ. ಗೊಳೋ ಎಂದು ಅತ್ತೆ. ನನ್ನನ್ನು ಖರೀದಿಸಿದ್ದಳಲ್ಲ, ಆಕೆಯ ಕಾಲು ಹಿಡಿದೆ. ನನ್ನನ್ನು ಬಿಟ್ಟು ಬಿಡಿ ಎಂದು ಪ್ರಾರ್ಥಿಸಿದೆ. ನನ್ನ ಮಾತು ಕೇಳಿಸಲೇ ಇಲ್ಲ ಎಂಬಂತೆ ಆಕೆ ನಿಷ್ಠುರವಾಗಿ ಹೇಳಿದಳು: 'ನಿನ್ನಂಥವರು ಇಲ್ಲಿ ನೂರಾರು ಜನ ಇದ್ದಾರೆ. ಎಲ್ಲರನ್ನೂ ಪರಿಚಯ ಮಾಡ್ಕೋ. ನಾವು ಹೇಳಿದಂತೆ ಕೇಳಿಕೊಂಡು ಬದುಕೋದನ್ನ ಕಲಿತುಕೋ...'ಉಳಿದವರಂತೆ ಬದುಕಲು ನಾನು ತಯಾರಿರಲಿಲ್ಲ. ತಿರುಗಿ ಬಿದ್ದೆ. ಆಗ, ಒಂದು ಕತ್ತಲು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿದರು. ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಎರಡು ದಿನ ಕುಡಿಯಲು ನೀರನ್ನೂ ಕೊಡಲಿಲ್ಲ. ಮೂರನೇ ದಿನ, ಊಟ ಕೊಡುವ ನೆಪದಲ್ಲಿ ಮಧ್ಯವಯಸ್ಕನೊಬ್ಬ ಬಂದ. ಅವನನ್ನು ಗಟ್ಟಿಯಾಗಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದೆ. ಆಗಲೇ ಅನಾಹುತ ನಡೆದು ಹೋಯಿತು. ಆ ದುಷ್ಟ, ನನ್ನ ಸಂಕಟವನ್ನು ಲೆಕ್ಕಿಸದೆ ಹಿಂಸ್ರಪಶುವಿನಂತೆ ನನ್ನ ಮೇಲೆ ಏರಿ ಬಂದ. ನಂತರದ ನಾಲ್ಕೈದು ವರ್ಷ ಕತ್ತಲೆಯ ಮಧ್ಯೆಯೇ ನಾನು ಕಳೆದು ಹೋದೆ. ಪ್ರತಿ ಬಾರಿಯೂ ಒಂದೇ ಒಂದು ಸಮಾಧಾನದ ಮಾತಿಗಾಗಿ, ತಲೆ ನೇವರಿಸುವ ಸ್ಪರ್ಶಕ್ಕಾಗಿ ಹಂಬಲಿಸುತ್ತಿದ್ದೆ. ಆದರೆ ಯಾರೊಬ್ಬರೂ ನನ್ನ ಕಂಬನಿ ಒರೆಸಲಿಲ್ಲ. ನಿನ್ನ ಕಥೆ ಹೇಳು ಎನ್ನಲಿಲ್ಲ. ಕ್ಷೇಮ ಸಮಾಚಾರ ವಿಚಾರಿಸಲಿಲ್ಲ. ಊಟ ಆಯ್ತಾ ಎಂದು ಕೇಳಲಿಲ್ಲ. ಬದಲಾಗಿ, ಥೇಟ್ ಕಾಡು ಪ್ರಾಣಿಗಳಂತೆಯೇ ನುಗ್ಗಿ ಬಂದರು. ನನ್ನ ಮೈ ಮತ್ತು ಮನಸ್ಸಿನ ತುಂಬಾ ಎಂದೆಂದೂ ವಾಸಿಯಾಗದಂಥ ಗಾಯ ಮಾಡಿ ಹೋಗಿ ಬಿಟ್ಟರು. ಈ ಸಂದರ್ಭದಲ್ಲೆಲ್ಲ, ಕಳೆದು ಹೋದ ಅಮ್ಮನನ್ನು, ಕ್ರೂರಿ ತಂದೆಯನ್ನು ನಿಷ್ಕರುಣಿ ದೇವರನ್ನು ನೆನೆದು ಅಳುತ್ತಿದ್ದೆ. ಹೀಗೆ ಅತ್ತೂ ಅತ್ತೂ ಕಣ್ಣೀರೂ ಬತ್ತಿ ಹೋದವು.ಕಡೆಗೊಂದು ದಿನ ಪೊಲೀಸ್ ರೇಡ್ ನಡೆಯಿತು. ನರಕದಿಂದ ಕಡೆಗೂ ಮುಕ್ತಿ ದೊರೆಯಿತು. ವೇಶ್ಯಾವಾಟಿಕೆಯಲ್ಲಿದ್ದ ಎಲ್ಲ ಹುಡುಗಿಯರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ನಮಗೆಲ್ಲಾ ಏಡ್ಸ್ ಇದೆ. ಸಾವು ಬೆನ್ನ ಹಿಂದೆಯೇ ಅಡಗಿ ನಿಂತಿದೆ ಎಂಬ ಸತ್ಯ ಅವತ್ತೇ ತಿಳಿಯಿತು. ನಂಬ್ತೀರಾ? ಹೀಗೆಲ್ಲಾ ಆಗಿ ಹೋದಾಗ ನನಗೆ ಬರೀ 23 ವರ್ಷವಾಗಿತ್ತು! ಮುಂದೆ ಯಾರೋ ಪುಣ್ಯಾತ್ಮರು ಬೆಂಗಳೂರಿನ ದಾರಿ ತೋರಿದರು. ಈ ಆಶ್ರಮದಲ್ಲಿ ಕಣ್ಣೀರು ಒರೆಸುವ, ಸಮಾಧಾನ ಹೇಳುವ ಜನ ಕಾಣಿಸಿದರು. ಇರುವಷ್ಟು ದಿನ ಖುಷಿಯಿಂದಲೇ ಬಾಳಬೇಕು ಎಂಬ ಮಹದಾಸೆಯಿಂದಲೇ ಬದುಕ್ತಾ ಇದೀನಿ. ಸಾವಿನ ಸಮ್ಮುಖದಲ್ಲಿ ನಿಂತಿರುವಾಗ ನನ್ನ ಪ್ರಾರ್ಥನೆ ಏನು ಗೊತ್ತಾ? ಈಗ, ಒಂದೇ ಒಂದು ದಿನದ ಮಟ್ಟಿಗೆ ಕಾಲವೆಂಬುದು ಸರ್ರನೆ ಹಿಂದಕ್ಕೆ ಹೋಗಿ ಬಿಡಬೇಕು. ಸತ್ತು ಹೋಗಿರುವ ನನ್ನಮ್ಮ, ಐದೇ ಐದು ನಿಮಿಷ ಮಾತಿಗೆ ಸಿಕ್ಕಬೇಕು. ಆಕೆಯ ಹಾಡು ಕೇಳುತ್ತಾ ಹೂ ಗಿಡಗಳ ಮಧ್ಯೆ ನಾನು ಕುಣಿದಾಡಬೇಕು. ಅಪ್ಪ ಅನ್ನಿಸಿಕೊಂಡಾತ ಎದುರಾಗಿ, ಕ್ಷಮಿಸು ಮಗಳೇ ಎನ್ನುತ್ತಾ ಕಣ್ಣೀರು ಹಾಕಬೇಕು. ನನ್ನ ಗೆಳೆಯ, ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸುತ್ತಾ ತಲೆ ಬಗ್ಗಿಸಬೇಕು. ಎಲ್ಲ ಸೌಭಾಗ್ಯವೂ ಮರಳಿ ದೊರಕಿದ ಸಂಭ್ರಮದಲ್ಲಿ ಹೂಗಳ ಮಧ್ಯೆ ಜಿಗಿದಾಡುತ್ತಾ ನಾನು ಹೊಸ ಬದುಕು ಆರಂಭಿಸಬೇಕು. ಹೌದು ಸರ್, ನನಗೆ ಬದುಕಬೇಕೆಂಬ ಆಸೆ ಇದೆ. ಈಗಿನ್ನೂ 26 ವರ್ಷ ನಂಗೆ. ಈ ಚಿಕ್ಕ ವಯಸ್ಸಿಗೇ ಸಾಯೋಕೆ ಯಾರಿಗೆ ತಾನೆ ಮನಸ್ಸು ಬರ್ತದೆ ಸಾರ್? ನನ್ನದು ಒಂದೇ ಪ್ರಶ್ನೆ: ದಯಾಮಯಿ, ದುಷ್ಟ ಶಿಕ್ಷಕ ಎಂದೆಲ್ಲಾ ಕರೆಸಿಕೊಳ್ಳುವ ದೇವರು, ನನ್ನಂಥ ಅಮಾಯಕಿಗೆ ಯಾಕಿಂಥ ಕಷ್ಟ ಕೊಟ್ಟ? ನನ್ನ ಮೈ ಮೇಲೆ ಏರಿ ಬಂದ ಕ್ರೂರಿಗಳನ್ನು ಯಾಕೆ ಸುಮ್ಮನೆ ಬಿಟ್ಟ?'ಈ ಪ್ರಶ್ನೆಯೊಂದಿಗೆ ತನ್ನ ಬದುಕಿನ ಕಥೆಗೆ ಫುಲ್‌ಸ್ಟಾಪ್ ಹಾಕಿ, ದೇವರ ಕೋಣೆಗೆ ಹೋಗಿ ಬಿಟ್ಟಳು ರಾಧೆ. ಈ ಅಮಾಯಕಿಗೆ ಎಲ್ಲಿಯಾದರೂ ಕೆಲಸ ಕೊಡಿಸಿ, 10 ವರ್ಷಗಳ ಮಟ್ಟಿಗಾದರೂ ಅವಳ ಸಾವನ್ನು ಮುಂದೂಡುವಂಥ ಚಿಕಿತ್ಸೆ ಕೊಡಿಸಬೇಕು ಎಂದೆಲ್ಲ ಆಶ್ರಮದ ಮುಖ್ಯಸ್ಥರು ಆಸೆಪಟ್ಟರು. ಅದನ್ನೆಲ್ಲ ರಾಧೆಯ ಮುಂದೆಯೂ ಹೇಳಿದರು. ಮುಂದಿನ 10 ವರ್ಷಗಳವರೆಗೂ ಬದುಕುತ್ತೇನೆ ಎಂಬ ಮಾತು ಕೇಳಿದಾಕ್ಷಣ ಆ ಹುಡುಗಿ ಓಡೋಡಿ ಹೋಗಿ ಕೃಷ್ಣನ ಸಮ್ಮುಖದಲ್ಲಿ ಕೂತು ಮೈ ಮರೆತು ಹಾಡಿದಳಂತೆ...----ಎಲ್ಲವೂ ಸರಿ ಹೋಯಿತು. ರಾಧೆಯ ಬದುಕಲ್ಲಿ ವಸಂತಾಗಮನವಾಯಿತು ಎಂದುಕೊಳ್ಳುತ್ತಿದ್ದಾಗಲೇ, ವಾರದ ಹಿಂದೆ ಫೋನ್ ಮಾಡಿದ ಆಶ್ರಮದ ಮುಖ್ಯಸ್ಥರು ಹೇಳಿದರು: 'ಇದ್ದಕ್ಕಿದ್ದಂತೆ ಜ್ವರ ಬಂತು. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ವಿ. ಮೂರನೇ ದಿನದ ಹೊತ್ತಿಗೆ ಮೈ ತಣ್ಣಗಾಯ್ತು. ರಾಧೆ ತೀರಿಕೊಂಡಳು!' ಆಶ್ರಮದ ಮುಖ್ಯಸ್ಥರ ಮಾತುಗಳನ್ನು ಕೇಳಿದ ನಂತರ ಅನಿಸಿದ್ದು:ಕೆಲವರ ವಿಷಯದಲ್ಲಿ ದೇವರು ಯಾಕೆ ಅಷ್ಟೊಂದು ಕ್ರೂರಿಯಾಗುತ್ತಾನೆ?

- ಎ.ಆರ್. ಮಣಿಕಾಂತ್armanikanth@gmail.com



















ಕೈಗಳೇ 'ಕಾಲುಗಳಾಗಿ' ಕುಣಿಯುತ್ತವೆ, ಕುಣಿಸುತ್ತವೆ!

ಕೈಗಳೇ 'ಕಾಲುಗಳಾಗಿ' ಕುಣಿಯುತ್ತವೆ, ಕುಣಿಸುತ್ತವೆ!

ಭಾವತೀರಯಾನ- ಎ.ಆರ್.ಮಣಿಕಾಂತ್


ಈತನ ಎರಡೂ ಕಾಲುಗಳು ಬಿದಿರು ಕಡ್ಡಿಯ ಗಾತ್ರಕ್ಕಿವೆ. ತಿರುಚಿಕೊಂಡಿವೆ. ಸ್ವಾಧೀನ ಕಳೆದುಕೊಂಡಿವೆ. ಇನ್ನೂ ವಿವರಿಸಿ ಹೇಳುವುದಾದರೆ, ಈತನ ದೇಹದಲ್ಲಿ ಸೊಂಟದಿಂದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ತುತ್ತಾಗಿದೆ. ಹಾಗಾಗಿ ಈತ ಉಳಿದೆಲ್ಲರಂತೆ ಎದ್ದು ನಿಲ್ಲಲಾರ. ಓಡಲಾರ. ಜಿಗಿಯಲಾರ. ಇಷ್ಟಾದರೂ, ಅದೇ ವ್ಯಕ್ತಿ ಇವತ್ತು ಡ್ಯಾನ್ಸ್ ಕಿಂಗ್ ಅನ್ನಿಸಿಕೊಂಡಿದ್ದಾನೆ. ಒಂದೆರಡಲ್ಲ, ಸಾವಿರಕ್ಕೂ ಹೆಚ್ಚು ಸ್ಟೇಜ್ ಶೋ ನೀಡಿದ್ದಾನೆ. ಈತನ ಬೊಂಬಾಟ್ ಡ್ಯಾನ್ಸ್ ಕಂಡು ಬಾಲಿವುಡ್‌ನ ಒಂದು ಕಾಲದ ಡಿಸ್ಕೋ ಕಿಂಗ್ ಮಿಥುನ್ ಚಕ್ರವರ್ತಿಯೇ ಬೆರಗಾಗಿದ್ದಾರೆ. ಶಹಬ್ಬಾಶ್ ಎಂದಿದ್ದಾರೆ. ಭಾವುಕರಾಗಿ ಬಿಕ್ಕಳಿಸಿದ್ದಾರೆ. 'ಈತನ ಸಾಧನೆಯ ಮುಂದೆ ನಾನಾಗಲಿ, ತಮಿಳು ಚಿತ್ರರಂಗದ ಪ್ರಭುದೇವ ಆಗಲಿ ನಿಲ್ಲುವುದಕ್ಕೂ ಸಾಧ್ಯವಿಲ್ಲ. ಈತನೇ ದೇಶದ ನಿಜವಾದ ಡ್ಯಾನ್ಸ್ ಕಿಂಗ್‌' ಎಂದು ಮೆಚ್ಚುಗೆಯ ಮಾತಾಡಿದ್ದಾರೆ. ಅಂದ ಹಾಗೆ, ಮಿಥುನ್ ಚಕ್ರವರ್ತಿಯಿಂದಲೇ ಡ್ಯಾನ್ಸ್ ಕಿಂಗ್ ಅನ್ನಿಸಿಕೊಂಡ ಈತನ ಹೆಸರು ಕಮಲೇಶ್ ಪಟೇಲ್.ಎಲ್ಲರಿಗೂ ಗೊತ್ತಿರುವಂತೆ, ಡ್ಯಾನ್ಸ್ ಮಾಡಬೇಕೆಂದರೆ ಕಾಲುಗಳು ಗಟ್ಟಿಯಾಗಿರಬೇಕು. ವಾಸ್ತವ ಹೀಗಿರುವಾಗ, ಸ್ವಾಧೀನದಲ್ಲಿಲ್ಲದ ಕಾಲುಗಳಿಂದ ಈ ಕಮಲೇಶ್ ಹೇಗೆ(ಅದೂ ಡ್ಯಾನ್ಸ್‌ಕಿಂಗ್ ಅನ್ನಿಸಿಕೊಳ್ಳುವಷ್ಟರ ಮಟ್ಟಿಗೆ) ಡ್ಯಾನ್ಸ್ ಮಾಡುತ್ತಾರೆ? ಇಂಥದೊಂದು ಅಂಗವೈಕಲ್ಯ ಇವರಿಗೆ ಜೊತೆಯಾಗಿದ್ದು ಯಾವಾಗ ಮತ್ತು ಹೇಗೆ? ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾದದ್ದು ಹೇಗೆ? ಈ ಹಂತದಲ್ಲಿ ಅವರು ಎದುರಿಸಿದ ಸವಾಲು- ಸಂಕಟಗಳು ಎಂಥವು ಎಂಬಿತ್ಯಾದಿ ಪ್ರಶ್ನೆಗಳಿಗೆ ಕಮಲೇಶ್ ಪಟೇಲ್ ಅವರೇ ಉತ್ತರಿಸಿದ್ದು ಹೀಗೆ:'ನನ್ನದು ಬರೋಡಾ ರಾಜ್ಯದ ವಡೋದರಾ ಜಿಲ್ಲೆಗೆ ಹತ್ತಿರದ ಒಂದು ಹಳ್ಳಿ. ನಮ್ಮ ತಂದೆ ಕೃಷಿಕ. ಅಮ್ಮ, ಹೌಸ್‌ವೈಫ್. ಐದು ವರ್ಷಗಳವರೆಗೂ ನಾನು ಉಳಿದವರೆಂತೆಯೇ ಚೆನ್ನಾಗಿದ್ದೆ. ಅವತ್ತಿಗೆ ನಮಗಿದ್ದ ಕ್ರೇಜ್ ಅಂದರೆ, ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡುವುದು. ಡ್ಯಾನ್ಸ್ ಟೀಮ್‌ಗೆ ನಾನೇ ಲೀಡರ್ ಆಗಿದ್ದೆ. ಹೀಗಿರುವಾಗಲೇ ಏನಾಯಿತೆಂದರೆ, ತುಂಬ ಆಕಸ್ಮಿಕವಾಗಿ ನಾನು ಕಾಯಿಲೆ ಬಿದ್ದೆ. ಅಪ್ಪ, ಪರಿಚಯದ ಡಾಕ್ಟರ್ ಬಳಿಗೆ ಕರೆದೊಯ್ದರು. ಅವರು ಒಂದು ಇಂಜೆಕ್ಷನ್ ಚುಚ್ಚಿ, ಎಲ್ಲಾ ಸರಿಯಾಗುತ್ತೆ ಹೋಗಿ ಎಂದರು. ಮನೆಗೆ ಬಂದು ಮಲಗಿಕೊಂಡೆ. ಹೀಗೇ ಇಡೀ ದಿನ ಕಳೆದುಹೋಯಿತು. ಎದ್ದೇಳುವಷ್ಟು ಶಕ್ತಿಯೂ ಇರಲಿಲ್ಲ. ಕಡೆಗೊಮ್ಮೆ ತಡಬಡಾಯಿಸಿಕೊಂಡು ಎದ್ದು ಕೂತೆ, ಮರುಕ್ಷಣವೇ ತಲೆ ತಿರುಗಿ ಬಿದ್ದು ಬಿಟ್ಟೆ. ಗಾಬರಿಯಾದ ತಂದೆ, ತಕ್ಷಣವೇ ಬೇರೆ ಡಾಕ್ಟರ್ ಬಳಿ ಕರೆದೊಯ್ದರು. ಆ ವೈದ್ಯರು ಕೂಲಂಕಷವಾಗಿ ಪರೀಕ್ಷಿಸಿ ವಿಷಾದದಿಂದ ಹೇಳಿದರು: 'ಮಗೂಗೆ ಓವರ್‌ಡೋಸ್ ಔಷಧಿ ಕೊಟ್ಟಿದ್ದಾರೆ. ಜೊತೆಗೆ, ಕೊಟ್ಟಿರುವ ಔಷಧ ಕೂಡ ಹೆಚ್ಚು ಅಡ್ಡ ಪರಿಣಾಮ ಬೀರುವಂಥದ್ದೇ. ಹಾಗಾಗಿ, ಮೆದುಳಿನ ನರವ್ಯೂಹಕ್ಕೆ ಭಾರೀ ಹಾನಿಯಾಗಿದೆ. ಈ ಮಗುವಿನ ಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿವೆ. ಮುಂದೆ ಏನಾಗುತ್ತೋ ಹೇಳೋಕಾಗಲ್ಲ...ಅವತ್ತಿನಿಂದ ಒಂದೊಂದೇ ಆಸ್ಪತ್ರೆಗೆ ಅಲೆಯುವುದು ನಮ್ಮ ಕುಟುಂಬದವರ ಕೆಲಸವಾಯಿತು. ಯಾರೋ ಒಬ್ಬರು, ಬೆಂಗಳೂರಲ್ಲಿ ಇಂಥ ಕಾಯಿಲೇನ ವಾಸಿ ಮಾಡ್ತಾರೆ ಅಂದರು. ಮತ್ತೊಬ್ಬರು, ವಿಶಾಖಪಟ್ಟಣದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇದೆ ಅಂದರು.  ಇನ್ನೊಬ್ಬರು ಬಾಂಬೆಯ ದಿಕ್ಕಿಗೆ ಬೆರಳು ಮಾಡಿದರು. ಎಲ್ಲ ಕಡೆಗೂ ಹೋಗಿ ಬಂದಿದ್ದಾಯ್ತು. ಏನೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆ ಸುತ್ತುವ ಕಾರಣದಿಂದಲೇ ಎರಡು ವರ್ಷಗಳು ಕಳೆದುಹೋದವು. ಮುಂದೆ, ತಿರುಚಿಕೊಂಡಿದ್ದ, ಬಿದಿರು ಕಡ್ಡಿಯ ಗಾತ್ರಕ್ಕಿದ್ದ ಕಾಲುಗಳನ್ನು ಎಳೆದುಕೊಂಡೇ ಶಾಲೆಗೆ ಹೋದೆ. ಜೊತೆಗಿದ್ದ ಹುಡುಗರು ನನ್ನನ್ನು ಅನ್ಯಗ್ರಹದ ಜೀವಿಯೇನೋ ಎಂಬಂತೆ ನೋಡಿದರು. ಕುಂಟ ಎಂದು ಗೇಲಿ ಮಾಡಿದರು. ಚೊತ್ತ ಕಾಲಿನ ನನ್ಮಗನೇ ಎಂದು ಹಂಗಿಸಿದರು. ಅಂಥ ಸಂದರ್ಭದಲ್ಲೆಲ್ಲ ಸಂಕಟವಾಗ್ತಿತ್ತು. ಶಾಲೆಯಿಂದ ಹೊರಬಂದವನೇ, ಒಂದು ಕಡೆ ಕೂತು ಸಮಾಧಾನವಾಗುವಷ್ಟು ಅತ್ತುಬಿಡ್ತಿದ್ದೆ.ಹೀಗೇ ದಿನಗಳು ಕಳೆಯುತ್ತಿದ್ದವು. ದೈಹಿಕ ಅಂಗವೈಕಲ್ಯದ ಮಧ್ಯೆಯೂ ನಾನು ಚೆನ್ನಾಗಿ ಓದುತ್ತಿದ್ದೆ. ಆಗಲೇ ಒಂದು ದಿನ ನನ್ನೆದುರು ನಿಂತ ಅಪ್ಪ ಹೇಳಿದರು: 'ಭವಿಷ್ಯದಲ್ಲಿ ನೀನು ಯಾರಿಗೂ ಹೊರೆ ಆಗುವುದು ಬೇಡ ಮಗನೇ. ಡಿಗ್ರಿ ಮಾಡ್ಕೊಂಡು ಯಾವುದಾದ್ರೂ ಕೆಲಸಕ್ಕೆ ಸೇರ್ಕೋ.' ಅಪ್ಪನ ಮಾತುಗಳಲ್ಲಿ ಸತ್ಯವಿತ್ತು. ನನ್ನ ಭವಿಷ್ಯ ನನ್ನ ಕೈಲೇ ಇದೆ ಅಂದುಕೊಂಡು ಮತ್ತಷ್ಟು ಶ್ರದ್ಧೆಯಿಂದ ಓದಲು ಆರಂಭಿಸಿದೆ. ನೋಡ ನೋಡುತ್ತಲೇ ವರ್ಷಗಳು ಉರುಳಿದವು. ನಾನು, ಬಿ.ಕಾಂ. ಎರಡನೇ ವರ್ಷಕ್ಕೆ ಬಂದೆ. ನನ್ನ ವಿಕಲಾಂಗ ಬದುಕಿಗೆ ಮೊದಲ ತಿರುವು ಸಿಕ್ಕಿದ್ದೇ ಆಗ. ಪ್ರತಿ ವರ್ಷದಂತೆ ಆ ವರ್ಷವೂ ಗಣೇಶೋತ್ಸವ ಬಂತು. ಸಂಜೆಯಾದರೆ ಸಾಕು, ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಗುತ್ತಿದ್ದವು. ಹೆಚ್ಚಿನ ಡಿಮ್ಯಾಂಡ್ ಇದ್ದುದು ಡ್ಯಾನ್ಸ್ ಪ್ರೋಗ್ರಾಂಗಳಿಗೆ. ಒಂದು ಕಾಲಕ್ಕೆ ಡ್ಯಾನ್ಸ್ ಟೀಮ್‌ನ ಹೀರೋ ಅನ್ನಿಸಿಕೊಂಡಿದ್ದ ನಾನು, ಅಂಗವೈಕಲ್ಯದ ಕಾರಣಕ್ಕೆ ಮೂಲೆ ಸೇರಿದ್ದೆ. ನನ್ನ ತಂಡದ ಉಳಿದ ಸದಸ್ಯರೂ ಓದು, ಉದ್ಯೋಗದ ಕಾರಣದಿಂದ ಚದುರಿ ಹೋಗಿದ್ದರು. ಇಂಥ ಸಂದರ್ಭದಲ್ಲಿ ಅಸಹಾಯಕನಾಗಿ ಬೇರೆ ತಂಡದವರ ಕಾರ್ಯಕ್ರಮ ನೋಡುತ್ತ ಕೂರುವುದರ ಹೊರತಾಗಿ ಬೇರೆ ದಾರಿ ಇರಲಿಲ್ಲ. ಅದೊಂದು ಸಂಜೆ ಹೀಗೇ ಗಣೇಶನ ಮುಂದೆ ಕೂತಿದ್ದಾಗ ಯಾಕೆ ಅಂಥ ಫೀಲ್ ಬಂತೋ ಗೊತ್ತಿಲ್ಲ. ಅವತ್ತು ಮಂಗಳಾರತಿ ಮುಗಿಯುತ್ತಿದ್ದಂತೆಯೇ ದೇವರ ಎದುರು ಕೂತು ಕೇಳಿಯೇ ಬಿಟ್ಟೆ: 'ಭಗವಂತಾ, ಪಾರ್ಶ್ವವಾಯುವಿಗೆ ತುತ್ತಾದಾಗ ನನಗೆ ಬರೀ 5 ವರ್ಷ. ಹೆಳವನ ಸ್ಥಿತಿಯಲ್ಲಿಯೇ 17 ವರ್ಷ ಬದುಕಿ ಬಿಟ್ಟೆ. ದೇವರು ದಯಾಮಯಿ. ಆತ ನಮ್ಮಿಂದ ಒಂದು ಅವಕಾಶವನ್ನು ಕಿತ್ಕೊಂಡ್ರೆ ಅದಕ್ಕೆ ಬದಲಾಗಿ ನಾಲ್ಕು ಅವಕಾಶಗಳನ್ನು ಕರುಣಿಸಿರ್ತಾನೆ ಎಂದು ಎಲ್ಲರೂ ಹೇಳ್ತಾರೆ. ಅಂಥದೊಂದು ಅವಕಾಶದ ದಾರಿಯನ್ನು ನನಗೆ ಯಾಕೆ ತೋರಿಸಲಿಲ್ಲ ದೇವರೇ? ಕಾಲುಗಳು ಸ್ವಾಧೀನದಲ್ಲಿ ಇಲ್ಲದೆಯೂ ಡ್ಯಾನ್ಸ್ ಮಾಡುವಂಥ ಶಕ್ತಿ ನನಗೆ ಬರಲಿ ಎಂದು ಯಾಕೆ ಅನುಗ್ರಹಿಸಲಿಲ್ಲ ದೇವರೇ?ಸಂಕಟದಿಂದ, ಅಸಹನೆಯಿಂದ, ಭಕ್ತಿ ಮತ್ತು ಪ್ರೀತಿಯಿಂದ ನಾನು ಪ್ರಶ್ನಿಸುತ್ತಲೇ ಇದ್ದೆ. ದೇವರು ಮೌನವಾಗಿದ್ದ. ಆಗ, ಅದ್ಯಾವ ಪ್ರೇರಣೆಯಾಯಿತೋ ಗೊತ್ತಿಲ್ಲ. ಜೋತಾಡುವಂತಿದ್ದ ಎರಡೂ ಕಾಲುಗಳನ್ನು ಕುತ್ತಿಗೆಯ ಎರಡೂ ಬದಿಗೆ ಹಾಕಿಕೊಂಡೆ. ನಂತರ ಎರಡೂ ಕೈಗಳನ್ನು ನೆಲಕ್ಕೆ ಊರಿಕೊಂಡು ಸಾಕಷ್ಟು ದೂರ ಹೋಗಿಬಿಟ್ಟೆ. ಅಂದರೆ ಈ ಸಂದರ್ಭದಲ್ಲಿ, ಕಾಲುಗಳ ಕೆಲಸವನ್ನು ಕೈಗಳೇ ನಿರ್ವಹಿಸಿದ್ದವು. ಅಂದು ರಾತ್ರಿ ನನ್ನಷ್ಟಕ್ಕೆ ನಾನೇ ಯೋಚಿಸಿದೆ; ಕಾಲುಗಳು ಸರಿಯಾಗಿಲ್ಲ ನಿಜ. ಆದರೆ ಕೈಗಳು ಸರಿಯಾಗಿವೆ. ಗಟ್ಟಿಯಾಗಿವೆ. ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ನಾನೇಕೆ ಡ್ಯಾನ್ಸ್ ಮಾಡಬಾರದು?ನಾನು ತಡ ಮಾಡಲಿಲ್ಲ. ಕಾಲುಗಳನ್ನು ಹೆಗಲ ಮೇಲಕ್ಕೆ ನೂಕಿ ಕೈಗಳ ಸಹಾಯದಿಂದಲೇ ಸರಭರನೆ ನಡೆದಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಆನಂತರ, ಬರೋಡಾದಲ್ಲಿ ಡ್ಯಾನ್ಸ್ ಕಲಿಸುತ್ತಿದ್ದ ಮನು ಥಾಪಾ ಎಂಬುವರ ಬಳಿ ಹೋಗಿ, ಬೆಸ್ಟ್ ಡ್ಯಾನ್ಸರ್ ಅನ್ನಿಸಿಕೊಳ್ಳಬೇಕು ಅಂತ ಆಸೆಯಿದೆ ಸರ್. ಶ್ರದ್ಧೆಯಿಂದ ಕಲೀತೇನೆ. ದಯವಿಟ್ಟು ನನಗೆ ಡ್ಯಾನ್ಸ್ ಹೇಳಿಕೊಡಿ ಎಂದು ಪ್ರಾರ್ಥಿಸಿದೆ. ಅವರು ನನ್ನನ್ನು ಅನುಕಂಪದಿಂದ ನೋಡಿ ಹೇಳಿದ್ರು: 'ಡ್ಯಾನ್ಸ್ ಮಾಡಲಿಕ್ಕೆ ಕಾಲುಗಳು ಗಟ್ಟಿ ಇರಬೇಕು. ಅಂಥ ಸೌಭಾಗ್ಯ ನಿನಗಿಲ್ಲ. ಹಾಗಾಗಿ ತಪ್ಪು ತಿಳೀಬೇಡಪ್ಪಾ. ವಾಪಸ್ ಹೋಗಿ ಬಿಡು.' ನಾನು ತಕ್ಷಣವೇ -ಸರ್, ಒಮ್ಮೆ ನನ್ನ ಮೂವ್‌ಮೆಂಟ್ಸ್ ನೋಡಿ ಬಿಡಿ. ಆನಂತರ ಉಳಿದ ಮಾತು' ಎಂದವನೇ ಕೈಗಳ ಸಹಾಯದಿಂದಲೇ ನಿಲ್ಲುವ, ಜಿಗಿದಾಡುವ, ಸರಬರ ಓಡಾಡುವುದನ್ನು ತೋರಿಸಿದೆ. ಇದರಿಂದ ಪ್ರಭಾವಿತರಾದ ಮನು ಥಾಪ ಹೇಳಿದರು: 'ನನಗೆ ಗೊತ್ತಿರುವುದನ್ನೆಲ್ಲ ನಿಂಗೆ ಹೇಳಿಕೊಡ್ತೀನಿ. ನಾಳೆಯಿಂದಲೇ ತರಗತಿಗೆ ಬಾ...'ಮನು ಥಾಪ ಅವರು ಇದ್ದುದು ವಡೋದರಾದಲ್ಲಿ. ನಮ್ಮ ಊರಿಂದ ಈ ನಗರಕ್ಕೆ 20 ಕಿ.ಮೀ. ದೂರವಿತ್ತು. ಡ್ಯಾನ್ಸ್ ಕಲಿಯಬೇಕೆಂದರೆ, ದಿನವೂ ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಡ್ಯಾನ್ಸ್  ಕಲಿಯುತ್ತೇನೆ ಎಂದಿದ್ದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಹಾಗಾಗಿ, ಕಂಪ್ಯೂಟರ್ ಕ್ಲಾಸ್‌ಗೆ ಸೇರಿಕೊಂಡಿದ್ದೇನೆ ಎಂದು ಸುಳ್ಳು ಹೇಳಿದೆ. ಕೆಲವು ಸಂದರ್ಭಗಳಲ್ಲಿ ಡ್ಯಾನ್ಸ್ ತರಗತಿಗೆ ಹೋಗುವಾಗ/ ಬರುವಾಗ, ಬಸ್‌ಗಳು ಮಿಸ್ ಆಗುತ್ತಿದ್ದವು. ಆಗೆಲ್ಲಾ, ಬೈಕ್ ಸವಾರರನ್ನು ವಿನಂತಿಸಿಕೊಂಡು ಹೇಗೋ ಊರು ತಲುಪಿಕೊಳ್ಳುತ್ತಿದ್ದೆ.ಹೀಗೇ ಒಂದು ವರ್ಷ ಕಳೆಯಿತು. ಈ ಹೊತ್ತಿಗೆ, ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ಡ್ಯಾನ್ಸ್ ಮಾಡುವುದರಲ್ಲಿ ಪಳಗಿದ್ದೆ. ಆಗಲೇ ಮನು ಥಾಪ ಹೇಳಿದರು: 'ನೀನು ಕಲಿಯಬೇಕಾದ್ದೆಲ್ಲ ಮುಗಿದಿದೆ. ಈಗ ಒಂದು ಶೋ ಏರ್ಪಡಿಸೋಣ. ನಿನ್ನ ಸಾಮರ್ಥ್ಯ ಏನು ಎಂಬುದನ್ನು ವಡೋದರಾದ ಜನರಿಗೆ ತೋರಿಸೋಣ'. ಮುಂದಿನ ಕೆಲವೇ ದಿನಗಳಲ್ಲಿ ಶೋ ನಡೆದದ್ದು ಮಾತ್ರವಲ್ಲ, ಅದು ಸೂಪರ್‌ಹಿಟ್ ಆಯಿತು. ನನ್ನ ಈ ಹೊಸ ಅವತಾರ, ಅದಕ್ಕೆ ಸಿಕ್ಕ ಪ್ರೋತ್ಸಾಹದಿಂದ ಅಪ್ಪ-ಅಮ್ಮನೂ ಖುಷಿಯಾಗಿದ್ದರು. ಮುಂದೆ ಗಣೇಶೋತ್ಸವವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಆಹ್ವಾನ ಬರತೊಡಗಿತು. ಆಗಲೇ ನನ್ನ ಬದುಕಿಗೆ ತುಂಬ ಅಗತ್ಯವಿದ್ದ ವ್ಹೀಲ್ ಚೇರ್ ಖರೀದಿಸಿದೆ. ಕಡೆಗೂ ಹತ್ತು ಜನ ಗುರುತಿಸುವಂಥ ಡ್ಯಾನ್ಸರ್ ಆದೆ ಎಂದು ಸಂಭ್ರಮಿಸುತ್ತಿದ್ದಾಗಲೇ ನನ್ನ ಬದುಕಿನ ಬಹುದೊಡ್ಡ ತಿರುವಿಗೆ ಕಾರಣವಾದ ಸಂದರ್ಭವೂ ಜೊತೆಯಾಯಿತು. ಹಿರಿಯರೊಬ್ಬರು ಝೀ ಚಾನೆಲ್‌ನವರು ನಡೆಸುವ ಡ್ಯಾನ್ಸ್  ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದರು. ತಕ್ಷಣವೇ ಅರ್ಜಿ ಹಾಕಿದೆ.ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನ ಮೊದಲ ಸುತ್ತಿನ ಕಾರ್ಯಕ್ರಮ ನಡೆದದ್ದು ಅಹಮದಾಬಾದ್‌ನಲ್ಲಿ. ಕೈಗಳನ್ನೇ ಕಾಲುಗಳಂತೆ ಬದಲಿಸಿಕೊಂಡು ನಾನು ಡ್ಯಾನ್ಸ್ ಮಾಡುವುದನ್ನು ತೀರ್ಪುಗಾರರು ಒಪ್ಪದಿದ್ದರೆ ಏನು ಮಾಡುವುದು ಎಂಬ ಅಳುಕು ಕಾಡಿತ್ತು. ಆದರೆ ಅಂಥದೇನೂ ಆಗಲಿಲ್ಲ. ನನ್ನ ಪ್ರದರ್ಶನ ಕಂಡು ಖುಷಿಯಾದ ತೀರ್ಪುಗಾರರು ಪೂರ್ಣ ಅಂಕ ನೀಡಿ ಮುಂಬಯಿಯಲ್ಲಿ ನಡೆದ ಅಂತಿಮ ಹಂತದ ಕಾರ್ಯಕ್ರಮಕ್ಕೆ ಕಳಿಸಿದರು. ಅಲ್ಲಿ ತೀರ್ಪುಗಾರರ ಸ್ಥಾನದಲ್ಲಿದ್ದವರು ಬಾಲಿವುಡ್‌ನ ಡಿಸ್ಕೋ ಕಿಂಗ್ ಎಂದೇ ಹೆಸರಾಗಿದ್ದ ಮಿಥುನ್ ಚಕ್ರವರ್ತಿ. ನಾನು ವೇದಿಕೆಗೆ ಹೋದಾಗ, ಮಿಥುನ್ ಅಯ್ಯೋ ಪಾಪ ಎಂಬಂತೆ ನೋಡಿದರು. ಅದು ನನಗೂ ಅರ್ಥವಾಯಿತು. ಇರಲಿ, ಇದೆಲ್ಲಾ ನನ್ನ ಸತ್ವ ಪರೀಕ್ಷೆಯ ಕಾಲ ಎಂದುಕೊಂಡು ತನ್ಮಯನಾಗಿ ಡ್ಯಾನ್ಸ್ ಮಾಡಿದೆ. ಕಾರ್ಯಕ್ರಮ ಮುಗಿದ ತಕ್ಷಣ ಮಿಥುನ್ ಚಕ್ರವರ್ತಿಯವರು ವೇದಿಕೆಯಿಂದ ಸೀದಾ ನನ್ನ ಬಳಿಗೆ ಬಂದರು. ನನ್ನ ಪಕ್ಕದಲ್ಲೇ ಕೂತರು. ಕೈ ಮುಗಿದರು. ಕೈ ಕುಲುಕಿದರು. ಆನಂತರ, ಈ ದೇಶದ ನಿಜವಾದ ಡ್ಯಾನ್ಸ್ ಕಿಂಗ್ ಅಂದರೆ ನೀವೇ. ನಿಮ್ಮ ಸಾಧನೆಯ ಮುಂದೆ ನಾವೆಲ್ಲಾ ಸಣ್ಣವರು ಎಂದರು. ಈ ಕಾರ್ಯಕ್ರಮ, ನನ್ನನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸಿತು. ಪರಿಣಾಮ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಸೆಲೆಬ್ರಿಟಿ ಆಗಿಬಿಟ್ಟೆ. ತಮಗೂ ಕಾರ್ಯಕ್ರಮ ನೀಡುವಂತೆ ಸಂಘ- ಸಂಸ್ಥೆಗಳು ದುಂಬಾಲು ಬಿದ್ದವು. ಒಂದು ಕಾಲದಲ್ಲಿ ಬಸ್ ಟಿಕೆಟ್‌ಗೂ ಹಣವಿಲ್ಲದೆ ಪರದಾಡುತ್ತಿದ್ದವನಿಗೆ ವಿಮಾನದಲ್ಲಿ ಓಡಾಡುವ ಸೌಭಾಗ್ಯವೂ ಒದಗಿ ಬಂತು. ಈ ಮಧ್ಯೆ ಸೋನಿ ಚಾನೆಲ್‌ನ ಬೂಗಿ ವೂಗಿ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದೆ.'ಇದೆಲ್ಲದರ ಒಟ್ಟು ಪರಿಣಾಮ ಎಂಬಂತೆ, ಅಮೆರಿಕ ಹಾಗೂ ಇಂಗ್ಲೆಂಡ್‌ಗಳಿಂದಲೂ ಡ್ಯಾನ್ಸ್ ಶೋ ಕೊಡಲು ಆಹ್ವಾನ ಬಂತು. ಇಂಗ್ಲೆಂಡ್‌ನಲ್ಲಿ ಒಂದು ಸ್ವಾರಸ್ಯ ನಡೆಯಿತು. ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಅಭಿನಂದಿಸಲು ಬಂದರು. ಹಾಗೆ ಬಂದವರ ಪೈಕಿ ಕಾಲುಗಳು ಸ್ವಾಧೀನದಲ್ಲಿಲ್ಲದ ಮಹಿಳೆಯೂ ಇದ್ದಳು. ಅದುವರೆಗೂ ಆಕೆ ಕೂತ ಜಾಗದಿಂದ ಕದಲುತ್ತಿರಲ್ಲಿಲ್ಲವಂತೆ. ಅಂಥವಳು, ನನ್ನ ಡ್ಯಾನ್ಸ್ ನೋಡಿದ ನಂತರ, ತೆವಳಲು, ಎದ್ದು ನಿಲ್ಲಲು ಪ್ರಯತ್ನಿಸಿದ್ದಳು. ಅದರಲ್ಲಿ ಯಶಸ್ವಿಯೂ ಆಗಿದ್ದಳು. ಇದನ್ನೆಲ್ಲ ಆಕೆಯ ಕುಟುಂಬದವರು ವಿವರಿಸಿದಾಗ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ; 'ಭಗವಂತಾ, ನನ್ನ ಮೂಲಕ ಅಂಗವಿಕಲರಿಗೆ ಒಂದು ಚಿಕ್ಕ ಸಂದೇಶ ಕಳಿಸಬೇಕು ಎಂಬ ಸದಾಶಯದಿಂದಲೇ ನನ್ನ ಕಾಲುಗಳ ಬಲವನ್ನು ಕಿತ್ತುಕೊಂಡೆಯಾ?'ಈಗ ಏನಾಗಿದೆ ಗೊತ್ತಾ ಸಾರ್? ಎಲ್ಲ ಅರ್ಥದಲ್ಲೂ ನಾನು ಸೆಲೆಬ್ರಿಟಿ ಆಗಿದ್ದೀನಿ.  ಕಾರು ತಗೊಂಡಿದೀನಿ. ಡ್ರೈವರ್, ಮೆನೇಜರ್‌ನ ಇಟ್ಕೊಂಡಿದ್ದಿನಿ. ಒಂದು ಕಾಲದಲ್ಲಿ ಏ ಕುಂಟಾ, ಏ ಹೆಳವಾ ಎಂದು ಕರೆದರಲ್ಲ; ಅದೇ ಜನ ಈಗ ನನ್ನ ಆಟೋಗ್ರಾಫ್‌ಗಾಗಿ ಕ್ಯೂ ನಿಂತಿದ್ದಾರೆ. ಪ್ರಿನ್ಸ್ ಆಫ್ ಬರೋಡ ಎಂಬ ಬಿರುದು ನೀಡಿದ್ದಾರೆ. ರಾಷ್ಟ್ರಪತಿಗಳ ಮುಂದೆ ಪ್ರದರ್ಶನ ನೀಡುವ, ಅವರಿಂದ ಪ್ರಶಸ್ತಿ ಪಡೆವ ಸೌಭಾಗ್ಯವೂ ನನ್ನದಾಗಿದೆ. ಝೀ ಮತ್ತು ಸೋನಿ ಚಾನೆಲ್‌ಗಳ ಕೃಪೆಯಿಂದಾಗಿ ದೇಶದ ಹಲವು ನಗರಗಳಿಂದ ಕಾರ್ಯಕ್ರಮ ನೀಡಲು ಆಫರ್ ಬರುತ್ತಿದೆ. ಉಹುಂ, ನನಗೆ ದುಡ್ಡು ಮಾಡಬೇಕೆಂಬ ಆಸೆಯಿಲ್ಲ. ಅಂಗವೈಕಲ್ಯದಿಂದ ಹತಾಶರಾಗಿರುವ ಮಂದಿಗೆ ಬದುಕಲ್ಲಿ ಭರವಸೆ ಮೂಡಿಸಬೇಕು ಎಂಬುದೇ ನನ್ನ ಆಸೆ. ಪ್ರತಿ ಕಾರ್ಯಕ್ರಮದಲ್ಲೂ ನನಗೆ ಸಿಗುತ್ತಲ್ಲ, ಆ ಸಂಭಾವನೆಯಲ್ಲಿ ಅರ್ಧವನ್ನು ಅಂಗವಿಕಲರ ಏಳಿಗೆಗೆ ದುಡಿಯುವ ಸಂಘ ಸಂಸ್ಥೆಗಳಿಗೆ ದಾನ ಮಾಡಿಬಿಡ್ತೀನಿ. ಅಂಗವಿಕಲ ಮಕ್ಕಳ ಸಹಾಯಾರ್ಥ ಕಾರ್ಯಕ್ರಮ ನಡೆಸಿದ್ರೆ ಉಚಿತವಾಗಿ ಶೋ ಕೊಡಲಿಕ್ಕೂ ನಾನು ರೆಡಿ ಇದ್ದೀನಿ...' ಎನ್ನುತ್ತಾ ಮಾತು ಮುಗಿಸಿದರು ಕಮಲೇಶ್ ಪಟೇಲ್.***ಇದಿಷ್ಟನ್ನೂ ಓದಿದವರಿಗೆ ಕಮಲೇಶ್ ಪಟೇಲ್ ಹೇಗೆ ಡ್ಯಾನ್ಸ್ ಮಾಡುತ್ತಾರೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಸರಳವಾಗಿ ಹೀಗೆ ಉತ್ತರಿಸಬಹುದು. ಆತ, ಕಪ್ಪೆಯಂತೆ ಕುಪ್ಪಳಿಸುತ್ತಲೇ ವೇದಿಕೆಗೆ ಬರುತ್ತಾರೆ. ನಂತರ ನಾವೆಲ್ಲ ಹೆಗಲ ಮೇಲೆ ಟವಲ್ ಎಸೆದುಕೊಳ್ಳುತ್ತೇವಲ್ಲ; ಅಷ್ಟೇ ಸಲೀಸಾಗಿ ತಮ್ಮ ಸೊಟ್ಟಂಪಟ್ಟ ಕಾಲುಗಳನ್ನು ಕುತ್ತಿಗೆಯ ಎರಡೂ ಕಡೆಗೆ ಹಾಕಿಕೊಳ್ಳುತ್ತಾರೆ. ನಂತರದ ಕ್ಷಣದಿಂದಲೇ ಅವರ ಕೈಗಳು 'ಕಾಲುಗಳಾಗಿ' ಬದಲಾಗಿ, ಕುಣಿಯುತ್ತವೆ. ಗುಂಗು ಹಿಡಿಸುತ್ತವೆ. ಒಂದು ಅಪೂರ್ವ ನಾಟ್ಯೋತ್ಸವಕ್ಕೆ ಸಾಕ್ಷಿಯಾಗುತ್ತವೆ. ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ kamlesh patel Dance ಎಂದು ಹುಡುಕಿದರೆ, ಈ ಮಹಾನ್ ಸಾಧಕನ ಡ್ಯಾನ್ಸ್ ಇರುವ ವಿಡಿಯೋ ಸಿಗುತ್ತದೆ. ನೋಡಿ ಕಣ್ತುಂಬಿಸಿಕೊಳ್ಳಿ. 09898399358 ನಂಬರಿನಲ್ಲಿ, dancewithkamlesh3@gmail.com ನಲ್ಲಿ ಈತ ಮಾತಿಗೂ ಸಿಗುತ್ತಾರೆ. ಸಾಧ್ಯವಾದರೆ ಅಭಿನಂದನೆ ಹೇಳಿ.

- ಎ.ಆರ್. ಮಣಿಕಾಂತ್armanikanth@gmail.com